ದೆಹಲಿ ರಾಜಕೀಯಕ್ಕೆ ಯಾಕೆ ಹೋಗಲಿಲ್ಲ? ಸದನದಲ್ಲಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಸದನ ಆರಂಭವಾದ ನಂತರ ತೈಲಬೆಲೆ ಏರಿಕೆ, ಆಯಿಲ್ ಬಾಂಡ್ ಮುಂತಾದ ವಿಚಾರಗಳ ಮೇಲೆ ಸರಕಾರದ ವಿರುದ್ದ ತಿರುಗಿ ಬಿದ್ದಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ತಾವೇಕೆ ಲೋಕಸಭೆಗ ಅಥವಾ ರಾಜ್ಯಸಭೆಗೆ ಹೋಗಲಿಲ್ಲ ಎನ್ನುವ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಪೆಟ್ರೋಲ್, ಡೀಸೆಲ್ ಮೇಲೆ ಇರುವ ಜಿಎಸ್ಟಿ ಹಣದ ಬಗ್ಗೆ ಸಿದ್ದರಾಮಯ್ಯನವರು ಸಭೆಯಲ್ಲಿ ವಿವರಿಸುತ್ತಿದ್ದಾಗ, ಕಂದಾಯ ಸಚಿವರಾದ ಆರ್.ಅಶೋಕ್ ಮತ್ತು ಕಾನೂನು, ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಜೆ.ಸಿ.ಮಾಧುಸ್ವಾಮಿ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು.
ತೈಲ ಬೆಲೆ ಏರಿಕೆ ವಿಚಾರವೆಲ್ಲಾ ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವಂತದ್ದು, ಅದನ್ನು ಇಲ್ಲಿ ಯಾಕೆ ಪ್ರಸ್ತಾವಿಸುತ್ತಿದ್ದೀರಾ ಎನ್ನುವುದು ಸಚಿವರುಗಳ ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ರಾಜ್ಯ ಸರಕಾರ ತೈಲ ಬೆಲೆ ಹಾಕುವ ಜಿಎಸ್ಟಿ, ಸೆಸ್ ಬಗ್ಗೆ ವಿವರಣೆಯನ್ನು ನೀಡಿದರು. ವ್ಯಂಗ್ಯ ಭರಿತವಾಗಿ ಸಿದ್ದರಾಮಯ್ಯನವರು ದೆಹಲಿ ವಿಚಾರದ ಬಗ್ಗೆ ಮಾತನಾಡುತ್ತಿದ್ದಾಗ, ಎಲ್ಲರೂ ಅದನ್ನು ತದೇಕಚಿತ್ತದಿಂದ ಕೇಳುತ್ತಿದ್ದರು.
ಲೋಕಸಭೆಯಲ್ಲಿ ಮಾತನಾಡಬೇಕಾಗಿರುವ ವಿಚಾರವನ್ನು ಸಿದ್ದರಾಮಯ್ಯನವರು ರಾಜ್ಯದ ಅಸೆಂಬ್ಲಿಯಲ್ಲಿ ಮಾತನಾಡುತ್ತಿದ್ದಾರೆ, ಅವರಿಗೆ ದೆಹಲಿಗೆ ಹೋಗುವ ಆಸೆಯಿದೆಯಾ ಎಂದು ಸಚಿವರುಗಳು ಸಿದ್ದರಾಮಯ್ಯನವರ ಕಾಲೆಳೆದರು. ಆಗ, ನಾನ್ಯಾಕೆ ದೆಹಲಿ ರಾಜಕೀಯಕ್ಕೆ ಹೋಗಿಲ್ಲ ಎನ್ನುವುದರ ಬಗ್ಗೆ ಅವರು ವಿವರಣೆಯನ್ನು ನೀಡಿದರು.

