ಮದುವೆ ಈಗಿಲ್ಲ, ಸಿನಿಮಾ ಬಿಡೋದಿಲ್ಲ : ರಮ್ಯಾ
ಮಂಡ್ಯ, ಸೆ.14 : ಚುನಾವಣೆಗೆ ನಿಲ್ಲೋಕೆ ನಿಮ್ಗೆ ಯಾರು ಸ್ಪೂರ್ತಿ? ನೀವು ನಿಜವಾಗ್ಲೂ ಮಂಡ್ಯ್ಯದಲ್ಲೇ ಮನೆ ಮಾಡ್ತೀರಾ? ನೀವ್ ಯಾವಾಗ ಮದ್ವೆ ಆಗ್ತೀರಾ? ಹೀಗೆ ಸಂಸದೆ ರಮ್ಯಾ ಮೇಲೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದು ವಿದ್ಯಾರ್ಥಿಗಳು.
ಶುಕ್ರವಾರ ಮಂಡ್ಯ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸಂಸದೆ, ಚಿತ್ರ ನಟಿ ರಮ್ಯಾ ಅವರೊಂದಿಗೆ ಸಂವಾದ ನಡೆಸಿದರು, ಈ ಸಂದರ್ಭದಲ್ಲಿ ನಿಮ್ಮ ಚಿತ್ರದ ಹಾಡು ಹೇಳಿ ಎಂದು ಪೀಡಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ಕಾಲೇಜಿನ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕಾಗಿ ರಮ್ಯಾ ಆಗಮಿಸಿದ್ದರು. ಆದರೆ, ರಮ್ಯಾ ಭಾಷಣ ಮಾಡಲು ಆರಂಭಿಸಿದಾಗ, ಅದು ಸಂವಾದ ಕಾರ್ಯಕ್ರಮವಾಗಿ ಬದಲಾಯಿತು.
ನಿಮ್ಮ ಸಿನಿಮಾದ ಹಾಡು ಹೇಳಿ ಎಂದು ರಮ್ಯಾಗೆ ವಿದ್ಯಾರ್ಥಿಗಳು ಒತ್ತಾಯಿಸಿದರು. ''ಇದು ಹಾಡು ಹೇಳುವ ಅಥವಾ ಭಾಷಣ ಮಾಡುವ ಸಮಯವಲ್ಲ. ನಿಮ್ಮ ಸಮಸ್ಯೆಗಳಿದ್ದರೆ ಹೇಳಿಕೊಳ್ಳಿ" ಎಂದು ರಮ್ಯಾ ವಿದ್ಯಾರ್ಥಿಗಳಿಗೆ ಹೇಳಿದರು. ಇದರಿಂದ ರಮ್ಯಾ ಪ್ರಶ್ನೆಗಳ ಸುರಿಮಳೆಯನ್ನು ಎದುರಿಸಬೇಕಾಯಿತು. ಸಂವಾದ ಕಾರ್ಯಕ್ರಮದ ಪ್ರಮುಖ ಅಂಶಗಳು

ರಾಜಕೀಯಕ್ಕೆ ಬರಲು ಇಂದಿರಾಗಾಧಿ ಪ್ರೇರಣೆ
ಚುನಾವಣೆಗೆ ನಿಲ್ಲೋಕೆ ನಿಮ್ಗೆ ಯಾರು ಸ್ಪೂರ್ತಿ? ಎಂದು ಪ್ರಶ್ನಿಸಿದ ವಿದ್ಯಾರ್ಥಿನಿಯರಿಗೆ ಉತ್ತರ ನೀಡಿದ ರಮ್ಯಾ, ಇಂದಿರಾಗಾಂಧಿ, ಸೋನಿಯಾ ಗಾಂಧಿ ಅವರ ಪ್ರೇರಣೆಯಿಂದ ನಾನು ರಾಜಕೀಯ ಪ್ರವೇಶಿಸಿದ್ದೇನೆ ಎಂದರು.

