ಮೋದಿಗಿಂತ ಹೆಚ್ಚು ಬಸವಣ್ಣನ ನೆನೆದ ರಾಹುಲ್! ಬೆಳಗಾವಿ ಭಾಷಣದ ಮುಖ್ಯಾಂಶ
ಬೆಳಗಾವಿ, ಫೆಬ್ರವರಿ 24: ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ,
ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ...
ಬಸವಣ್ಣನವರ ಈ ಪ್ರಸಿದ್ಧ ವಚನ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾಷಣದ ಕೇಂದ್ರ ಬಿಂದುವಾಗಿತ್ತು!
ಮೊದಲ ಬಾರಿಗೆ ರಾಹುಲ್ ಗಾಂಧಿಯವರು ತಮ್ಮ ಮಾತಿನಲ್ಲಿ ಪ್ರಧಾನಿ ಮೋದಿಯವರ ನಾಮಜಪಕ್ಕಿಂತ ಹೆಚ್ಚಾಗಿ ಬಸವಣ್ಣನವರ ನಾಮಜಪ ಮಾಡಿದ್ದು ಇಂದಿನ ವಿಶೇಷ!
ಬದನೆ ಕಾಯಿ ಎಂದೊಡನೆ ಥಟ್ಟಂಥ ನೆನಪಾಗುವ ಅಥಣಿ, ಶೈಕ್ಷಣಿಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಕ್ಷೇತ್ರ. ಬೆಳಗಾವಿಯ ಪ್ರಮುಖ ಕ್ಷೇತ್ರದಲ್ಲೊಂದಾದ ಇಂಥ ಅಥಣಿಯಲ್ಲಿ ರಾಹುಲ್ ಗಾಂಧಿಯವರು ಇಂದು(ಫೆ.24)ಬೃಹತ್ ಸಮಾವೇಶವನ್ನುದ್ದೇಶಿ ಮಾತನಾಡಿದರು.
ತಮ್ಮ ಕರ್ನಾಟಕ ಜನಾಶೀರ್ವಾದ ಯಾತ್ರೆಯ ಎರಡನೇ ಭಾಗವಾಗಿ ಬೆಳಗಾವಿಯ ಅಥಣಿಗೆ ಆಗಮಿಸಿರುವ ರಾಹುಲ್ ಗಾಂಧಿ "ನಮಸ್ಕಾರಾ... ಚೆನ್ನಾಗಿದ್ದೀರಾ?" ಎನ್ನುತ್ತ ಕನ್ನಡದಲ್ಲೇ ಮಾತು ಆರಂಭಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿನಲ್ಲಾಗಲೀ, ಅಧ್ಯಕ್ಷ ರಾಹುಲ್ ಗಾಂಧಿಯವರ ಮಾತಿನಲ್ಲಾಗಲೀ ಹೊಸತು ಅಂತ ಇದ್ದಿದ್ದು 'ನೀರವ್ ಮೋದಿ' ಟಾಪಿಕ್ ಮಾತ್ರ! ಉಳಿದಂತೆ ಎಲ್ಲವೂ ಹಳೇ ಭಾಷಣದ ರಿವೈಂಡ್!
ಅದೇನೇ ಇರಲಿ, ಬೆಳಗಾವಿ ಭಾಷಣದಲ್ಲಿ ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶ ಇಲ್ಲಿದೆ.

ನುಡಿದಂತೆ ನಡೆ...
"ನುಡಿದಂತೆ ನಡೆ ಎಂದರು ಬಸವಣ್ಣ. ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೇ ನಡೆಯುತ್ತಿದೆ. ಅದಕ್ಕೆಂದೇ ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಪ್ರಧಾನಿ ಮೋದಿ ನಿಜಕ್ಕೂ ನುಡಿದಂತೆ ನಡೆದಿದ್ದಾರಾ? ಅಧಿಕಾರಕ್ಕೆ ಬರುವ ಮೊದಲು ಅವರು, ಕಪ್ಪು ಹಣವನ್ನು ವಿದೇಶದಿಂದ ತಂದು, ಪ್ರತಿ ಬಡವನ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದರು. ಆದರೆ ಆಗಿದ್ದೇನು? 20 ಲಕ್ಷ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದರು. ಆದರೆ ನಿರುದ್ಯೋಗ ಸಮಸ್ಯೆ ಮತ್ತೂ ಹೆಚ್ಚಿದೆ. ಅಂದರೆ ನರೇಂದ್ರ ಮೋದಿ ನುಡಿದಂತೆ ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ" ಎಂದು ರಾಹುಲ್ ಗಾಂಧಿ ಹೇಳಿದರು.

