ಕರ್ನಾಟಕದಲ್ಲಿ ಪಂಚಾಯತ್ ರಾಜ್ ಇಲಾಖೆ ಕಡೆಗಣನೆ: ಮಣಿಶಂಕರ್ ಅಯ್ಯರ್
ಬೆಂಗಳೂರು ಆಗಸ್ಟ್ 18: ಕರ್ನಾಟಕದಲ್ಲಿ ಕಾಂಗ್ರೆಸ್ ಹೊರತಾಗಿ ಅಧಿಕಾರಕ್ಕೆ ಬಂದ ಇತರ ಪಕ್ಷಗಳು ಪಂಚಾಯತ್ ರಾಜ್ ವ್ಯವಸ್ಥೆಯನ್ನು ನಿರ್ಲಕ್ಷಿಸಿವೆ ಎಂದು ಕೇಂದ್ರ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಬೇಸರ ವ್ಯಕ್ತಪಡಿಸಿದರು.
ಗುರುವಾರ ಬೆಂಗಳೂರಿನ ಕ್ವಿನ್ಸ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಹರಿಕಾರ ಎಂದರೆ ಅಬ್ದುಲ್ ನಜೀರ್ ಅವರು. ಅವರಿಂದ ಪ್ರೇರಣೆ ಪಡೆದ ರಾಜೀವ್ ಗಾಂಧಿ ಅವರು ವ್ಯವಸ್ಥೆಗೆ ಸಾಂವಿಧಾನಿಕ ತಿದ್ದುಪಡಿ ತಂದರು. ಅಂತಹ ಉತ್ತಮ ವ್ಯವಸ್ಥೆ ಕಡೆಗಣನೆಗೆ ಒಳಗಾಗಿದೆ ಎಂದು ಆಪಾದಿಸಿದರು.
ಇನ್ನೂ ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಯಾವ ಸ್ಥಿತಿಯಲ್ಲಿದೆ. ಈ ವ್ಯವಸ್ಥೆಯನ್ನು ಕಾಂಗ್ರೆಸ್ ನಾಯಕರು ಹೇಗೆ ಬಳಸಿಕೊಳ್ಳಬಹುದು, ಈ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಸಿಗುವ ಹಕ್ಕುಗಳು ಏನು?, ಇರುವ ಸವಲತ್ತುಗಳನ್ನು ಜನಸಾಮಾನ್ಯರಿಗೆ ತಿಳಿಸುವುದು, ಇದನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ, ಜನರ ಸಮಸ್ಯೆಗಳು ಅಥವಾ ಅಭಿಪ್ರಾಯ ಕುರಿತು ಚರ್ಚೆ ಮಾಡಲು ನಾವೆಲ್ಲರು ಇಲ್ಲಿ ಸಭೆ ಸೇರಿದ್ದೇವೆ ಎಂದು ಅವರು ವಿವರಿಸಿದರು.

ಅತ್ಯುತ್ತಮ ಪಂಚಾಯತ್ ರಾಜ್ ವ್ಯವಸ್ಥೆ ಇದೆ
ನನ್ನ ಪ್ರಕಾರ ರಾಜ್ಯದಲ್ಲಿ ಕರ್ನಾಟಕ ಪಂಚಾಯತ್ ಪರಿಷತ್ ಬಹಳ ಸಕ್ರಿಯವಾಗಿರುವ ಕಾರಣ ರಾಜ್ಯದಲ್ಲಿ ಅತ್ಯುತ್ತಮ ಪಂಚಾಯತ್ ವಿಭಾಗವನ್ನು ಹೊಂದಿದೆ. ಈ ವ್ಯವಸ್ಥೆ ಪರಿಣಾಮಕಾರಿ ಜಾರಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ಪಂಚಾಯತ್ ರಾಜ್ ಕಾನೂನುನ್ನು ತ್ವರಿತ ಜಾರಿ ಮಾಡದ ಹಿನ್ನೆಲೆ ಕಾಂಗ್ರೆಸ್ಸೇತರ ಸರ್ಕಾರಗಳು ನಿರ್ಲಕ್ಷಿಸಿವೆ ಎಂದರು.
ಇತ್ತೀಚೆಗೆ ರಮೇಶ್ ಕುಮಾರ್ ಅವರ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೆಲವು ಕಾನೂನು ಬದಲಾವಣೆಗಳನ್ನು ತರಲಾಗಿತ್ತು. ಉಳಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಇಷ್ಟು ಪ್ರಮಾಣದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿ ಸಮಯದಲ್ಲಿನ ವಿಚಾರಗಳನ್ನು ಸರಿಯಾಗಿ ಪರಿಶೀಲನೆ ನಡೆಸಿಲ್ಲ. ಇದು ದೇಶದಲ್ಲೇ ಅತ್ಯಂತ ಅತ್ಯುತ್ತಮ ಪಂಚಾಯತ್ ರಾಜ್ ಕಾನೂನು ಆಗಿದೆ ಎಂದು ಕಾಂಗ್ರೆಸ್ ಕಾಲದ ಬೆಳವಣಿಗೆ ಬಗ್ಗೆ ಹೇಳಿದರು.

