ಹಿಂದೂ ಸಮಾಜಕ್ಕೆ ರಾಘವೇಶ್ವರರು ಕಳಂಕ: ಹೆಗಡೆ
ಹುಬ್ಬಳ್ಳಿ, ಜು. 30: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸನ್ಯಾಸಿಯೇ ಅಲ್ಲ, ಅವರು ತಕ್ಷಣ ಪೀಠದಿಂದ ಕೆಳಗೆ ಇಳಿಯಬೇಕು ಎಂದು ಸಮಾನ ಮನಸ್ಕ ಹವ್ಯಕ ವೇದಿಕೆ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂ ಸಮಾಜಕ್ಕೆ ರಾಘವೇಶ್ವರರು ಕಳಂಕ. ಪೀಠಾಧೀಶರಾದ ಮೇಲೆಯೂ ಸಹ ತಮ್ಮ ಪೂರ್ವಾಶ್ರಮದ ಹೆಸರನ್ನು ಹಾಗೇ ಇಟ್ಟುಕೊಂಡಿದ್ದಾರೆ. ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅಲಿಯಾಸ್ ಹರೀಶ ಶರ್ಮ, ಹರೀಶ ಭಟ್ಟ, ಹರೀಶ ಎಂದು ಮುಂತಾಗಿ ಬರೆಸಿರುವ ಬಗ್ಗೆ ದಾಖಲೆಯಿದೆ ಎಂದು ಹೇಳಿದರು.[ರಾಘವೇಶ್ವರ ಶ್ರೀಗಳಿಗೆ ನಿಷ್ಠ : ಹವ್ಯಕ ಮಹಾಮಂಡಲ]
ಸನ್ಯಾಸಿಯಾದವನಿಗೆ ಜೀವ ವಿಮೆ ಅಗತ್ಯವೇ? ತಮ್ಮ ಹೆಸರಿನಲ್ಲಿ ಆಸ್ತಿ ಬೇಕೆ? ಸಂಬಂಧಿಗಳನ್ನು ಪ್ರಮುಖ ಹುದ್ದೆಗೆ ನೇಮಕ ಮಾಡಿಕೊಳ್ಳುವುದು ಏತಕ್ಕೆ? ಎಂಬುದಾಗಿ ಸಚ್ಚಿದಾನಂದ ಹೆಗಡೆ ಪ್ರಶ್ನೆ ಮಾಡಿದ್ದಾರೆ.[ರಾಘವೇಶ್ವರ ಶ್ರೀ ಡಿಎನ್ಎ ವರದಿ ಪಾಸಿಟಿವ್ : ಎಜಿ]
ಸಮಾನ ಮನಸ್ಕ ಹವ್ಯಕ ವೇದಿಕೆ ಸಂಚಾಲಕ ಸಿಬಿಎಲ್ ಹೆಗಡೆ ಮಾತನಾಡಿ, ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ. ಸಿಐಡಿ ಅಧಿಕಾರಿಗಳು ಇಲ್ಲಿಯವರೆಗೆ ಸ್ವಾಮೀಜಿಯನ್ನು ಸ್ಥಳಕ್ಕೆ ಕರೆದುಕೊಂಡು ಹೋದ ದಾಖಲೆಯಿಲ್ಲ ಎಂದು ಹೇಳಿದರು. ಸ್ವಾಮೀಜಿಗೆ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಶ್ರೇಷ್ಠತೆ ಉಳಿದುಕೊಂಡಿಲ್ಲ ಎಂದು ಹೇಳಿದರು.