ವಿರೋಧ ಪಕ್ಷಗಳ ಸಭೆ; ಮುಂದಿನ ಸಭೆಯ ಸ್ಥಳ ಘೋಷಣೆ
ಬೆಂಗಳೂರು, ಜುಲೈ 18; ಲೋಕಸಭೆ ಚುನಾವಣೆ 2024ರ ಕಾರ್ಯತಂತ್ರ ರಚಿಸಲು ಬೆಂಗಳೂರಿನಲ್ಲಿ ನಡೆಯುತ್ತಿದ್ದ ವಿರೋಧ ಪಕ್ಷಗಳ ಸಭೆ ಮುಕ್ತಾಯಗೊಂಡಿದೆ. ಎರಡು ದಿನದ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಮೈತ್ರಿಕೂಟಕ್ಕೆ INDIA ಎಂದು ನಾಮಕರಣ ಮಾಡಲಾಗಿದೆ.
ಮಂಗಳವಾರ ಸಂಜೆ ವಿರೋಧ ಪಕ್ಷಗಳ ಸಭೆ ಮುಕ್ತಾಯಗೊಂಡ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "ಮುಂದಿನ ಸಭೆಯನ್ನು ಮುಂಬೈನಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಶೀಘ್ರವೇ ದಿನಾಂಕ ಘೋಷಣೆ ಮಾಡಲಾಗುತ್ತದೆ" ಎಂದರು.

ವಿರೋಧ ಪಕ್ಷಗಳ ಮೊದಲ ಸಭೆ ಬಿಹಾರದ ಪಾಟ್ನಾಟದಲ್ಲಿ ನಡೆದಿತ್ತು. 2ನೇ ಸಭೆ ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದ ಬೆಂಗಳೂರಿನಲ್ಲಿ ನಡೆದಿದೆ. 3ನೇ ಸಭೆಯನ್ನು ಮುಂಬೈನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಸಭೆಯ ದಿನಾಂಕ ಮಾತ್ರ ಇನ್ನೂ ಅಂತಿಮವಾಗಿಲ್ಲ. ಆಗಸ್ಟ್ 6ರಂದು ಸಭೆ ನಡೆಯುವ ನಿರೀಕ್ಷೆ ಇದೆ.
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "ಸಭೆಯಲ್ಲಿ 11 ಜನರ ಸಮನ್ವಯ ಸಮಿತಿ ರಚನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಸಮಿತಿಯ ಸದಸ್ಯರ ಹೆಸರನ್ನು ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಘೋಷಣೆ ಮಾಡಲಾಗುತ್ತದೆ" ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ INDIA (Indian National Developmental Inclusive Alliance) ಎಂದು ನಾಮಕರಣ ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆದಿದ ಮಲ್ಲಿಕಾರ್ಜುನ ಖರ್ಗೆ, "ಎನ್ಡಿಎ 30 ಪಕ್ಷಗಳ ಜೊತೆ ಸಭೆಯನ್ನು ನಡೆಸುತ್ತಿದೆ. ನಾನು ದೇಶದಲ್ಲಿ ಅಷ್ಟು ಪಕ್ಷಗಳ ಹೆಸರು ಕೇಳಿಯೇ ಇಲ್ಲ. ಮೊದಲು ಅವರು ಸಭೆ ನಡೆಸಲು ತೀರ್ಮಾನಿಸಿರಲಿಲ್ಲ. ಈಗ ಒಂದೊಂದೆ ಪಕ್ಷದ ಸಭೆಯನ್ನು ನಡೆಸುತ್ತಿದ್ದಾರೆ" ಎಂದರು.
"ಪ್ರಧಾನಿ ನರೇಂದ್ರ ಮೋದಿ ಈಗ ವಿರೋಧ ಪಕ್ಷಗಳನ್ನು ನೋಡಿ ಹೆದರಿದ್ದಾರೆ. ನಾವು ಇಲ್ಲಿ ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ಉಳಿಸಲು ಸೇರಿದ್ದೇವೆ" ಎಂದು ಖರ್ಗೆ ಹೇಳಿದರು.
ಪ್ರಧಾನಿ ಹುದ್ದೆ ಬಗ್ಗೆ ಸ್ಪಷ್ಟ ಸಂದೇಶ; ಮಂಗಳವಾರ ವಿರೋಧ ಪಕ್ಷಗಳ ಸಭೆಯ 2ನೇ ದಿನ ಕಾಂಗ್ರೆಸ್ ಪಕ್ಷ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದೆ. ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, "ಕಾಂಗ್ರೆಸ್ ಪಕ್ಷ ಅಧಿಕಾರವಾಗಲಿ, ಪ್ರಧಾನ ಮಂತ್ರಿ ಹುದ್ದೆಯ ಬಗ್ಗೆಯಾಗಲಿ ಯಾವುದೇ ಆಸಕ್ತಿ ಹೊಂದಿಲ್ಲ" ಎಂದರು.
"ಆಡಳಿತ ಪಕ್ಷದ ನಾಯಕರು, ಅಧ್ಯಕ್ಷರು ರಾಜ್ಯದಿಂದ ರಾಜ್ಯಕ್ಕೆ ಓಡುತ್ತಿದ್ದಾರೆ. ಹಳೆಯ ದೋಸ್ತಿಗಳನ್ನು ಮತ್ತೆ ಒಂದು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ನಾವು 26 ಪಕ್ಷಗಳಿದ್ದು, 11 ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದ್ದೇವೆ. ಬಿಜೆಪಿ ಸ್ವತಂತ್ರವಾಗಿ 303 ಸೀಟುಗಳನ್ನು ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ ಹಳೆಯ ಮಿತ್ರರನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದರು.
ವಿರೋಧ ಪಕ್ಷಗಳ ಮುಂದಿನ ಸಭೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿದೆ. ಮುಂಬೈ ಶಿವಸೇನೆ, ಎನ್ಸಿಪಿ ಪಕ್ಷದ ಭದ್ರ ನೆಲೆಯಾಗಿದೆ. 82 ವರ್ಷದ ಶರದ್ ಪವಾರ್ ಮಂಗಳವಾರ ಬೆಂಗಳೂರಿಗೆ ಆಗಮಿಸಿ ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದರು. ಪಾಟ್ನಾದಲ್ಲಿ ಮೊದಲ ಸಭೆಯಲ್ಲಿಯೂ ಶರದ್ ಪವಾರ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ಸಭೆಯಲ್ಲಿ ವಿವಿಧ ಪಕ್ಷಗಳ ಮನವೊಲಿಕೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಬೆಂಗಳೂರಿಗೆ ಸೋಮವಾರವೇ ಆಗಮಿಸಿ ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂದಿನ ಸಭೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ಕುರಿತು ಪ್ರಮುಖವಾಗಿ ಚರ್ಚೆ ನಡೆಯಲಿದೆ.












Click it and Unblock the Notifications