ಮದುವೆ ಮಾತು ಸದ್ಯಕ್ಕಿಲ್ಲ
ನಿಮ್ಮ ಮದುವೆ ಯಾವಾಗ? ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರಮ್ಯಾ, ಮದುವೆ ಯಾವಾಗ ಅಂತ ನನಗೇ ಇನ್ನೂ ಗೊತ್ತಿಲ್ಲ. ಆ ಬಗ್ಗೆ ಇನ್ನೂ ಯೋಚಿಸಿಲ್ಲ. ಸದ್ಯ ರಾಜಕೀಯ ಪ್ರವೇಶ ಮಾಡಿದ್ದೇನೆ. ಲೋಕಸಭೆ ಸದಸ್ಯೆಯಾಗಿರುವ ನಾನು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಬೇಕು. ಈ ಸಮಯದಲ್ಲಿ ಮದುವೆ ಬಗ್ಗೆ ಯೋಚಿಸಲು ಸಮಯವೇ ಸಿಗುತ್ತಿಲ್ಲ. ಸದ್ಯಕ್ಕಂತೂ ನಾನು ಮದುವೆ ಆಗುವುದಿಲ್ಲ ಎಂದರು.

ಒಳ್ಳೆ ಕಥೆ ಸಿಕ್ಕರೆ ಸಿನಿಮಾ
ನೀವು ಸಿನಿಮಾ ಮಾಡೋಲ್ವಾ? ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಒಳ್ಳೆಯ ಕತೆಯೊಂದಿಗೆ ಅವಕಾಶ ನೀಡಿದರೆ ಖಂಡಿತಾ ನಟಿಸುತ್ತೇನೆ. ಆದರೆ, ರಾಜಕೀಯಕ್ಕೆ ನನ್ನ ಮೊದಲ ಆದ್ಯತೆ. ನಂತರ ಸಿನಿಮಾ ಎಂದು ಹೇಳಿದರು.

ಮಂಡ್ಯದಲ್ಲೇ ಮನೆ ಮಾಡುತ್ತೇನೆ
ನಾನು ಮಂಡ್ಯ ತಾಲೂಕು ಗೋಪಾಲಪುರದ ಎಂ.ಎಚ್. ಬೋರೇಗೌಡರ ಮೊಮ್ಮಗಳು. ಸದ್ಯದಲ್ಲೇ ನಾನು ಮಂಡ್ಯದಲ್ಲಿ ಮನೆ ಮಾಡುತ್ತೇನೆ ಎಂದು ರಮ್ಯಾ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಅಂಬರೀಷ್ ಸಹ ಹೀಗೆ ಹೇಳಿದ್ದರು. ಇಲ್ಲಿ ಮನೆ ಮಾಡಲೇ ಇಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ರಾಜಕೀಯಕ್ಕೆ ಬನ್ನಿ
ಕಾಲೇಜಿನಲ್ಲಿ ಎಲ್ಲರೂ ಚೆನ್ನಾಗಿ ಓದಿ. ಯುವಕರು ರಾಜಕೀಯಕ್ಕೆ ಬರಬೇಕು. ಈ ಕಾಲೇಜಿನಿಂದ 20 ವರ್ಷಗಳ ನಂತರ ಒಬ್ಬರು ಸಂಸದೆಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಗಾಯಮಾಡಿಕೊಂಡ ರಮ್ಯಾ
ಮದ್ದೂರು ತಾಲೂಕಿನ ಮುದ್ದನಹಳ್ಳಿಗೆ ಭೇಟಿ ನೀಡಿದ್ದ ರಮ್ಯಾ, ಶನೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಬಳೆಗಳನ್ನು ಪ್ರಸಾದವಾಗಿ ಪಡೆದಿದ್ದರು. ಅದನ್ನು ತೊಟ್ಟು ಕಾಲೇಜಿಗೆ ಆಗಮಿಸಿದ್ದರು. ವಿದ್ಯಾರ್ಥಿಗಳು ರಮ್ಯಾ ಕೈ ಕುರುಕುತ್ತಾ ಬಳೆ ಒಡೆದು ರಮ್ಯಾ ಕೈಗೆ ಗಾಯವಾಯಿತು. ಕೂಡಲೇ ಸಂಘಟಕರು ಬ್ಯಾಂಡೆಡ್ ತರಿಸಿಕೊಟ್ಟರು. ರಕ್ತ ಒರಿಸಿಕೊಂಡು ಗಾಯಕ್ಕೆ ಬ್ಯಾಂಡೆಡ್ ಹಚ್ಚಿಕೊಂಡ ರಮ್ಯಾ ತಮ್ಮ ಕೆಲಸ ಮುಂದುವರಿಸಿದರು.












Click it and Unblock the Notifications