ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕಿ: ಸಿದ್ಧರಾಮಯ್ಯ ಆಗ್ರಹ
ಬೆಳಗಾವಿ,ಡಿಸೆಂಬರ್ 26: ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕುವಂತೆ ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು
ಸೋಮವಾರ ನಡೆದ ವಿಧಾನಸಭಾ ಕಲಾಪದಲ್ಲಿ ಮೀಸಲಾತಿ ವಿಚಾರ ಚರ್ಚೆಯ ವೇಳೆ ಮಾತನಾಡಿದ ಅವರು, ನೀವು ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದೀರಾ...? ಮೀಸಲಾತಿ ಹೆಚ್ಚಳದ ಬಗ್ಗೆ ಈವರೆಗೆ ಕೇಂದ್ರದ ಮೇಲೆ ಒತ್ತಡ ಹಾಕಿಲ್ಲ. ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕಿ. ಎಸ್.ಸಿ ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ನಮ್ಮ ಬೆಂಬಲವಿದೆ. ಕಾಂಗ್ರೆಸ್ ಪಕ್ಷ ಮೀಸಲಾತಿ ಹೆಚ್ಚಳದ ಪರ ಇದೆ ಎಂದು ಒತ್ತಾಯಿಸಿದರು
ಸಂವಿಧಾನವು ಎಲ್ಲರೂ ಕಾನೂನಿನ ಮುಂದೆ ಸಮಾನರು ಎಂದು ಹೇಳುತ್ತದೆ, ಆದರೆ ಮೀಸಲಾತಿ ಮೂಲಕ ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಬೇಕಿದೆ. 1956ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕು ಎಂದು ತೀರ್ಮಾನಿಸಲಾಯಿತು. ರಾಜ್ಯದಲ್ಲಿ ಮೀಸಲಾತಿ ಈಗ 50% ಇದೆ. 1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಮೂರ್ತಿಗಳ ಪೀಠವು ಮಂಡಲ್ ಕಮಿಷನ್ ವರದಿಯನ್ನು ಒಪ್ಪಿಕೊಳ್ಳುವ ಜೊತೆಗೆ ಕೆಲವು ನಿಬಂಧನೆಗಳನ್ನು ಹಾಕಿದ್ದಾರೆ. ಸಂವಿಧಾನದಲ್ಲಿ ಮೀಸಲಾತಿ ಪ್ರಮಾಣ 50% ಮೀರಬಾರದು ಎಂದು ಹೇಳಿಲ್ಲವಾದರೂ ಸುಪ್ರೀಂ ಕೋರ್ಟ್ ಸ್ವಯಂಪ್ರೇರಣೆಯಿಂದ ಇದಕ್ಕೆ ಮಿತಿ ವಿಧಿಸಿದೆ.

ಈಗ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ವಿಧಿಸಿರುವ ಮಿತಿಗಿಂತ 6% ಹೆಚ್ಚು ಮೀಸಲಾತಿಯನ್ನು ನೀಡುತ್ತಿದೆ. ಇದರ ಜೊತೆ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರಿಗೆ 10% ಮೀಸಲಾತಿ ನೀಡಬೇಕಾಗಿದೆ. ಇದರಿಂದ ಒಟ್ಟು ಮೀಸಲಾತಿ ಪ್ರಮಾಣ ಎಷ್ಟಾಗುತ್ತೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. 1994ರಲ್ಲಿ ವೀರಪ್ಪ ಮೋಯಿಲಿ ಅವರು ಮುಖ್ಯಮಂತ್ರಿಯಾಗಿದ್ದಾಗ 73% ಮೀಸಲಾತಿಯನ್ನು ನೀಡಿದ್ದರು. ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಚಾಲೆಂಜ್ ಮಾಡಿದಾಗ ಕೋರ್ಟ್ ಈ ಮೀಸಲಾತಿಯನ್ನು ರದ್ದು ಮಾಡಿತು.
