ವಿರೋಧ ಪಕ್ಷಗಳ ಸಭೆ; ಪ್ರಧಾನಿ ಹುದ್ದೆ ಬಗ್ಗೆ ಕಾಂಗ್ರೆಸ್ ನಿಲುವು ಬಹಿರಂಗ!
ಬೆಂಗಳೂರು, ಜುಲೈ 18; ಮುಂದಿನ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರಚನೆ ಮಾಡಲು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯುತ್ತಿದೆ. ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದಾರೆ.
ಮಂಗಳವಾರ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ, ಮೈತ್ರಿಕೂಟದ ಹೆಸರು, ಸೀಟು ಹಂಚಿಕೆ ಹೀಗೆ ಆರು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ. ಸಭೆಯ ಬಳಿಕ ಸಂಜೆ 4 ಗಂಟೆಗೆ ವಿರೋಧ ಪಕ್ಷಗಳ ನಾಯಕರು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ, ಮಾಹಿತಿ ನೀಡಲಿದ್ದಾರೆ.

ವಿರೋಧ ಪಕ್ಷಗಳ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. "ಕಾಂಗ್ರೆಸ್ ಪಕ್ಷ ಅಧಿಕಾರವಾಗಲಿ, ಪ್ರಧಾನ ಮಂತ್ರಿ ಹುದ್ದೆಯ ಬಗ್ಗೆಯಾಗಲಿ ಯಾವುದೇ ಆಸಕ್ತಿ ಹೊಂದಿಲ್ಲ" ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾಂಗ್ರೆಸ್ನಿಂದ ಯಾರೂ ಪ್ರಧಾನಿ ಅಭ್ಯರ್ಥಿ ಆಗಲ್ಲ ಎಂಬ ಸಂದೇಶ ನೀಡಿದರು.
ಬಿಜೆಪಿ ವಿರುದ್ಧ ಟೀಕೆ; ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯನ್ನು ಟೀಕಿಸಿದರು. "ಆಡಳಿತ ಪಕ್ಷದ ನಾಯಕರು, ಅಧ್ಯಕ್ಷರು ರಾಜ್ಯದಿಂದ ರಾಜ್ಯಕ್ಕೆ ಓಡುತ್ತಿದ್ದಾರೆ. ಹಳೆಯ ದೋಸ್ತಿಗಳನ್ನು ಮತ್ತೆ ಒಂದು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ" ಎಂದರು.
"ನಾವು 26 ಪಕ್ಷಗಳಿದ್ದು, 11 ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದ್ದೇವೆ. ಬಿಜೆಪಿ ಸ್ವತಂತ್ರವಾಗಿ 303 ಸೀಟುಗಳನ್ನು ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ ಹಳೆಯ ಮಿತ್ರರನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ" ಎಂದು ಖರ್ಗೆ ದೂರಿದರು.
ಮೈತ್ರಿಕೂಟದ ಮುಖ್ಯಸ್ಥರು?; ಸಂಜೆ 4 ಗಂಟೆಗೆ ಸಭೆ ಮುಕ್ತಾಯಗೊಳ್ಳಲಿದೆ. ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಅಧ್ಯಕ್ಷರು ಮತ್ತು ಸಂಚಾಲರನ್ನು ಘೋಷಣೆ ಮಾಡಲಾಗುತ್ತದೆ. ವಿರೋಧ ಪಕ್ಷಗಳು ಯುಪಿಎ ಮೈತ್ರಿಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ರನ್ನು ಸಂಚಾಲಕರನ್ನಾಗಿ ನೇಮಕ ಮಾಡುವ ನಿರೀಕ್ಷೆ ಇದೆ.
ಸಭೆಯಲ್ಲಿ ಪಾಲ್ಗೊಂಡಿರುವ ಎಲ್ಲಾ ಪಕ್ಷಗಳು ಮೈತ್ರಿಕೂಟಕ್ಕೆ ಹೆಸರು ಅಂತಿಮಗೊಳಿಸುವಂತೆ ಮನವಿ ಮಾಡಿವೆ. ಈ ಮೈತ್ರಿಕೂಟದ ಹೆಸರಿನಲ್ಲಿ India, United ಎಂಬುದು ಇರಬೇಕು ಎಂಬುದು ಪಕ್ಷಗಳ ಒತ್ತಾಯವಾಗಿದೆ. ಸಭೆಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು ಸಲಹೆಗಳನ್ನು ಸಹ ಕೇಳಲಾಗಿದೆ.
ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸರ್ಕಾರ ರಚನೆ ಮಾಡಿದ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿಯೇ ವಿರೋಧ ಪಕ್ಷಗಳ ಸಭೆಯನ್ನು ನಡೆಸಿ ಶಕ್ತಿ ಪ್ರದರ್ಶನ ಮಾಡುತ್ತಿದೆ.
ಜೆಡಿಎಸ್ ಪಕ್ಷಕ್ಕೆ ಏಕೆ ಆಹ್ವಾನ ನೀಡಿಲ್ಲ ಎಂಬ ಬಗ್ಗೆ ಪವನ್ ಖೇರಾ ಮಾತನಾಡಿದ್ದಾರೆ. "ಬಿಜೆಪಿ ವಿರುದ್ಧ ಹೋರಾಡಲು ಸಿದ್ಧರಿರುವ ಎಲ್ಲಾ ಪಕ್ಷಗಳಿಗೂ ಸಭೆಗೆ ಮುಕ್ತ ಆಮಂತ್ರಣವಿದೆ. ಪಾಟ್ನಾದಲ್ಲಿ 16 ಪಕ್ಷಗಳಿತ್ತು. ಬೆಂಗಳೂರಿನಲ್ಲಿ 26 ಪಕ್ಷಗಳು ಸೇರಿವೆ. ನಾವು ಇನ್ನೂ ಹಲವಾರು ಸಭೆಗಳನ್ನು ನಡೆಸಲಿದ್ದು, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದೇವೆ" ಎಂದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಂ. ಕೆ. ಸ್ಟಾಲಿನ್, ಅರವಿಂದ ಕೇಜ್ರಿವಾಲ್, ಭಗವಂತ್ ಮಾನ್, ಮಮತಾ ಬ್ಯಾನರ್ಜಿ, ಹೇಮಂತ್ ಸೊರೇನ್, ಲಾಲೂ ಪ್ರಸಾದ್ ಯಾದವ್, ತೇಜಸ್ವನಿ ಯಾದವ್, ನಿತೀಶ್ ಕುಮಾರ್, ಶರದ್ ಪವಾರ್ ಮುಂತಾದವರು ಪಾಲ್ಗೊಂಡಿದ್ದಾರೆ.
ಇತ್ತ ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯುತ್ತಿದೆ. ಅತ್ತ ಎನ್ಡಿಎ ಮೈತ್ರಿಕೂಟದ ಸಭೆ ನವದೆಹಲಿಯಲ್ಲಿ ನಡೆಯುತ್ತಿದೆ. ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿಯೂ 2024ರ ಲೋಕಸಭೆ ಚುನಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ.












Click it and Unblock the Notifications