ದೆಹಲಿಗೆ ಹೋಗುತ್ತೇನೆಂದರೆ ದೆಹಲಿಗೆ ಹೋಗಿರುವವರ ಎದೆ ಒಡೆದು ಹೋಗುತ್ತೆ - ಈಶ್ವರಪ್ಪ
ರಾಜಕಾರಣದಲ್ಲಿ ನೂರಕ್ಕೆ ನೂರು ಸತ್ಯ ಹೇಳುವವರನ್ನು ನಾನು ಎಲ್ಲೂ ನೋಡಿಲ್ಲ, ಅನಿವಾರ್ಯವಾಗಿ ಕೆಲವೊಮ್ಮೆ ಸುಳ್ಳನ್ನು ಹೇಳಬೇಕಾಗುತ್ತದೆ. ಸತ್ಯವನ್ನೇ ಹೇಳುತ್ತೇನೆಂದರೆ ನಮಗೆ ನಾವು ಆತ್ಮವಂಚನೆ ಮಾಡಿಕೊಂಡಂತೆ. ನಾನು ಪಾರ್ಲಿಮೆಂಟಿಗೆ ಹೋಗುವ ಪ್ರಯತ್ನವನ್ನು ಹಿಂದೆರಡು ಮಾಡಿರುವುದು ನಿಜ"ಎಂದು ಸಿದ್ದರಾಮಯ್ಯನವರು ಹೇಳಿದಾಗ, ಎದ್ದು ನಿಂತ ಈಶ್ವರಪ್ಪ, "ನೀವೇನಾದರೂ ದೆಹಲಿಗೆ ಹೋಗುತ್ತೇನೆಂದರೆ ದೆಹಲಿಗೆ ಹೋಗಿರುವ ಕೆಲವರ ಎದೆ ಒಡೆದು ಹೋಗುತ್ತದೆ"ಎಂದು ಸಚಿವ ಈಶ್ವರಪ್ಪ ಅವರನ್ನು ಛೇಡಿಸಿದರು.

ದೆಹಲಿಗೆ ಹೋಗಿ ಕನ್ನಡ ಕಹಳೆಯನ್ನು ಉತ್ತುಂಗಕ್ಕೇರಿಸಲಿ, ಮಾಧುಸ್ವಾಮಿ
ಆಗ ನನಗೆ ಈಶ್ವರಪ್ಪನನ್ನು ಬಿಟ್ಟು ದೆಹಲಿಗೆ ಹೋಗಲು ಇಷ್ಟವಿಲ್ಲ ಎಂದ ಸಿದ್ದರಾಮಯ್ಯನವರು ಹೇಳಿದಾಗ, "ಹೊಸದಾಗಿ ರಚಿಸಿದ್ದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದವರು. ದೆಹಲಿಗೆ ಹೋಗಿ ಕನ್ನಡ ಕಹಳೆಯನ್ನು ಉತ್ತುಂಗಕ್ಕೇರಿಸಲಿ ಎನ್ನುವುದು ನನ್ನ ಆಶಯ. ಇದು ಬಿಟ್ಟು ಬೇರೆ ಯಾವ ದುರುದ್ದೇಶವೂ ನನ್ನಲ್ಲಿ ಇಲ್ಲ " ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಸಿದ್ದರಾಮಯ್ಯನವರಂತಹ ನಾಯಕರು ನಮ್ಮಲ್ಲೇ ಇರಬೇಕು - ಅಶೋಕ್
ಆಗ ಎದ್ದ ಸಚಿವ ಅಶೋಕ್, "ಬೇಡ ಬೇಡ ಸಿದ್ದರಾಮಯ್ಯನವರಂತಹ ನಾಯಕರು ನಮ್ಮಲ್ಲೇ ಇರಬೇಕು, ಅವರ ಮಾರ್ಗದರ್ಶನ ನಮಗೆ ಬೇಕು"ಎಂದಾಗ, "ನಾನು ಈ ಹಿಂದೆ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದೆ, ಆದರೆ ಎರಡೂ ಬಾರಿ ಸೋಲು ಅನುಭವಿಸಿದೆ. 1980ರಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋತೆ, 1991ರಲ್ಲಿ ಕೊಪ್ಪಳದಿಂದ ಸ್ಪರ್ಧಿಸಿದೆ, ಅಲ್ಲಿ ಹತ್ತು ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದೆ.
Recommended Video

ಎರಡು ಸೋಲಿನಿಂದ ದೆಹಲಿ ಕಡೆಗೆ ಹೋಗೋದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದೆ
"ಈ ಎರಡು ಸೋಲಿನಿಂದ ದೆಹಲಿ ಕಡೆಗೆ ಹೋಗೋದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದೆ. ಜಾಸ್ತಿ ಎಂದರೆ ಇನ್ನೊಂದು ಚುನಾವಣೆ ನಾನು ಎದುರಿಸಬಹುದು" ಎಂದು ಸಿದ್ದರಾಮಯ್ಯನವರು ಹೇಳಿದರು. ಆಗ ಮಾಧುಸ್ವಾಮಿ ಮಾತನಾಡುತ್ತಾ, "ರಾಜೀವ್ ಗಾಂಧಿಯವರ ನಿಧನದಿಂದಾಗಿ ನೀವು ಸೋಲುವಂತಾಯಿತು. ಇಲ್ಲದಿದ್ದರೆ ನೀವು ಸೋಲುತ್ತಿರಲಿಲ್ಲ"ಎಂದು ಹೇಳಿದರು. ಹಾಗಾಗಿ, ನಾನು ಮತ್ತು ಈಶ್ವರಪ್ಪ ದೆಹಲಿ ರಾಜಕೀಯಕ್ಕೆ ಹೋಗಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications