ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಪದಚ್ಯುತಿ
ಬೆಂಗಳೂರು, ಜುಲೈ 30: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಅವರು ಪದಚ್ಯುತಿಗೊಂಡಿದ್ದಾರೆ. ಒಂದುವರೆ ವರ್ಷದ ಆಡಳಿತ ನಡೆಸಿದ ಬಳಿಕ ಬೆಟ್ಟೇಗೌಡ ಅವರು ತಮ್ಮ ಸ್ಥಾನವನ್ನು ತೊರೆಯುವ ಕಾಲ ಸನ್ನಿಹಿತವಾಗಿದೆ.
ಒಕ್ಕಲಿಗರ ಸಂಘದಲ್ಲಿ ಇಂದು(ಜುಲೈ 30) ನಡೆದ ಮಹತ್ವದ ಸಭೆಯಲ್ಲಿ ಬೆಟ್ಟೇಗೌಡರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. 35 ಸದಸ್ಯರ ಪೈಕಿ 19 ನಿರ್ದೇಶಕರು ಬೆಟ್ಟೇಗೌಡ ವಿರುದ್ಧ ಜುಲೈ 18ರಂದು ಅವಿಶ್ವಾಸ ನಿರ್ಣಯ ಮಂಡಿಸಿದ್ದರು.
ಬೆಟ್ಟೇಗೌಡ ಅವರಿಗೆ ವಿಶ್ವಾಸಮತ ಸಾಧಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ವಿಶ್ವಾಸ ಗಳಿಸುವಲ್ಲಿ ಬೆಟ್ಟೇಗೌಡ ಅವರು ವಿಫಲರಾದ ಹಿನ್ನಲೆಯಲ್ಲಿ, ಈಗ ಹೊಸದಾಗಿ ಚುನಾವಣೆ ನಡೆಯಬೇಕಿದೆ.

ರಾಜ್ಯ ಒಕ್ಕಲಿಗರ ಸಂಘಕ್ಕೆ ಅಧ್ಯಕ್ಷರ ಆಯ್ಕೆಯಾಗಿ ಆಗಸ್ಟ್ 07ರಂದು ಮತ್ತೆ ಚುನಾವಣೆ ನಡೆಸಲಾಗುತ್ತದೆ.
ಸಭೆಯಲ್ಲಿ ಹಂಗಾಮಿ ಕಾರ್ಯದರ್ಶಿಯಾಗಿ ನಾರಾಯಣಮೂರ್ತಿ ಅವರನ್ನು ನೇಮಕ ಮಾಡಲಾಗಿದೆ ಎಂದು ನಿರ್ದೇಶಕ ಶಿವಲಿಂಗಯ್ಯ ತಿಳಿಸಿದ್ದಾರೆ.
ಫ್ಲಾಶ್ ಬ್ಯಾಕ್ : ಕೆ. ಆರ್ ರಸ್ತೆಯಲ್ಲಿರುವ ಒಕ್ಕಲಿಗರ ಸಂಘದಲ್ಲಿ ನಡೆದ ಮತದಾನದಲ್ಲಿ ಬೆಟ್ಟೇಗೌಡ ಅವರು 2017ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿ ಆ.ದೇವೇಗೌಡ, ಡಾ.ಬಿ.ಶಿವಲಿಂಗಯ್ಯ ಚುನಾಯಿತರಾಗಿದ್ದರು.
ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅಪ್ಪಾಜಿ ಗೌಡ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಭಾರಿ ಬೆಂಬಲ ವ್ಯಕ್ತವಾಗಿತ್ತು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಡಾ. ಅಪ್ಪಾಜಿ ಗೌಡ ಪದಚ್ಯುತಗೊಳಿಸಲಾಗಿತ್ತು. ಈಗ ಬೆಟ್ಟೇಗೌಡರಿಗೂ ಅದೇ ಸ್ಥಾನ ಬಂದೊದಗಿದೆ.












Click it and Unblock the Notifications