ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿನ ಗೊಂದಲ: ಡೌಟ್ ಕ್ಲಿಯರ್ ಮಾಡಿದ ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 15: ಪ್ರಸಕ್ತ ವಿಧಾನಮಂಡಲ ಅಧಿವೇಶನದ ಬಜೆಟ್ ಮೇಲಿನ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿನ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
"ಮುಂದಿನ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತೀರೋ, ಇಲ್ಲವೋ ಎನ್ನುವ ಗೊಂದಲ ಬಹಳಷ್ಟಿದೆ, ಮೊದಲು ಸದನದಲ್ಲಿ ಅದಕ್ಕೆ ಉತ್ತರ ಕೊಡಿ"ಎಂದು ಸ್ಪೀಕರ್ ಕಾಗೇರಿಯವರು, ಸಿದ್ದರಾಮಯ್ಯನವರಿಗೆ ಮನವಿ ಮಾಡಿದರು.
ಆಗ ಎದ್ದು ನಿಂತ ಮಾಜಿ ಸ್ಪೀಕರ್ ಮತ್ತು ಸಿದ್ದರಾಮಯ್ಯನವರ ಪರಮಾಪ್ತ ರಮೇಶ್ ಕುಮಾರ್, "ಅವರು ನಿಲ್ಲದೇ ಇರುವ ಪ್ರಮೇಯವೇ ಇಲ್ಲ, ಅವರು ಚುನಾವಣೆಗೆ ನಿಂತೇ ನಿಲ್ಲುತ್ತಾರೆ, ಮುಂದೆ ಇತಿಹಾಸ ಏನಾಗುತ್ತೆ ನೋಡೋಣ"ಎಂದು ಹೇಳಿದರು.

ಆಗ ಮಾತನಾಡಿದ ಸಿದ್ದರಾಮಯ್ಯ, "ಐ ಡೋಂಟ್ ರನ್ ವೇ..ನಾನು ಚುನಾವಣೆಗೆ ನಿಂತೇ ನಿಲ್ಲುತ್ತೇನೆ. ಈಗ ರಾಜ್ಯದ ಜನರಿಗೆ ಇರುವ ಡೌಟ್ ಎಲ್ಲಾ ಕ್ಲಿಯರ್ ಆಯಿತಲ್ವಾ"ಎಂದು ಸಿದ್ದರಾಮಯ್ಯನವರು ಸ್ಪರ್ಧೆಯ ವಿಚಾರದಲ್ಲಿ ಸ್ಪಷ್ಟನೆಯನ್ನು ನೀಡಿದರು.
ಆಗ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಎಂದು ಸಚಿವ ಅಶೋಕ್ ಪ್ರಶ್ನಿಸಿದಾಗ, "ನಾನು ಪದ್ಮನಾಭ ನಗರದಿಂದ ಸ್ಪರ್ಧಿಸುತ್ತೇನೆ"ಎಂದು ಸಿದ್ದರಾಮಯ್ಯ ಹೇಳಿದಾಗ, "ಯು ಆರ್ ಮೋಸ್ಟ್ ವೆಲ್ಕಂ" ಎಂದು ಅಶೋಕ್ ಪ್ರತಿಕ್ರಿಯೆ ನೀಡಿದರು.
"ನಾನು ಈಗ ಬಾದಾಮಿ ಕ್ಷೇತ್ರದಿಂದ ಆಯ್ಕೆಯಾಗಿದ್ದೇನೆ. ಮುಂದಿನ ಚುನಾವಣೆಯಲ್ಲೂ ಅಲ್ಲಿಂದಲೇ ಸ್ಪರ್ಧಿಸುತ್ತೇನೆ"ಎಂದು ಸಿದ್ದರಾಮಯ್ಯ ಹೇಳಿದಾಗ, "ನಮ್ ಕಡೆ ಬನ್ನಿ ಸಿದ್ರಾಮಣ್ಣ"ಎಂದು ಎಚ್.ಡಿ.ರೇವಣ್ಣ ಆಹ್ವಾನ ನೀಡಿದರು.












Click it and Unblock the Notifications