ವೋಟಿಂಗ್ ಆಯ್ತು ಇದೀಗ ಬೆಟ್ಟಿಂಗ್ ಸರದಿ!
ಬೆಂಗಳೂರು, ಮೇ 13: ರಾಜ್ಯಾದ್ಯಂತ ಇರುವ ಎರಡು ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 222 ಕ್ಷೇತ್ರಗಳಲ್ಲಿ ಮತದಾನ ಶನಿವಾರ ನಡೆದಿದೆ. ಇದು ಹದಿನೈದನೇ ವಿಧಾನಸಭಾ ಚುನಾವಣೆಯಾಗಿದೆ.
ಬೇಸಿಗೆಯ ಉರಿಬಿಸಿಲನ್ನು ಲೆಕ್ಕಕ್ಕಿಡದೆ ರಾಜ್ಯ ಸುತ್ತಿದ್ದ ಪಕ್ಷಗಳ ನಾಯಕರು, ಕ್ಷೇತ್ರದ ಮೂಲೆಮೂಲೆಗೂ ತೆರಳಿ ಮತಯಾಚಿಸಿದ್ದ ಅಭ್ಯರ್ಥಿಗಳು ಈಗ ಸ್ವಲ್ಪ ನಿರಾಳ.
ಆದರೆ ಮನಸ್ಸು ಮಾತ್ರ ಲೆಕ್ಕಾಚಾರದಲ್ಲೇ ಮುಳುಗಿದೆ. ಶೇಕಡಾವಾರು ಮತದಾನ ಆಧರಿಸಿ ಯಾವ ಬೂತ್ನಲ್ಲಿ ಎಷ್ಟು ಮತ ಬಂದಿರಬಹುದು. ಯಾರು ಕೈಕೊಟ್ಟರು, ಯಾವ ವಿಚಾರ ಕೈಹಿಡಿಯಿತು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಕ್ಷೇತ್ರ ಸುತ್ತಿ ಬಳಲಿದ್ದ ಅಭ್ಯರ್ಥಿಗಳು ಮತದಾನ ಮುಗಿಯುತ್ತಿದ್ದಂತೆ ಯುದ್ಧವೊಂದನ್ನು ಮುಗಿಸಿದ ಭಾವದಲ್ಲಿ ಆಪ್ತರು ಹಾಗೂ ಬೆಂಬಲಿಗರೊಂದಿಗೆ ಸಮಾಲೋಚನೆಗಳನ್ನು ನಡೆಸಿದ್ದಾರೆ.

ಬೆಟ್ಟಿಂಗ್ ಭರಾಟೆ ಹೆಚ್ಚಳ: ಮತದಾನ ಮುಗಿದ ಕೂಡಲೇ ರಾಜ್ಯಾದ್ಯಂತ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಬೆಟ್ಟಿಂಗ್ ಕಟ್ಟಲು ಆರಂಭಿಸಿದ್ದಾರೆ. ಯಾರು ಗೆಲ್ಲುತ್ತಾರೆ, ಯಾವ ಪಕ್ಷ ಎಷ್ಟ ಸ್ಥಾನ ಗೆಲ್ಲುತ್ತದೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತಾರೆ, ಯಾರು ಸಿಎಂ ಆಗ್ತಾರೆ ಎಂಬಂತಹ ಬೆಟ್ಟಿಂಗ್ ಭರಾಟೆ ಆರಂಭವಾಗಿದೆ.
ಕೆಲವು ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಬಾಜಿ ನಡೆದಿದ್ದರೆ, ಅದರ ಜತೆಗೆ ಯಾವ ಪಕ್ಷ 100 ಸ್ಥಾನ ದಾಟಬಹುದು. ಕಾಂಗ್ರೆಸ್, ಬಿಜೆಪಿ ಪೈಕಿ ಯಾರು ಅಧಿಕಾರಕ್ಕೆ ಬರುತ್ತಾರೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಗೆಲ್ತಾರಾ, ಬಾದಾಮಿಯಲ್ಲಿ ಸಿದ್ದರಾಮಯ್ಯ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಪೈಕಿ ಯಾರು ಗೆಲ್ತಾರೆ, ರಾಮನಗರ, ಚನ್ನಪಟ್ಟಣ ಎರಡೂ ಕಡೆ ಕುಮಾರಸ್ವಾಮಿ ಗೆಲ್ಲುತ್ತಾರೆ ಹೀಗೆ ಬೆಟ್ಟಿಂಗ್ ಆರಂಭವಾಗಿದೆ. ಮತದಾನ ಫಲಿತಾಂಶ ಹೊರ ಬೀಳಲು ಇನ್ನು ಒಂದೇ ದಿನ ಬಾಕಿ ಇದೆ.











Click it and Unblock the Notifications