ಸಿಎಂ ಕಾರ್ಯಕ್ರಮದಲ್ಲಿ ಅಂಗವಿಕಲರಿಗಿಲ್ಲ ಬೆಲೆ
ಕಡೂರು, ಜನವರಿ 06: ನಿನ್ನೆ ಕಡೂರಿನಲ್ಲಿ ನಡೆದ ಮುಖ್ಯಮಂತ್ರಿಗಳ ಸಾಧನಾ ಸಮಾವೇಶದ ಸಮಯದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಆಗಲು ಕಾತರಿಸಿದ ಅಂಗವಿಕಲ ವ್ಯಕ್ತಿಯೊಬ್ಬನ ಬಳಿ ಪೊಲೀಸರು ದರ್ಪದಿಂದ ವರ್ತಿಸಿದ್ದಾರೆ.
ಕಡೂರಿನಲ್ಲಿ ಮುಖ್ಯಮಂತ್ರಿಗಳ ಭಾಷಣ ಮುಗಿದ ಕೂಡಲೆ ಮುಖ್ಯಮಂತ್ರಿಗಳನ್ನು ಭೇಟಿ ಆಗಲು ಎರಡೂ ಕಾಲಿಲ್ಲದ ಮುಸ್ಲಿಂ ವ್ಯಕ್ತಯೊಬ್ಬ ತೆವಳುತ್ತಾ ವೇದಿಕೆ ಬಳಿ ಹೋಗಲು ಕಷ್ಟಪಡುತ್ತಿದ್ದ ಆದರೆ ಅಲ್ಲಿದ್ದ ಒಬ್ಬ ಪಿಎಸ್ಐ ಅಂಗವಿಕಲನನ್ನು ಅನಾಮತ್ತು ಎತ್ತಿ ವೇದಿಕೆಯಿಂದ ದೂರ ಇರಿಸಿ ಆತನನ್ನು ವೇದಿಕೆ ಹತ್ತದಂತೆ ತಡೆದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸರ್ವರಿಗೂ ಸಮಬಾಳ್ವೆ, ನೊಂದವರ ಪರ ಧನಿ ಮತ್ತಿತರ ವಿಷಯಗಳ ಬಗ್ಗೆ ಒಂದು ಗಂಟೆ ಕಾಲ ಒಣ ಭಾಷಣ ಬಿಗಿದ ಸಿಎಂ ಸಿದ್ದರಾಮಯ್ಯ ಅವರ ಎದುರೇ ಅವರ ಭಾಷಣದ ಆಶಯಕ್ಕೆ ವಿರುದ್ಧವಾದ ಘಟನೆ ನಡೆದಿದೆ. ಘಟನೆ ನಡೆದಾಗ ಅಲ್ಲಿ ಪೊಲೀಸರ ಜೊತೆಗೆ ವಿವಿಧ ಕಾಂಗ್ರೆಸ್ ಕಾರ್ಯಕರ್ತರು ಇದ್ದರೂ ಸಹ ಯಾರೊಬ್ಬರು ಕೂಡ ಅಂಗವಿಕಲನ ಮೊರೆ ಏನು ಎಂದು ಕೇಳಲಿಲ್ಲ, ಆತನ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವ ಭರವಸೆಯನ್ನು ನೀಡಲಿಲ್ಲ.

ಜನಜಂಗುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಆತನನ್ನು ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋಗಿ ಬಿಡುವ ಕನಿಷ್ಟ ಸೌಜನ್ಯವನ್ನೂ ಅಲ್ಲಿದ್ದ ಪೊಲೀಸರಾಗಲಿ, ಕಾಂಗ್ರೆಸ್ ಕಾರ್ಯಕರ್ತರು ಮಾಡಲಿಲ್ಲ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ.
ರಾಜಕಾರಣಿಗಳ ಆದರ್ಶಗಳು ಕೇವಲ ಭಾಷಣಗಳಿಗಷ್ಟೇ ಸೀಮಿತ, ಜನಸ್ನೇಹಿ ಪೊಲೀಸ್ ಎಂಬುದು ಅಧಿಕಾರಿಗಳ ಬಾಯಿ ತೆವಲಿನ ಮಾತಷ್ಟೆ ಎಂಬುದು ನಿನ್ನೆ ಕಡೂರಿನಲ್ಲಿ ನಡೆದ ಘಟನೆಯಿಂದ ವೇದ್ಯವಾಗಿದೆ. ರಾಜಕಾರಣಿಗಳು ನುಡಿದಂತೆ ನಡೆದುಕೊಳ್ಳಲಿ ಎಂಬುದು ಸಾರ್ವಕಾಲಿಕ ಆಶಯವಷ್ಟೆ.












Click it and Unblock the Notifications