ಪರಿಶಿಷ್ಟ ವರ್ಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ 7.5% ಮೀಸಲಾತಿ ನೀಡಬೇಕು ಮತ್ತು ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ 17.15% ಮೀಸಲಾತಿ ನೀಡಬೇಕು ಎಂಬ ಬೇಡಿಕೆಯಿತ್ತು. 2019ರ ಜೂನ್ ತಿಂಗಳಲ್ಲಿ ನಮ್ಮ ಪಕ್ಷದ ಪ್ರಿಯಾಂಕ್ ಖರ್ಗೆ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಒಂದು ಆಯೋಗ ರಚನೆ ಆಯಿತು, ಈ ಆಯೋಗ 2020ರ ಜುಲೈ ನಲ್ಲಿ ವರದಿ ನೀಡಿತು. ಈ ಸಮಿತಿಯ ಶಿಫಾರಸು ಏನೆಂದರೆ ಎಸ್,ಸಿ ಗಳಿಗೆ 15ರಿಂದ 17% ಗೆ ಹಾಗೂ ಎಸ್,ಸಿ ಗಳಿಗೆ 3ರಿಂದ 7% ಗೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂದಿದೆ. ಇದರಿಂದ ಒಟ್ಟು ಮೀಸಲಾತಿ 56% ಆಯಿತು. ಸುಪ್ರೀಂ ಕೋರ್ಟ್ ವಿಧಿಸಿರುವ ಮಿತಿಯನ್ನು ದಾಟಿ ಮೀಸಲಾತಿ ನೀಡಲೇಬೇಕಾಗಿದೆ. ಈ ವರದಿ ಬಂದ ಕೂಡಲೇ ಮಾಡಿಲ್ಲ ಎರಡು ವರ್ಷ ಮೂರು ತಿಂಗಳ ನಂತರ ನಮ್ಮ ಪಕ್ಷದ ಶಾಸಕರು ಸದನದಲ್ಲಿ ಗಲಾಲೆ ಮಾಡಿದರು, ವಾಲ್ಮೀಕಿ ಸಮಾಜದ ಸ್ವಾಮೀಜಿಗಳು 257 ದಿನಗಳ ಕಾಲ ಧರಣಿ ಮಾಡಿದರು, ಆಗ ಅನಿವಾರ್ಯವಾಗಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಬೇಕಾಯಿತು. ಸರ್ಕಾರ ಯಾಕೆ ಇಷ್ಟು ವಿಳಂಬ ಮಾಡಿದ್ದು? ಧರಣಿ ಸ್ಥಳಕ್ಕೆ ನಾನು ಮೂರು ಬಾರಿ ಹೋಗಿದ್ದೆ, ಆಗ ಧರಣಿ ಕೈಬಿಡುವಂತೆ ಸ್ವಾಮೀಜಿಯವರ ಮನವೊಲಿಸುವ ಪ್ರಯತ್ನ ಮಾಡಿದ್ದೆ, ಆದರೆ ಶ್ರೀಗಳು ನನ್ನ ಮನವಿಯನ್ನು ಪುರಸ್ಕರಿಸಿಲ್ಲ.
ನಾಗಮೋಹನ್ ದಾಸ್ ಅವರ ಸಮಿತಿ ನೀಡಿರುವ ವರದಿಯ ಮೇಲೆ ನ್ಯಾ. ಸುಭಾಷ್ ಹಾಡಿ ಅವರ ಸಮಿತಿ ರಚನೆ ಮಾಡಿದರು. ಈ ಸಮಿತಿ ರಚನೆಗೆ ಕಾರಣ ನಾಗಮೋಹನ್ ದಾಸ್ ಅವರ ಸಮಿತಿ ನೀಡಿರುವ ವರದಿ ಅನುಷ್ಠಾನ ಮಾಡುವುದಕ್ಕೆ. ನಂತರ ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ, ಶ್ರೀರಾಮುಲು ಅವರನ್ನು ಒಳಗೊಂಡ ಸಂಪುಟ ಉಪಸಮಿತಿಯನ್ನು ರಚನೆ ಮಾಡಲಾಯಿತು. ಶ್ರೀರಾಮುಲು ಅವರು ತಾವು ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ಮೀಸಲಾತಿ ಹೆಚ್ಚಳ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಎರಡು ವರ್ಷ ಮೂರು ತಿಂಗಳು ಈ ಸರ್ಕಾರ ನಾಗಮೋಹನ್ ದಾಸ್ ಅವರ ಸಮಿತಿಯ ವರದಿಯನ್ನು ಇಟ್ಟುಕೊಂಡು ನಿದ್ರಾವಸ್ಥೆಯಲ್ಲಿ ಇತ್ತು.

ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿಲ್ಲ. ಬಿಜೆಪಿ ಯಾವಾಗಲಾದರೂ ಮೀಸಲಾತಿ ಬೇಕು ಎಂದು ಹೋರಾಟ ಮಾಡಿದೆ? ಮಂಡಲ್ ಕಮಿಷನ್ ವರದಿಯನ್ನು ವಿರೋಧ ಮಾಡಿದವರು ಯಾರು? ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿಯನ್ನು ತಂದು ಹಿಂದುಳಿದವರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿ ನೀಡಿದಾಗ ಅದನ್ನು ವಿರೋಧ ಮಾಡಿದವರು ಯಾರು? ಬಿಜೆಪಿಯ ಉಪಾಧ್ಯಕ್ಷರು, ರಾಜ್ಯಸಭಾ ಸದಸ್ಯರು ಆಗಿದ್ದ ರಾಮಾಜೋಯಿಸ್ ಅವರು. ಸುಪ್ರೀಂಕೋರ್ಟ್ ನಲ್ಲಿ ಅವರು ಮನವಿ ಮಾಡಿದ ಹೊರತಾಗಿಯೂ ಕೋರ್ಟ್ ಅವರ ಮನವಿಯನ್ನು ತಿರಸ್ಕಾರ ಮಾಡಿತು, ಸ್ವತಂ ರಾಮಾಜೋಯಿಸ್ ಅವರೇ ಕೋರ್ಟ್ ನಲ್ಲಿ ವಾದ ಮಾಡಿದ್ದರು. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದವರು ಅರ್ಜುನ್ ಸಿಂಗ್ ಅವರು, ಆಗಲೂ ವಿರೋಧ ಮಾಡಿದವರು ಯಾರು ಎಂಬುದು ನಮಗೆಲ್ಲ ಗೊತ್ತಿದೆ.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು ಎಂಬುದಕ್ಕೆ ನಾವು ಬದ್ಧರಾಗಿದ್ದೇವೆ. ಇದೇ ಕಾರಣಕ್ಕೆ ನಾವು ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಿದ್ದು. ಈ ವರ್ಗದ ಜನರಿಗೆ ಮೀಸಲಾತಿ ನೀಡಲೇಬೇಕು ಆದರೆ ಇದು ಸುಪ್ರೀಂ ಕೋರ್ಟ್ ನ ತೀರ್ಪಿನ ಉಲ್ಲಂಘನೆಯಾಗುತ್ತದೆ. ಮೀಸಲಾತಿ ಹೆಚ್ಚಳ ಊರ್ಜಿತವಾಗಬೇಕಾದರೆ ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಆಗಬೇಕು. ಸಂವಿಧಾನದ 9ನೇ ಶೇಡ್ಯೂಲ್ ಗೆ ಸೇರಿಸಬೇಕು. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮಾಡಿದ ಕೂಡಲೇ, ಕಾನೂನು ತಂದ ಕೂಡಲೇ ಇದು ಸಂವಿಧಾನಬದ್ಧವಾಗಲ್ಲ.
ನಮ್ಮ ಡಬ್ಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತೀರ, ನಾವು ನಿಮ್ಮೊಂದಿಗೆ ದೆಹಲಿಗೆ ಬರುತ್ತೇವೆ, ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸುವಂತೆ ಒತ್ತಾಯ ಮಾಡೋಣ.
