ಅದ್ಧೂರಿ ಕದಂಬೋತ್ಸವಕ್ಕೆ ಭರದ ಸಿದ್ಧತೆ
ಶಿರಸಿ, ಫೆಬ್ರವರಿ 9: ಇದೇ ತಿಂಗಳ 18 ಹಾಗೂ 19ರಂದು ನಡೆಯಲಿರುವ ಕದಂಬೋತ್ಸವ ಸಾಂಸ್ಕೃತಿಕ ಸಮ್ಮೇಳನಕ್ಕಾಗಿ ಭರದ ಸಿದ್ಧತೆಗಳು ಸಾಗಿವೆ. ಫೆಬ್ರವರಿ 16ರಂದು ಬೆಳಗ್ಗೆ 11:30ಕ್ಕೆ ಗುಡ್ನಾಪುರದಲ್ಲಿ ಕದಂಬ ಜ್ಯೋತಿಯನ್ನು ಬೆಳಗಿಸುವ ಮೂಲಕ ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವ ಆರ್. ವಿ. ದೇಶಪಾಂಡೆ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದ್ದು, ಕದಂಬೋತ್ಸವದ ಕಳೆಯನ್ನು ಹೆಚ್ಚಿಸಲಿದೆ ಎಂದು ಹೇಳಲಾಗಿದೆ.
ಕದಂಬೋತ್ಸವ ಸಂದರ್ಭದಲ್ಲಿ ನಡೆಯಲಿರುವ ಸಾಂಸ್ಕೃತಿಕ ಮೆರವಣಿಗೆ ವೇಳೆ, ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬಾಲಿವುಡ್ ಗಾಯಕ ಕುನಾಲ್ ಗಾಂಜಾವಾಲಾ ಹಾಗೂ ಎಂ.ಡಿ. ಪಲ್ಲವಿ ಅವರು ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಇದೇ ವೇಳೆ, 500ಕ್ಕೂ ಹೆಚ್ಚು ನೃತ್ಯಗಾರರ ತಂಡದಿಂದ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶೀಘ್ರವೇ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಬನವಾಸಿ ಜಯಂತಿ ಪ್ರೌಢಶಾಲಾ ಆವರಣದಲ್ಲಿ ಜರುಗಲಿವೆ.
18ರ ಮಧ್ಯಾಹ್ನ 2:30ಕ್ಕೆ ಆಕರ್ಷಕ ಮೆರವಣಿಗೆಗೆ ಬನವಾಸಿ ಮಧುಕೇಶ್ವರ ದೇವಾಲಯದಲ್ಲಿ ಚಾಲನೆ ನೀಡಲಾಗುತ್ತಿದೆ. ಅಂದು ಸಂಜೆ 7ಕ್ಕೆ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಫೆ. 19ರ ಮುಂಜಾನೆ ಪಂಪ, ಬನವಾಸಿ ಇತಿಹಾಸ ಹಾಗೂ ಪ್ರಾಧಿಕಾರದ ಕುರಿತು ಗೋಷ್ಠಿಗಳು ನಡೆಯಲಿವೆ.