ಇಂದಿನ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವ್ಯತ್ಯಾಸ
ದೇಶಾದ್ಯಂತ ರಾಜೀವ್ ಗಾಂಧಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಳಿಸದ ನಂತರ ಇದರಲ್ಲಿ ಸಾಕಷ್ಟು ಸುಧಾರಣೆ ಆಗಿವೆ. ಕೆಲವು ಭಾಗಗಳಲ್ಲಿ ಗಣನೀಯ ಸುಧಾರಣೆ ಆದರೆ ಮತ್ತೆ ಕಲವು ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಬದಲಾವಣೆ ಕಂಡಿವೆ. 1993 ಹಾಗೂ ಅದಕ್ಕೂ ಮುನ್ನದ ಪಂಚಾಯತ್ ರಾಜ್ ವ್ಯವಸ್ಥೆಗೆ ಮತ್ತು ಈಗಿರುವ ವ್ಯವಸ್ಥೆಗೆ ಅಜಗಜಾಂತರ ವ್ಯತ್ಯಾಸವನ್ನು ನಾವು ಕಾಣಬಹುದಗಿದೆ.

ಪಂಚಾಯತ್ ಚುನಾವಣೆ ನಡೆಸುತ್ತಿಲ್ಲ
ಪ್ರಸ್ತುತದಲ್ಲಿ ಈ ವ್ಯವಸ್ಥೆಯನ್ನು ಕುಗ್ಗಿಸಬಹುದೇ ವಿನಃ ಸಂಪೂರ್ಣ ನಿರ್ಣಾಮ ಅಸಾಧ್ಯ. ಈಗಲೂ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಿಗದಿತ ಸಮಯಕ್ಕೆ ನಡೆಸುತ್ತಿಲ್ಲ. ಆದರೆ ನ್ಯಾಯಾಂಗ, ಶಾಸಕಾಂಗಗಳು ಈ ಚುನಾವಣೆಯನ್ನು ನಡೆಸಲು ಆಗ್ರಹಿಸಿ ಸರ್ಕಾರವನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುತ್ತಿವೆ ಎಂದು ತಿಳಿಸಿದರು.

ಭಾರತದಲ್ಲೇ ಹೆಚ್ಚು ಮಹಿಳಾ ಜನಪ್ರತಿನಿಧಿಗಳು
ಪಂಚಾಯತ್ ರಾಜ್ ವ್ಯವವಸ್ಥೆಯಲ್ಲಿ 40 ಲಕ್ಷ ಮಹಿಳೆಯರು ಪಂಚಾಯತಿ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳಾಗಿದ್ದಾರೆ. ವಿಶ್ವದ ಇತರೆ ಭಾಗಗಳಲ್ಲಿನ ಒಟ್ಟಾರೆ ಮಹಿಳಾ ಜನ ಪ್ರತಿನಿಧಿಗಳಿಗಿಂತ ಭಾರತದಲ್ಲಿ ಹೆಚ್ಚಿನ ಮಹಿಳಾ ಜನಪ್ರತಿನಿಧಿಗಳು ಈ ವ್ಯವಸ್ಥೆಯಡಿ ಆಯ್ಕೆ ಮಾಡಲಾಗಿದೆ ಎಂದರು.
ಈ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸಿ. ನಾರಾಯಣ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications