ಸೆಲ್ಫೀ ಮೋಜಿಗೆ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಬಲಿ
ರಾಮನಗರ, ಅಕ್ಟೋಬರ್ 03 : ಸೆಲ್ಫೀ ತೆಗೆಯಲು ಹೋದ ಮೂವರು ವಿದ್ಯಾರ್ಥಿಗಳು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಬಿಡದಿ ಬಳಿ ನಡೆದಿದೆ. ಮೃತಪಟ್ಟರು ಬೆಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ರಾಮನಗರ ಜಿಲ್ಲೆಯ ಬಿಡದಿಯ ವಂಡರ್ ಲಾ ಗೇಟ್ ಸಮೀಪ ಈ ದುರ್ಘಟನೆ ನಡೆದಿದೆ. ರೈಲು ಬರುತ್ತಿದ್ದಾಗ ಸೆಲ್ಫೀ ತೆಗೆಯಲು ಹೋದ ವಿದ್ಯಾರ್ಥಿಗಳು ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಮೂರು ದೇಹಗಳು ರೈಲಿಗೆ ಸಿಲುಕಿ ಛಿದ್ರವಾಗಿವೆ

ಮೃತಪಟ್ಟವರನ್ನು ಕೋರಮಂಗಲದ ನಿವಾಸಿ ಪ್ರಭು, ಹುಳಿಮಾವು ನಿವಾಸಿ ರೋಹಿತ್ ಮತ್ತು ಆನಂದ್ ಎಂದು ಗುರುತಿಸಲಾಗಿದೆ. ಈ ಮೂವರು ಜಯನಗರದ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಮಂಗಳವಾರ ಬೆಳಗ್ಗೆ ಮೂವರು ವಂಡರ್ ಲಾಗೆ ಬೈಕ್ನಲ್ಲಿ ಆಗಮಿಸಿದ್ದರು. ಮೈಸೂರು ರಸ್ತೆಯಿದ ವಂಡರ್ ಲಾಗೆ ಹೋಗುವ ಹಾದಿಯಲ್ಲಿ ಮಂಚನಾಯಕನಹಳ್ಳಿಯ ರೈಲ್ವೆ ಸೇತುವೆ ಬಳಿ ಬೈಕ್ ನಿಲ್ಲಿಸಿ, ಹಳಿ ಮೇಲೆ ನಿಂತು ಸೆಲ್ಫೀ ತೆಗೆದುಕೊಳ್ಳುತ್ತಿದ್ದರು.
ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಗೋಲ್ ಗುಂಬಜ್ ಎಕ್ಸ್ಪ್ರೆಸ್ ರೈಲು ಬಂದಾಗ ಸೆಲ್ಫೀ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ರೈಲು ಡಿಕ್ಕಿ ಹೊಡೆದಿದ್ದು, ಮೂವರನ್ನು ಕೆಲವು ದೂರದ ವರೆಗೆ ಎಳೆದುಕೊಂಡು ಹೋಗಿದ್ದು, ದೇಹಗಳು ಛಿದ್ರವಾಗಿವೆ.












Click it and Unblock the Notifications