ಪದವಿ-ಸ್ನಾತಕೋತ್ತರದಲ್ಲಿ ಭಾಷಾ ಸಾಹಿತ್ಯ ಅಧ್ಯಯನ, ಕನ್ನಡ ಬೋಧಕರಿಗೆ ಆದ್ಯತೆ ನೀಡಿ: ಪುರುಷೋತ್ತಮ ಬಿಳಿಮಲೆ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕರುನಾಡಿನಲ್ಲಿ ಕನ್ನಡಕ್ಕೆ ಆದ್ಯತೆ ಇಲ್ಲದಂತಾಗಿದೆ. ಎನ್ಸಿಇಆರ್ ರಾಜ್ಯದಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಜಾರಿಗೊಳಿಸಲು ಏಕಮುಖವಾಗಿ ನಿರ್ಧರಿಸಿ ಆದೇಶಿಸಿತ್ತು. ಇಂತಹ ಕನ್ನಡ ಕಡೆಗಣೆಯ ಸಂಗತಿಗಳು ನಡೆಯುತ್ತಲೇ ಇವೆ. ಇದೀಗ ಕನ್ನಡ ಸಾಹಿತ್ಯ, ಕನ್ನಡ ಬೋಧಕರ ನೇಮಕ ಸಂಬಂಧ ರಾಜ್ಯ ಸರ್ಕಾರಕ್ಕೆ ಆದ್ಯತೆ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಆಗ್ರಹಿಸಿದ್ದಾರೆ.
ಇದೇ ವಿಚಾರವಾಗಿ ಉನ್ನತ ಶಿಕ್ಷಣ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದಿರುವ ಬಿಳಿಮಲೆ ಅವರು, 'ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣದಲ್ಲಿ ಕನ್ನಡ ಭಾಷಾಧ್ಯಯನಕ್ಕೆ ಕಡ್ಡಾಯವಾಗಿ ಆದ್ಯತೆ ನೀಡಬೇಕು. ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ವ್ಯಕ್ತಿಯ ಚಿಂತನೆಯನ್ನು ವಿವರಿಸುವ ಮತ್ತು ರೂಪಿಸುವ ಶಕ್ತಿಯನ್ನು ಹೊಂದಿದೆ. ಪ್ರತಿಯೊಂದು ಭಾಷೆಯು ತನ್ನದೆಯಾದ ಒಂದು ಲೋಕದೃಷ್ಟಿಯನ್ನು ಒಳಗೊಂಡಿದೆ. ಸಾಮಾಜಿಕ ಮೌಲ್ಯಗಳು ಮತ್ತು ಚಿಂತನೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ವದ ಮಾಧ್ಯಮವಾಗಿದೆ. ಹಾಗಾಗಿ ಉನ್ನತ ಶಿಕ್ಷಣದಲ್ಲಿ ಭಾಷಾ ಬೋಧನೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡುವ ಅಗತ್ಯವಿದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಕೇಂದ್ರೀತವಾದ ಜಾಗತಿಕರಣವು ತನಗೆ ಬೇಕಾದ ಜಾಹಿರಾತು ಮಾದರಿಯ ಭಾಷೆಯನ್ನು ಸೃಷ್ಟಿಸಿಕೊಂಡಿದ್ದು, ಅದು ದೈನಂದಿನ ವ್ಯವಹಾರಗಳಿಗೆ ಸಾಕಾದರೂ ವ್ಯಕ್ತಿತ್ವ ವಿಕಸನಕ್ಕೆ ಯಾವ ಪ್ರಯೋಜನವನ್ನು ನೀಡುವುದಿಲ್ಲ ಎಂದಿರುವ ಬಿಳಿಮಲೆ, ಇದರ ಪರಿಣಾಮವಾಗಿ ವಿಶ್ವದ ಕುರಿತಾದ ತಾತ್ವಿಕ ಚಿಂತನೆಗಳು ತೀವ್ರವಾದ ಬಿಕ್ಕಟ್ಟುಗಳನ್ನು ಎದುರಿಸುವ ಪರಿಸ್ಥಿತಿ ಉದ್ಭವಿಸಿರುವುದು ಕಳವಳಕಾರಿ ಎಂದು ಅವರು ವಿವರಿಸಿದ್ದಾರೆ.