ರಾಜ್ಯಸಭೆಯಲ್ಲಿ ಕೇಂದ್ರದ ರಾಜ್ಯ ಖಾತೆಯ ಸಮಾಜ ಕಲ್ಯಾಣ ಸಚಿವರಾದ ಪ್ರತಿಮಾ ಪೌಲಿಕ್ ಅವರು 7/12/2022ರಲ್ಲಿ ಉತ್ತರ ನೀಡುವಾಗ, ಮೀಸಲಾತಿಯನ್ನು 50% ಗಿಂತ ಹೆಚ್ಚಿಗೆ ಮಾಡುವ ಯಾವುದೇ ಪ್ರಸ್ತಾವ ನಮ್ಮ ಮುಂದೆ ಇಲ್ಲ ಎಂದು ಹೇಳಿದ್ದಾರೆ. ಅಂದರೆ ಸರ್ಕಾರ ಇವತ್ತಿನವರೆಗೆ ಬಿಲ್ ಅನ್ನೇ ಕೇಂದ್ರ ಸರ್ಕಾರಕ್ಕೆ ಕಳಿಸಿಲ್ಲ. ಈ ಸರ್ಕಾರ ಚುನಾವಣೆ ಬಂದಿರುವುದರಿಂದ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ.
ಲೋಕಸಭಾ ಸದಸ್ಯರಾದ ಎಸ್, ಮುನಿಸ್ವಾಮಿ ಪ್ರಶ್ನೆಗೆ 20/12/2022ರಲ್ಲಿ ಉತ್ತರ ನೀಡಿರುವ ಎ.ನಾರಾಯಣಸ್ವಾಮಿ ಅವರು, ಮೀಸಲಾತಿ ಹೆಚ್ಚಳದ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ ಎಂದಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವೆ, ನೀವು ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಎಂದು ಒತ್ತಡ ಹಾಕಿದೆಯಾ? ರಾಜ್ಯದಿಂದ ಯಾರಾದರೂ ಕೇಂದ್ರ ಸಮಾಜ ಕಲ್ಯಾಣ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರ? ಕೇಂದ್ರಕ್ಕೆ ಈ ಬಗ್ಗೆ ಮನವಿ ಮಾಡಿದ್ದಾರ?
ಮೀಸಲಾತಿ ಹೆಚ್ಚಳಕ್ಕೆ ಕಾಂಗ್ರೆಸ್ ಪಕ್ಷದ ಪೂರ್ಣ ಬೆಂಬಲ ಇದೆ. ನೀವು ಸರ್ವಪಕ್ಷ ಸಭೆ ಕರೆದು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗುವುದಾದರೆ ನಾವು ಸಿದ್ಧರಿದ್ದೇವೆ. ಮೀಸಲಾತಿ ಹೆಚ್ಚಳ ಆಗಬೇಕು ಎಂಬುದು ನಮ್ಮ ಕಳಕಳಿ. ನಾವು ಮೀಸಲಾತಿ ಪರವಾಗಿದ್ದೇವೆ ಎಂಬುದನ್ನು ಮತ್ತೊಮ್ಮೆ ಹೇಳಲು ಬಯಸುತ್ತೇನೆ.
ಈಗ ಸಂಸತ್ ಅಧಿವೇಶನ ನಡೆಯುತ್ತಿತ್ತು, ಅಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪಾಸ್ ಮಾಡಿಕೊಳ್ಳದೆ ಹೋದರೆ ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನಾತ್ಮಕ ರಕ್ಷಣೆ ಸಿಗುವುದಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ಒಪ್ಪದೇ ಹೋದರೆ ಸರ್ವ ಪಕ್ಷಗಳ ನಿಯೋಗವನ್ನು ತೆಗೆದುಕೊಂಡು ಹೋಗಿ ನಾವು ನಿಮ್ಮೊಂದಿಗೆ ಬರುತ್ತೇವೆ. ಈ ಅಧಿವೇಶನದ ಸಮಯದಲ್ಲೇ ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸುವ ಕೆಲಸ ಆಗಲಿ ಎಂದರು.












Click it and Unblock the Notifications