ಬಿಜೆಪಿ ಹೈಕಮಾಂಡ್ ಮೇಲೆ ವಿ.ಸೋಮಣ್ಣ ಮುನಿಸು: ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಹುಬ್ಬಳ್ಳಿ, ಜನವರಿ 06: ವಿಧಾನಸಭಾ ಚುಣಾವಣೆಯಲ್ಲಿ ಸೋಲು ಕಂಡ ಮಾಜಿ ಸಚಿವ ವಿ ಸೋಮಣ್ಣ ಈಗಾಗಲೇ ನಮ್ಮೊಂದಿಗೆ ಮಾತನಾಡಿದ್ದಾರೆ. ಅವರಿಗೆ ದೆಹಲಿಗೆ ಬಾ ಎಂದು ಹೇಳಿದ್ದೇವೆ. ಅಲ್ಲಿ ನಮ್ಮ ಹೈಕಮಾಂಡ್ ಮಾತನಾಡಿ ಅವರ ಮುನಿಸು ಬಗೆಹರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಭಾರತ ಹಿಂದೂ ರಾಷ್ಟ್ರ ಆದರೆ ಪಾಕಿಸ್ತಾನ ತರಹ ಆಗುತ್ತದೆ ಎಂದು ಹೇಳಿಕೆ ಕೊಟ್ಟಿರುವ ಬಿ.ಕೆ.ಹರಿಪ್ರಸಾದ್ ವಿಚಾರವಾಗಿ, ಇದು ತುಷ್ಟಿಕರಣದ ಪರಾಕಾಷ್ಠೆ ಆಗಿದೆ, ಅಪಘಾನಿಸ್ತಾನ, ಪಾಕಿಸ್ತಾನ, ಇರಾನ್ ದೇಶದಲ್ಲಿ ಜಾತ್ಯಾತೀತ ಇಲ್ಲ, ಭಾರತದಲ್ಲಿ ಜಾತ್ಯಾತೀತ ರಾಷ್ಟ್ರ, ಹೀಗಾಗಿ ಇಲ್ಲಿ ಅಂತಹ ಪರಿಸ್ಥಿತಿ ಬರೊದಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ಜ.22 ರಂದು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರದ ಸಂಭ್ರಮವನ್ನು ತಾಳಲಾರದೆ ಹೊಟ್ಟೆ ಕಿಚ್ಚಿನಿಂದ ಕಾಂಗ್ರೇಸ್'ನವರು ಹಿಂದೂಗಳು ಸಮಾರಂಭದಲ್ಲಿ ಭಾಗವಹಿಸಬಾರದೆಂಬ ಉದ್ದೇಶದಿಂದ ರಾಜ್ಯದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ನೀತಿ ಆಗಿದೆ
ಕಾಂಗ್ರೆಸ್ ಒಂದು ಕೋಮಿನ ಮತಕ್ಕಾಗಿ ಈ ಮಟ್ಟಕ್ಕೆ ಇಳಿದಿದೆ. ಈಗಾಗಲೇ ಕರಸೇವಕನ ಬಂಧನ ಮಾಡುವ ಮೂಲಕ ಕಾಂಗ್ರೆಸ್ ಕೈ ಸುಟ್ಟುಕೊಂಡಿದೆ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಬಾಲೀಶ್ ಹೇಳಿಕೆ ಕೊಡುವುದು ಸರಿಯಲ್ಲ, ಅವರಿಗೆ ಶೋಭೆ ತರುವುದಿಲ್ಲ ಎಂದರು.
ಬಿಜೆಪಿ ಕರಸೇವಕನ ಬಂಧನವನ್ನು ರಾಜಕೀಯಕ್ಕೆ ಬಳಕೆ ಮಾಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡಿಲ್ವಾ? ಶ್ರೀಕಾಂತ್ ಪೂಜಾರನನ್ನು ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ಅರೆಸ್ಟ್ ಮಾಡಿದ್ದಾರಾ? ಈಗಾಗಲೇ ಗಲಭೆ ವಿಚಾರದಲ್ಲಿ ಎ-1, ಎ-3, ಎ-5, ಎ-7 ಆರೋಪಿಗಳು ಬೇಲ್ ಪಡೆದಿದ್ದಾರೆ. ಅಲ್ಲದೇ ಎಫ್ಐಆರ್ ಕಳೆದೊಗಿದೆ. ಆದರೆ ಸಿದ್ದರಾಮಯ್ಯ ಯಾವ ಆಧಾರದ ಮೇಲೆ ಶ್ರೀಕಾಂತ್ ಪೂಜಾರ ಮೇಲೆ 16 ಕೇಸ್'ಗಳಿವೆ ಎಂದು ಹೇಳತ್ತಾರೆ. ಅವರು ಅಧಿಕಾರಿಯಲ್ಲ, ರಾಜ್ಯದ ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿದ್ದು ಬಾಲೀಶ್ ಹೇಳಿಕೆ ಕೊಡಬಾರದು ಎಂದು ಕುಟುಕಿದರು.
ನ.9 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಈಗಾಗಲೇ ಶ್ರೀಕಾಂತ್ ಪೂಜಾರಗೆ ಜಾಮೀನು ಸಿಕ್ಕಿದೆ. ಈ ದಿಸೆಯಲ್ಲಿ ಮುಂದೆ ಹೋರಾಟ ಮಾಡಬೇಕು, ಬೇಡ್ವೋ ಎಂಬ ಬಗ್ಗೆ ಇಂದು ವಿಪಕ್ಷ ನಾಯಕ ಆರ್.ಅಶೋಕ, ಹಾಗೂ ಶಾಸಕ ಅರವಿಂದ ಬೆಲ್ಲದ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.
ಶ್ರೀಕಾಂತ್ ಪೂಜಾರಗೆ ಬಿಜೆಪಿ ಧಾರವಾಡ ಲೋಕಸಭಾ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿರುವ ಅಭಿಯಾನಕ್ಕೆ ನೋ ಕಾಮೆಂಟ್ಸ್ ಅದೊಂದು ಸಣ್ಣ ಮಕ್ಕಳ ಹೇಳಿಕೆ ಎಂದರು.












Click it and Unblock the Notifications