ವಸಾಹತು ಕಾಲಘಟ್ಟದಲ್ಲಿ ಭಾರತೀಯ ಪರಂಪರೆಯನ್ನು ಪರಿಷ್ಕರಿಸಿ ಒಪ್ಪಿಕೊಳ್ಳಲು ಹೇಳಿದ ರಾಜರಾಮ ಮೋಹನ್ ರಾಯ್, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಕುವೆಂಪು ರಂತಹ ಮಹಾನ್ ಚಿಂತಕರು ಭಾಷಾ ಸಾಹಿತ್ಯ ಮತ್ತು ಚಿಂತನೆಯ ಮೂಲಕ ಭಾರತದ ನವೋದಯ ಕಟ್ಟಿದರು. ವಿಶ್ವದ ಮಹತ್ವದ ಪರಂಪರೆಗಳು ಭಾಷೆ ಮತ್ತು ಅಧ್ಯಯನಗಳ ಮೂಲಕವೇ ರೂಪುಗೊಂಡಿದೆ ಎಂದರು.
ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಅತ್ಯಂತ
ಇಂದಿನ ಪರೀಕ್ಷಾ ವ್ಯವಸ್ಥೆಗಳು ವಿಮಾರ್ಶಾತ್ಮಕ ಆಲೋಚನೆಗಳು ಬೆಳೆಯದಂತೆ ಮಾಡಿವೆ ಎನ್ನುವುದು ವಿಷಾದನೀಯ ಸಂಗತಿ. ಕೇವಲ ಮಾಹಿತಿ ಆಧಾರಿತ ಮೌಲ್ಯಮಾಪನಕ್ಕೆ ಅವಕಾಶ ನೀಡದೆ ತಾಂತ್ರಿಕ ಶಿಕ್ಷಣದ ಜೊತೆಗೆ ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಅತ್ಯಂತ ಅಗತ್ಯವೆನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಇದೆಲ್ಲ ಗಮನಿಸಿ ಸರ್ಕಾರ ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಭಾಷೆ ಮತ್ತು ಸಾಹಿತ್ಯದ ಅಧ್ಯಯನಗಳು ಕಳೆಗುಂದದಂತೆ ನೋಡಿಕೊಳ್ಳಬೇಕು. ಕನ್ನಡ ಅಧ್ಯಾಪಕರಿಗೆ ಗೌರವಯುತವಾದ ಸೇವಾ ಪರಿಸರ ಕಲ್ಪಿಸಿಕೊಡಬೇಕು. ಸರ್ಕಾರದ ಆಶಯವನ್ನು ಅನುಷ್ಠಾನ ಮಾಡದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರಿಸುವುದು ಸರ್ಕಾರ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಬಗ್ಗೆ ಅವರು ತಿಳಿಸಿದ್ದಾರೆ.
ಕನ್ನಡ ಬೋಧಕರ ನೇಮಕಾತಿ ಪರಿಗಣಿಸಿ
ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ದಿನಾಂಕ: 24-06-2026ರಂದು ಅಧಿಸೂಚನೆ ಹೊರಡಿಸಲಾಗಿದೆ. ಕನ್ನಡ ಭಾಷಾ ಬೋಧಕರ ನೇಮಕಾತಿಗೆ ಅವಕಾಶ ಕಲ್ಪಿಸದೇ ಇರುವುದು ಕನ್ನಡ ವಿರೋಧಿ ಧೋರಣೆ ಎಂದು ಅವರು ಬೇಸರ ಹೊರ ಹಾಕಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬರೆದ ಪತ್ರದಲ್ಲಿ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸಿನ ಅನ್ವಯ ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ಬೋಧನೆಗೆ ನಿರ್ದಿಷ್ಟ ಕ್ರಮಗಳನ್ನು ಸರ್ಕಾರವು ಅನುಸರಿಸಿದೆ. ಇದು ಪ್ರಸ್ತುತ ನೇಮಕಾತಿ ಅಧಿಸೂಚನೆ ಈ ಆಶಯಕ್ಕೆ ವಿರುದ್ಧವಾಗಿದೆ ಎಂಬ ಸಂಶಯ ಮೂಡಿಸುತ್ತದೆ. ಆದ್ದರಿಂದ ಕನ್ನಡ ಭಾಷೆಯ ಸಾಹಿತ್ಯಿಕ ಮೌಲ್ಯಗಳು ಮತ್ತು ಸಂಸ್ಕೃತಿಯ ಮಹತ್ವ ತಿಳಿಸುವ ಸಾಂಸ್ಥಿಕ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ. ಕನ್ನಡ ಭಾಷಾ ಪ್ರಾಧ್ಯಾಪಕರ ನೇಮಕಾತಿಗೆ ಕ್ರಮ ವಹಿಸದಿರಲು ಕಾರಣವೇನು? ಎಷ್ಟು ಹುದ್ದೆಗಳು ಖಾಲಿ ಇವೆ? ಎಂಬ ಕುರಿತಂತೆ ತಮಗೆ ಕೂಡಲೇ ಮಾಹಿತಿ ಒದಗಿಸಬೇಕೆಂದು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಅವರು ಸೂಚನೆ ನೀಡಿದ್ದಾರೆ.













Click it and Unblock the Notifications