ಡಿಕೆಶಿ ಆಪ್ತರ ಮೇಲೆ ಸಿಬಿಐ ದಾಳಿ, ಕೋರ್ಟ್ಗೆ ವರದಿ ಸಲ್ಲಿಕೆ
ಬೆಂಗಳೂರು, ಜೂನ್ 01 : ಡಿ.ಕೆ.ಶಿವಕುಮಾರ್ ಆಪ್ತರ ಮನೆ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯಕ್ಕೆ ವರದಿ ನೀಡಿದೆ. ಗುರುವಾರ ರಾಜ್ಯದ 5 ಕಡೆ ಸಿಬಿಐ ದಾಳಿ ನಡೆದಿತ್ತು.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿಗಳು ಶುಕ್ರವಾರ ದಾಳಿಯ ಕುರಿತು ವರದಿ ನೀಡಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ನೀಡಲಾಗಿದೆ.
ಡಿಕೆಶಿ ಒಬ್ಬಂಟಿಯಲ್ಲ, ಕಾಂಗ್ರೆಸ್ ಪಕ್ಷ ಜತೆಗಿದೆ: ಧೈರ್ಯ ತುಂಬಿದ ಸಿದ್ದರಾಮಯ್ಯ
ನೋಟುಗಳ ನಿಷೇಧವಾದ ಸಂದರ್ಭದಲ್ಲಿ ರಾಮನಗರದ ಕಾರ್ಪೊರೇಷನ್ ಬ್ಯಾಂಕ್ನಲ್ಲಿ 10 ಲಕ್ಷ ರೂ. ನೋಟನ್ನು ಬದಲಾವಣೆ ಮಾಡಲಾಗಿದೆ ಎಂಬುದು ಆರೋಪ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾಮನಗರ, ಕನಕಪುರ ಸೇರಿದಂತೆ 5 ಕಡೆ ಸಿಬಿಐ ದಾಳಿ ನಡೆದಿತ್ತು.
250 ನಕಲಿ ವೋಟರ್ ಐಡಿಗಳನ್ನು ತೆಗೆದುಕೊಂಡು ಹೋಗಿ 10 ಲಕ್ಷ ರೂ. ಹಳೆಯ ನೋಟುಗಳನ್ನು ಬದಲಾವಣೆ ಮಾಡಲಾಗಿದೆ ಎಂಬುದು ಆರೋಪ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಆಪ್ತ ಪದ್ಮನಾಭಯ್ಯ ಅವರು ಈ ಪ್ರಕರಣದಲ್ಲಿ ಸಹಕರಿಸಿದ ಆರೋಪ ಎದುರಿಸುತ್ತಿದ್ದಾರೆ.
ಡಿ.ಕೆ. ಶಿವಕುಮಾರ್ ಆಪ್ತರ ಮನೆ ಮೇಲೆ 5 ಕಡೆ ಸಿಬಿಐ ದಾಳಿ
ಡಿ.ಕೆ.ಶಿವಕುಮಾರ್ ಹೇಳುವುದೇನು? : 'ಕೆಲವರ ಮೇಲೆ ಸಿಬಿಐ ದಾಳಿ ಆಗಿದೆ. ಡಿ.ಕೆ.ಸುರೇಶ್ ಹೆಸರು ಹೇಳಿ ಎಂದು ದಾಳಿಗೆ ಒಳಗಾದವರ ಮೇಲೆ ಅಧಿಕಾರಿಗಳು ಒತ್ತಡ ತರುತ್ತಿದ್ದಾರೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, 'ನನ್ನ ತಮ್ಮನನ್ನು ಸಿಕ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಬ್ಬ ಸಂಸದನನ್ನು ಕುಣಿಕೆಗೆ ಸಿಲುಕಿಸಲು ಪ್ರಯತ್ನ ಸರಿಯೇ?' ಎಂದು ಅವರು ಪ್ರಶ್ನಿಸಿದ್ದಾರೆ.