ರಾಜಕೀಯಕ್ಕೆ ರಜನಿಕಾಂತ್ : ಕರ್ನಾಟಕದ ನಾಯಕರು ಏನು ಹೇಳಿದರು?
Recommended Video

ಬೆಂಗಳೂರು, ಡಿಸೆಂಬರ್ 31 : ತಮಿಳುನಾಡು ರಾಜಕೀಯಕ್ಕೆ ನಟ ರಜನಿಕಾಂತ್ ಪಾದಾರ್ಪಣೆ ಮಾಡಿದ್ದಾರೆ. ಕರ್ನಾಟಕ ಬಿಜೆಪಿಯ ಹಲವು ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಯಲಹಂಕದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ನಾಯಕರು, ರಜನಿಕಾಂತ್ ನಿರ್ಧಾರ ಸ್ವಾಗತಿಸಿದರು. ಮುಂದೆ ತಮಿಳುನಾಡಿನಲ್ಲಿ ಬಿಜೆಪಿಗೆ ಅವರು ಬೆಂಬಲ ನೀಡಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಭಾನುವಾರ ಚೆನ್ನೈನಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ಸಮಯದಲ್ಲಿ ಹೊಸ ಪಕ್ಷವನ್ನು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ.
ಪಕ್ಷ ಸ್ಥಾಪನೆ ಮಾಡಿದ ನಂತರ ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲಿ, 40 ಲೋಕಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡುವುದಾಗಿ ರಜನಿಕಾಂತ್ ಹೇಳಿದ್ದಾರೆ. ಆದರೆ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಯಾರು, ಏನು ಹೇಳಿದರು?..ಚಿತ್ರಗಳಲ್ಲಿ ನೋಡಿ..

ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, 'ರಜನಿಕಾಂತ್ ರಾಜಕೀಯ ಪ್ರವೇಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರಿಗೆ ಅಲ್ಲಿ ಅವಕಾಶ ಬಂದಿದೆ. ರಾಜಕೀಯ ಬಂದಿದ್ದಾರೆ, ಇದು ಕರ್ನಾಟಕದಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ' ಎಂದರು.

ಪ್ರತಿಯೊಬ್ಬ ಪ್ರಜೆಯೂ ಸಕ್ರಿಯರಾಗಬೇಕು
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, 'ಪ್ರತಿಯೊಬ್ಬ ಪ್ರಜೆಯೂ ರಾಜಕೀಯದಲ್ಲಿ ಸಕ್ರಿಯರಾಗಬೇಕು. ಚುನಾಯಿತ ಪ್ರತಿನಿಧಿಗಳ ಜೊತೆ ಗುರುತಿಸಿಕೊಳ್ಳುವುದಕ್ಕಿಂತ ಅವರೇ ಚುನಾಯಿತರಾದರೆ ಎಲ್ಲ ಎಲ್ಲ ಅರ್ಥವಾಗುತ್ತದೆ. ಅವರ ರಾಜಕೀಯ ಪ್ರವೇಶವನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ' ಎಂದರು.

ಕನ್ನಡಿಗರು ರಾಜಕೀಯಕ್ಕೆ ಬರುವುದು ಸಂತಸ ತಂದಿದೆ
'ಬಹಳ ವರ್ಷಗಳ ಹಿಂದೆ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತಿತ್ತು. ನಾವು ಸಾಕಷ್ಟು ಬಾರಿ ನಂಬಿರಲಿಲ್ಲ. ಈಗ ಅದು ನಿಜವಾಗಿದೆ. ತಮಿಳುನಾಡಿನ ರಾಜಕೀಯದಲ್ಲಿ ಅವರು ಸುಂಟರಗಾಳಿಯಂತೆ ಬರುತ್ತಿದ್ದಾರೆ. ಮೂಲತಃ ಕನ್ನಡಿಗರೊಬ್ಬರು ರಾಜಕೀಯಕ್ಕೆ ಬರುವುದು ಸಂತಸ ತಂದಿದೆ' ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಸಂತಸದ ಸಂಗತಿ
ವಿಧಾನಪರಿಷತ್ ಸದಸ್ಯೆ ತಾರಾ ಮಾತನಾಡಿ, 'ರಜನಿಕಾಂತ್ ರಾಜಕೀಯ ಪ್ರವೇಶ ಮಾಡಿರುವುದು ಸಂತಸದ ಸಂಗತಿ. ಆ ರಾಜ್ಯದಲ್ಲಿ ಚಿತ್ರರಂಗದವರು ರಾಜಕೀಯ ಪ್ರವೇಶ ಮಾಡುವುದು ಹೊಸ ವಿಚಾರವಲ್ಲ' ಎಂದು ಹೇಳಿದರು.

ಅಭಿಮಾನ ಮತವಾಗಿ ಬದಲಾಗುತ್ತಾ?
ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, 'ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬಹು ದೊಡ್ಡ ನಟ ರಜನಿಕಾಂತ್. ಅಭಿಮಾನ ಮತವಾಗಿ ಬದಲಾಗಲಿದೆಯೇ? ಎಂದು ಕಾದು ನೋಡಬೇಕು' ಎಂದರು.












Click it and Unblock the Notifications