ಕಳಬೇಡ,ಕೊಲಬೇಡ, ಹುಸಿಯ ನುಡಿಯಲು ಬೇಡ
ಕರ್ನಾಟಕದ ಮಹನೀಯರನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, ಶಿಶುನಾಳ ಷರೀಫ, ಅಕ್ಕಮಹಾದೇವಿ, ಗಂಗಾಂಬಿಕೆಯರ ಹೆಸರು ಉಚ್ಛರಿಸಿದರು. ನಂತರ ಬಸವಣ್ಣನವರ ಪ್ರಸಿದ್ಧ ವಚನವಾದ ಕಳಬೇಡ, ಕೊಲಬೇಡ... ವಚನ ನೆನಪಿಸಿಕೊಂಡ ಅವರು ಪ್ರಧಾನಿ ಮೋದಿಯವರು ದೇಶ ಕೊಳ್ಳೆ ಹೊಡೆಯುವವರಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಹುಸಿಯ ನುಡಿಯಲು ಬೇಡ ಎಂದು ಬಸವಣ್ಣ ಹೇಳಿದ್ದಾರೆ ಆದರೆ ಪ್ರಧಾನಿ ಮೋದಿ ಆಡುತ್ತಿರುವುದೆಲ್ಲ ಸುಳ್ಳೇ. ತನ್ನ ಬಣ್ಣಿಸಬೇಡ ಎಂಬ ಮಾತಂತೂ ಕೇಳಬೇಡಿ! ಪ್ರಧಾನಿ ಮೋದಿಯವರ ಸಂಪುಟದಲ್ಲಿ ಯಾರೇ ಏನೇ ಮಾಡಿದರೂ ಅದನ್ನು ತಾನೇ ಮಾಡಿದ್ದೇನೆಂದು ಮೋದಿಯವರು ಅದರ ಶ್ರೇಯಸ್ಸು ತೆಗೆದುಕೊಳ್ಳುತ್ತಿದ್ದಾರೆ... ಎಂದು ಬಸವಣ್ಣನವರ ವಚನವನ್ನು ಮೋದಿಯವರಿಗೆ ಅನ್ವಯಿಸುವಂತೆ ಹೇಳಿದರು.

ನೀರವ್ ಮೋದಿ ಎಲ್ಲಿ ಹೋದರು?!
ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ 11 ಸಾವಿರ ಕೋಟಿ ರೂ. ಕೊಳ್ಳೆಹೊಡೆದ ನೀರವ್ ಮೋದಿ ದೇಶದಿಂದ ಓಡಿಹೋಗಿದ್ದು ಹೇಗೆ? ಅವರಿಗೆ ದಾರಿಮಾಡಿಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದರು ರಾಹುಲ್ ಗಾಂಧಿ. ಇಂದು ಕೇವಲ 15 ನಿಮಿಷವಷ್ಟೇ ಮಾತನಾಡಿದ ರಾಹುಲ್, ಭಾಷಣಕ್ಕೆ ಯಾರೂ ಅನುವಾದಕರಿರಲಿಲ್ಲ ಎಂಬುದು ವಿಶೇಷ.

ಬಸವಣ್ಣನನ್ನು ವೋಟಿಗೆ ಬಳಸಿಕೊಂಡರೆ ಸಾಲದು!
ಬಸವಣ್ಣ ಅವರ ಹೆಸರನ್ನು ಕೇವಲ ವೋಟಿಗಾಗಿ ಬಳಸಿಕೊಳ್ಳಬೇಡಿ. ಅವರ ಮಾತುಗಳನ್ನು, ವಚನಗಳನ್ನು ಪಾಲಿಸಿ.












Click it and Unblock the Notifications