ಚಾಮರಾಜನಗರದಲ್ಲಿ ಮಳೆ ಬಂತು ಮಳೆ, ರೈತಾಪಿ ವರ್ಗಕ್ಕೆ ಹರ್ಷ
ಚಾಮರಾಜನಗರ, ಮೇ 29: ಬಿಸಿಲಿನ ತಾಪದಿಂದ ತತ್ತರಿಸುತ್ತಿದ್ದ ಚಾಮರಾಜನಗರ ಜಿಲ್ಲೆಯನ್ನು ಶನಿವಾರ, ಭಾನುವಾರ ಸುರಿದ ಮಳೆ ತಂಪಾಗಿಸಿದೆ.
ರಭಸದಿಂದ ಸುರಿದ ಗಾಳಿ ಮಳೆಗೆ ಕೆಲವೆಡೆ ಮರಗಳು ನೆಲಕ್ಕುರುಳಿ ಒಂದಷ್ಟು ಹಾನಿಯಾಗಿದ್ದರೆ, ರೈತಾಪಿ ವರ್ಗಕ್ಕೆ ಹರ್ಷ ತಂದಿದೆ. ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆ ಸುರಿದಿದ್ದು, ಮುಗಿಲತ್ತ ದೃಷ್ಠಿ ನೆಟ್ಟಿದ್ದ ರೈತಾಪಿ ಮಂದಿ ನೆಮ್ಮದಿಯುಸಿರು ಬಿಟ್ಟಿದ್ದಾರೆ.

ಇನ್ನು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಬಳಿ ಮರವೊಂದು ಬೈಕ್ ಮೇಲೆ ಬಿದ್ದ ಹಿನ್ನಲೆಯಲ್ಲಿ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ರಸ್ತೆಯಲ್ಲಿ ಬಿದ್ದ ಮರ ತೆರವುಗೊಳಿಸದ ಹಿನ್ನಲೆಯಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಮತ್ತೊಂದೆಡೆ ನಿಲ್ಲಿಸಿದ ಕಾರಿನ ಮೇಲೆ ಮರದ ಕೊಂಬೆ ಬಿದ್ದಿದ್ದರಿಂದ ಕಾರಿನ ಗಾಜು ಪುಡಿಪುಡಿಯಾಗಿದೆ.

ರೈತಾಪಿ ವರ್ಗಕ್ಕೆ ಸಂತಸ: ಜಿಲ್ಲೆಯ ಗಡಿ ಭಾಗದಲ್ಲೂ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ. ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ಧಾನ್ಯಗಳನ್ನು ಬೆಳೆಯಲು ಈ ಪ್ರದೇಶ ಸೂಕ್ತವಾಗಿದೆ.

ಮಳೆ ಇದೇ ರೀತಿ ಬಿದ್ದರೆ ಕೃಷಿಗೆ ಅನುಕೂಲವಾಗುತ್ತದೆ ಅಲ್ಲದೆ ದನಗಳಿಗೆ ಮೇವು ಸಿಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ. ಕಳೆದ ಕೆಲವು ಸಮಯಗಳಿಂದ ಬಿಸಿಲಿನ ಧಗೆಯಿಂದ ಬೆಂದಿದ್ದ ಜನಕ್ಕೆ ಮಳೆ ಬಂದಿರುವುದರಿಂದ ವಾತಾವರಣ ತಂಪಾಗಿದ್ದು ನೆಮ್ಮದಿ ತಂದಿದೆ.












Click it and Unblock the Notifications