ಪಿಎಸ್ಐ ಜಗದೀಶ್ ಹತ್ಯೆ : ಕಳ್ಳರನ್ನು ಹಿಡಿಯಲು 5 ತಂಡ ರಚನೆ
ಬೆಂಗಳೂರು, ಅಕ್ಟೋಬರ್ 19 : ಪಿಎಸ್ಐ ಜಗದೀಶ್ ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಲು ಪೊಲೀಸರು ಐದು ತಂಡಗಳನ್ನು ರಚನೆ ಮಾಡಿದ್ದಾರೆ. ಜಗದೀಶ್ ಅವರ ಹತ್ಯೆ ಮಾಡಿದ ಕಳ್ಳರು ಅಪ್ಪ-ಮಗ ಅಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ಬೆಂಗಳೂರಿಗೆ ಕರೆತಂದಿದ್ದಾರೆ.
ಐದು ತಂಡಗಳಲ್ಲಿ 40ಕ್ಕೂ ಹೆಚ್ಚು ಪೊಲೀಸರು ಜಗದೀಶ್ ಅವರನ್ನು ಹತ್ಯೆ ಮಾಡಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಒಂದು ತಂಡ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹುಡುಕಾಟ ನಡೆಸುತ್ತಿದೆ. ಮತ್ತೊಂದು ತಂಡ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದೆ. ಒಂದು ತಂಡ ಬೆಂಗಳೂರು ಸುತ್ತ-ಮುತ್ತ ಹುಡುಕಾಟ ಮುಂದುವರೆಸಿದೆ. [ಜಗದೀಶ್ ಪರಿಚಯ ಓದಿ]

ನಾಲ್ಕು ತಂಡಗಳ ಕಾರ್ಯಾಚರಣೆಯ ವಿವರಗಳನ್ನು ಸಂಗ್ರಹಿಸಿ ಅವರಿಗೆ ಸಹಾಯ ಮಾಡಲು ಒಂದು ತಂಡ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾನುವಾರ ಚಿತ್ರದುರ್ಗ, ತುಮಕೂರು ಮುಂತಾದ ಕಡೆ ತಂಡ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ. ಈ ಸಮಯದಲ್ಲಿ ಚಿತ್ರದುರ್ಗದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. [ಜಗದೀಶ್ ಹತ್ಯೆಯಾಗಿದ್ದು ಹೇಗೆ?]
ಅಪ್ಪ-ಮಗ ಅಲ್ಲ : ದೊಡ್ಡಬಳ್ಳಾಪುರ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಗದೀಶ್ ಅವರನ್ನು ಹತ್ಯೆ ಮಾಡಿದ ಆರೋಪಿಗಳು ಅಪ್ಪ-ಮಗ ಅಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮಧು ಮತ್ತು ಹರೀಶ್ ಕುಮಾರ್ ಸೇರಿಕೊಂಡು ಜಗದೀಶ್ ಅವರನ್ನು ನೆಲಮಂಗಳ ಬಳಿ ಶುಕ್ರವಾರ ಹತ್ಯೆ ಮಾಡಿದ್ದರು. [ಜಗದೀಶ್ ಹತ್ಯೆ : ಯಾರು ಏನು ಹೇಳಿದರು?]
ಆರೋಪಿ ಮಧುವಿನ ತಂದೆ ಕೃಷ್ಣಪ್ಪ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದ, ನಾಲ್ಕು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಶುಕ್ರವಾರ ಮಧುವಿನ ಜೊತೆಗಿದ್ದವನು ಹರೀಶ್ ಬಾಬು ಎಂಬುವವನಾಗಿದ್ದು, ಮಧು ಅವರ ಊರಿನವನೇ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಿಂದೆಯೂ ಇರಿದಿದ್ದರು : ಎಸ್ಐ ಜಗದೀಶ್ ಅವರಿಗೆ ಡ್ರಾಗರ್ನಿಂದ ಇರಿದ ಮಧು ಹಿಂದೆಯೂ ಇಂತಹ ಕೃತ್ಯ ನಡೆಸಿದ್ದ ಎಂಬುದು ಬಹಿರಂಗಗೊಂಡಿದೆ. ಕೆಲವು ವರ್ಷಗಳ ಹಿಂದೆ ತರೀಕೆರೆಯಲ್ಲಿ ತನ್ನನ್ನು ಹಿಡಿಯಲು ಬಂದ ಪೊಲೀಸ್ ಇನ್ಸ್ಪೆಕ್ಟರ್ಗೆ ಡ್ರಾಗರ್ನಿಂದ ಇರಿದು ಮಧು ಪರಾರಿಯಾಗಿದ್ದ. ಈ ಇಬ್ಬರು ಆರೋಪಿಗಳ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.












Click it and Unblock the Notifications