ಮೋದಿ ಕರ್ನಾಟಕಕ್ಕೆ ಬಂದ್ರೆ ಏನೆಲ್ಲಾ ಮಾಡಲಿದ್ದಾರೆ ಗೊತ್ತಾ?
ಬೆಂಗಳೂರು,ಜೂ.16: ಇದೇ ಜೂ. 20 ಹಾಗೂ 21 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು ಹಾಗೂ ಮೈಸೂರಿನಲ್ಲಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂ. 20 ರಂದು ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ದೇಶದ ಪ್ರಥಮ ಹವಾನಿಯಂತ್ರಿತ ರೈಲ್ವ ನಿಲ್ದಾಣ 'ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್' ಗೆ ಪ್ರಧಾನಿ ಮೋದಿ ಚಾಲನೆ ಕೊಡಲಿದ್ದಾರೆ. ಅ ಬಳಿಕ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಆಯೋಜಿಸಿರುವ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. ಇದರ ಜತೆಗೆ ಅದೇ ದಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿವಿಧ ಕಟ್ಟಡಗಳ ಉದ್ಘಾಟನೆ ಮಾಡಲಿದ್ದು, ಕೊಮ್ಮಘಟ್ಟದಲ್ಲಿ ಸಬ್ ಅರ್ಬನ್ ರೈಲ್ವೇ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಮಧ್ಯೆ ಜೂ. 20ರಂದು ಬೆಂಗಳೂರಿನಲ್ಲಿ ನರೇಂದ್ರ ಮೋದಿ ಅವರಿಂದ ರೋಡ್ ಶೋ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವುದರಿಂದ ನಗರದ ಜನರನ್ನು ಸೆಳೆಯಲು ಮೋದಿ ಅವರು ಸುಮಾರು 12 ಕಿ.ಮೀ. ರೋಡ್ ಶೋ ನಡೆಸುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಇನ್ನೂ ಅಂತಿಮವಾಗಿಲ್ಲ.

ಯೋಗಾ ಡೇ ಕಾರ್ಯಕ್ರಮದಲ್ಲಿ ಮೋದಿ:
ಜೂ. 21 ರಂದು ಮೈಸೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು ಯೋಗ ಮಾಡಲಿದ್ದಾರೆ. ಮಹಾರಾಜ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಮೈಸೂರಿಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪತ್ರಿಕಾ ಹಾಗೂ ವಿದ್ಯುನ್ಮಾನ ವರದಿಗಾರರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪಾಸ್ ಪಡೆಯಬೇಕು. ವಾರ್ತಾ ಇಲಾಖೆಯಲ್ಲಿ ಮಾನ್ಯತೆ ಪಡೆದಿರುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳಿಗೆ ಒಂದು ಸಂಸ್ಥೆಯಿಂದ ಇಬ್ಬರಿಗಷ್ಟೇ ಅಧಿಕೃತ ಪ್ರವೇಶ ದೊರೆಯಲಿದೆ.

ಮೋದಿ ಸ್ವಾಗತಕ್ಕೆ ದಸರಾ ಡೆಕೋರೇಷನ್:
ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಅರಮನೆ ನಗರಿಯನ್ನು ದಸರಾ ಮಾದರಿ ಶೃಂಗಾರಗೊಳಿಸಲಾಗಿದೆ. ಮೈಸೂರು ಅರಮನೆ ಮೈದಾನದಲ್ಲಿ ಆಯೋಜಿಸಿರುವ ಯೋಗ ದಿನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಅವರ ಯೋಗ ವೇದಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗುತ್ತದೆ. ಉಳಿದ ಯಾರಿಗೂ ಪ್ರವೇಶ ಅವಕಾಶ ಇರುವುದಿಲ್ಲ. ನನಗೂ ಸಹ ಪ್ರವೇಶ ಅವಕಾಶ ಇರುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೋದಿ ಜತೆ ಕೇಂದ್ರ ಆಯುಷ್ ಸಚಿವರು ಇರಲಿದ್ದಾರೆ. ಶಾಸಕರು ಸೇರಿದಂತೆ ನಾವೆಲ್ಲರೂ ವೇದಿಕೆಯ ಕೆಳ ಭಾಗದ ಒಂದು ಬದಿಯಲ್ಲಿ ಇರಬೇಕಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನನ್ನ ಹಾಗೂ ರಾಮದಾಸ್ ನಡುವೆ ಯಾವ ಕ್ರೆಡಿಟ್ ವಾರ್ ನಡೆಯುತ್ತಿಲ್ಲ. ಮೋದಿ ಅವರ ವೇದಿಕೆ ಮುಂಭಾಗ 7 ಸಾವಿರ ಜನಕ್ಕೆ ಅವಕಾಶ ನೀಡಿದ್ದು, ಎಲ್ಲರಿಗೂ ಮೋದಿ ಕಾಣುವುದಿಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.












Click it and Unblock the Notifications