ಆರ್ಭಟಿಸಿದ ಮುಂಗಾರು ಪೂರ್ವ ಮಳೆ, ಸೆಕೆ ಇಳಿಕೆ
ಬೆಂಗಳೂರು, ಮೇ 09: ರಾಜ್ಯದ ವಿವಿಧೆಡೆ ಭಾನುವಾರ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಮಳೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಕೋಲಾರ ಜಿಲ್ಲೆ ಅರಳೇಕೆರೆ, ರಾಯಚೂರಿನ ಲಿಂಗಸುಗೂರು, ಮೈಸೂರು ಜಿಲ್ಲೆ ಹುಣಸೂರುನಲ್ಲಿ ಭಾರೀ ಮಳೆಯಾಗಿದೆ. ಮಂಡ್ಯ ಜಿಲ್ಲೆ ಮೇಲುಕೋಟೆ ಸುತ್ತಮುತ್ತ ಭಾರಿ ಮಳೆ ಸುರಿದಿದೆ.[ಬೆಂಗಳೂರಿಗೆ ಹೀಗೆ ಬಂದು ಹಾಗೆ ಹೋದ ಮಳೆರಾಯ]

ಮಳೆ ಪರಿಣಾಮ ಮೇಲುಕೋಟೆ ದೇವಾಲಯಕ್ಕೆ ಹಾನಿಯಾಗಿದೆ. ಆಲಿಕಲ್ಲು ಮಳೆಗೆ ಕೋಲಾರ ಜಿಲ್ಲೆಯಲ್ಲಿ ಎಕರೆಗಟ್ಟಲೇ ಮಾವು ನೆಲಕಚ್ಚಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಮಳೆಗೆ 10 ಲಕ್ಷ ರೂ. ಮೌಲ್ಯದ ದ್ರಾಕ್ಷಿ ನೆಲಕಚ್ಚಿದೆ.
ಕಡಿಮೆಯಾದ ಉಷ್ಣಾಂಶ
ಉತ್ತರ ಕರ್ನಾಟದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗದಿದ್ದರೂ ಬಿಸಿಲಿನ ಪ್ರಭಾವ ಕಡಿಮೆಯಾಗಿದೆ. ವಿಜಯಪುರ, ಕಲಬುರಗಿ, ರಾಯಚೂರು ಸೇರಿ ಮತ್ತಿತರ ಜಿಲ್ಲೆಗಳಲಿ 40 ಡಿಗ್ರಿ ಇದ್ದ ಉಷ್ಣತೆ ಕೊಂಚ ತಗ್ಗಿದೆ. ದಕ್ಷಿಣ ಒಳನಾಡಿನಲ್ಲಿ ಇನ್ನು 2-3 ದಿನ ಮಳೆಯಾಗಲಿದೆ.[ಜೂನ್ ಮೊದಲ ವಾರ ಮುಂಗಾರು ಆಗಮನ ಪಕ್ಕಾ]
ಭಾನುವಾರದ ಬೆಂಗಳೂರು ಮಳೆ
ಬೆಂಗಳೂರಿನಲ್ಲಿ ಭಾನುವಾರ ಸಂಜೆ 5 ಗಂಟೆ ನಂತರ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, 5 ಮರ ಧರೆಗುರುಳಿವೆ. ಕೋರಮಂಗಲ 1ನೇ ಹಂತ, ಜೆ.ಪಿ.ನಗರ, ಜಯದೇವ ಆಸ್ಪತ್ರೆ ಮೇಲ್ಸೇತುವೆ ಬಳಿ ಮರ ಧರೆಗುರುಳಿವೆ. ಸಂಜೆ ಮಳೆ ಸುರಿದಿದ್ದರಿಂದ ಮೆಜೆಸ್ಟಿಕ್, ಮೇಖ್ರಿ ವೃತ್ತ, ಆನಂದರಾವ್ ವೃತ್ತ, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ರಾಜಾಜಿನಗರ, ಶಾಂತಿನಗರ, ಜಯನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ಥವಾಗಿತ್ತು.
ಮಲೆನಾಡಲ್ಲಿ ಮಳೆಯಿಲ್ಲ: ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾದ ವರದಿಯಾಗಿಲ್ಲ. ಕಳೆದ ವಾರ ಶಿವಮೊಗ್ಗ ನಗರ ಮತ್ತು ಚಿಕ್ಕಮಗಳೂರಿನ ಕೆಲ ಭಾಗದಲ್ಲಿ ವರುಣನ ಸಿಂಚನವಾಗಿತ್ತು.












Click it and Unblock the Notifications