ಪರಮೇಶ್ವರ್ ಕೈತಪ್ಪುತ್ತಾ ವಿಧಾನಪರಿಷತ್ ಸ್ಥಾನ?
ಬೆಂಗಳೂರು, ಜ.17 : ಖಾಲಿ ಇರುವ ಒಂದು ವಿಧಾನಪರಿಷತ್ ಸ್ಥಾನವನ್ನು ಭರ್ತಿ ಮಾಡಲು ಸಿಎಂ ಸಿದ್ದರಾಮಯ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸದ್ಯ, ಈ ಸ್ಥಾನಕ್ಕೆ ಭಾರೀ ಲಾಬಿ ಆರಂಭವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸ್ಥಾನ ಕೈ ತಪ್ಪುವ ಭೀತಿ ಎದುರಾಗಿದೆ. ಮೂವರು ಪರಿಷತ್ ಸ್ಥಾನದ ಆಕಾಂಕ್ಷಿಗಳಾಗಿದ್ದು, ಆಯ್ಕೆ ಮಾಡುವ ಹೊಣೆ ಸಿಎಂ ಹೆಗಲಮೇಲಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ವಿಧಾನಪರಿಷತ್ ನಾಮ ನಿರ್ದೇಶಿತ ಸದಸ್ಯರಾಗಿದ್ದ ಮುಮ್ತಾಜ್ ಅಲಿಖಾನ್ ರಾಜೀನಾಮೆಯಿಂದ ಒಂದು ಸ್ಥಾನ ಖಾಲಿಯಾಗಿತ್ತು. ಈ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ನೇಮಕಮಾಡಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿ ದಟ್ಟವಾಗಿತ್ತು. ಆದರೆ, ನಾಮ ನಿರ್ದೇಶಿತರನ್ನು ಆಯ್ಕೆ ಮಾಡುವಲ್ಲಿ ಸಿಎಂ ವಿಳಂಭ ಧೋರಣೆ ಅನುಸರಿಸುತ್ತಿದ್ದಾರೆ. [ಪರಮೇಶ್ವರ್ ಸಂಪುಟ ಸೇರೋದು ಸುಲಭ]

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಧಾನಪರಿಷತ್ ನಾಮ ನಿರ್ದೇಶನದ ಕುರಿತು ಚರ್ಚೆ ನಡೆದು, ಸದಸ್ಯರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸಿಎಂಗೆ ಹೆಗಲಿಗೆ ವಹಿಸಲಾಗಿದೆ. ಜಿ.ಪರಮೇಶ್ವರ್, ಕೆ.ಪಿ.ನಂಜುಡಿ, ಜಬ್ಬಾರ್, ಇಕ್ಬಾಲ್ ಅಹಮದ್ ಸರಡಗಿ ಈ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದು, ಯಾರಿಗೆ ಸ್ಥಾನ? ಎಂಬುದು ತೀರ್ಮಾನವಾಗಿಲ್ಲ. [ಪರಿಷತ್ ಸ್ಥಾನ ನೇಮಕ ಸಿಎಂ ಜವಾಬ್ದಾರಿ]
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ವಿಧಾನಪರಿಷತ್ ಸದಸ್ಯರಾಗಿ ನೇಮಕ ಮಾಡಲು ಹೈಕಮಾಂಡ್ ನಾಯಕರು ಒಪ್ಪಿಗೆ ನೀಡಿಲ್ಲ. ಆದ್ದರಿಂದ ಸಿಎಂ ಸಿದ್ದರಾಮಯ್ಯ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಸದ್ಯ ಒಂದು ಸ್ಥಾನಕ್ಕಾಗಿ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದು, ಸ್ಥಾನ ಪರಮೇಶ್ವರ್ ಅವರ ಕೈ ತಪ್ಪಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಬ್ಟಾರ್, ಮೇಲ್ಮನೆ ಸದಸ್ಯ ಸ್ಥಾನಕ್ಕೆ ನೇಮಕವಾಗಬೇಕಾಗಿದ್ದ ಇಕ್ಬಾಲ್ ಅಹಮದ್ ಸರಡಗಿ, ಕೆ.ಪಿ.ನಂಜುಡಿ ಸದ್ಯ ಖಾಲಿ ಇರುವ ಒಂದು ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಮುಮ್ತಾಜ್ ಅಲಿಖಾನ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಮುಸ್ಲಿಂಮರನ್ನು ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿಎಂ ಮೌನ : ಸುಮಾರು ಆರು ತಿಂಗಳಿನಿಂದ ಖಾಲಿ ಇರುವ ವಿಧಾನಪರಿಷತ್ ಸ್ಥಾನವನ್ನು ತುಂಬುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ವಹಿಸಿದ್ದಾರೆ. ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಲೋಕಸಭಾ ಚುನಾವಣೆ ಮುಗಿಯುವವರೆಗೂ ಈ ಸ್ಥಾನ ಭರ್ತಿ ಮಾಡುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ. ಖಾಲಿ ಇರುವ ಒಂದು ಸ್ಥಾನಕ್ಕೆ ಯಾರು ಆಯ್ಕೆ ಆಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.












Click it and Unblock the Notifications