ಆಪರೇಷನ್ ಕಮಲದ ಆಡಿಯೋ ತನಿಖೆಗೆ ಸಿದ್ದರಿದ್ದೇವೆ : ಬಿಎಸ್ವೈ
ಬೆಂಗಳೂರು, ಫೆಬ್ರವರಿ 11 : 'ನಾವೇನು ತನಿಖೆಯಿಂದ ಓಡಿ ಹೋಗುತ್ತಿಲ್ಲ. ತರಾತುರಿಯಲ್ಲಿ ತನಿಖೆ ಆಗೋದು ಬೇಕಾಗಿಲ್ಲ. ತನಿಖೆಗೆ ನಾವು ಸಿದ್ಧರಿದ್ದೇವೆ. ನ್ಯಾಯಾಂಗ ಅಥವ ಸದನ ಸಮಿತಿ ರಚಿಸಿ ತನಿಖೆ ಮಾಡಿ ಎಂದಿದ್ದೇವೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸೋಮವಾರ ಸಂಜೆ ಯಡಿಯೂರಪ್ಪ ಅವರು ಶಾಸಕರ ಜೊತೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, 'ಆಪರೇಷನ್ ಕಮಲದ ಆಡಿಯೋ ಕುರಿತು ತರಾತುರಿಯಲ್ಲಿ ತನಿಖೆ ಆಗುವುದು ಬೇಡ' ಎಂದರು.
'ಎಸ್ಐಟಿ ತನಿಖೆ ಬೇಡ ಎಂಬುದು ನಮ್ಮ ಮತ್ತು ಶಾಸಕರ ಅಭಿಪ್ರಾಯವಾಗಿದೆ. ಈ ನಿಲುವಿಗೆ ನಾವು ಬದ್ಧವಾಗಿದ್ದೇವೆ. ಮಂಗಳವಾರ ಈ ಕುರಿತು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮತ್ತೊಮ್ಮೆ ಮನವಿ ಮಾಡುತ್ತೇವೆ' ಎಂದು ತಿಳಿಸಿದರು.
ಸೋಮವಾರದ ವಿಧಾನಸಭೆ ಕಲಾಪದಲ್ಲಿ ಆಪರೇಷನ್ ಕಮಲದ ಆಡಿಯೋ ಬಗ್ಗೆ ವಿವರವಾದ ಚರ್ಚೆ ನಡೆದಿತ್ತು. ಸ್ಪೀಕರ್ ರಮೇಶ್ ಕುಮಾರ್ ಅವರು ಈ ಕುರಿತು ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದರು. ಆದರೆ, ಬಿಜೆಪಿ ಎಸ್ಐಟಿ ತನಿಖೆಗೆ ವಿರೋಧ ವ್ಯಕ್ತಪಡಿಸುತ್ತಿದೆ..

ಯಡಿಯೂರಪ್ಪ ಹೇಳಿದ್ದೇನು?
'ಸದನದ ಒಳಗೆ ಸ್ಪೀಕರ್ ರಮೇಶ್ ಕುಮಾರ್ ಅವರ ಜೊತೆ ಬಹಳ ಗೌರವದಿಂದ ನಡೆದುಕೊಂಡಿದ್ದೇವೆ. ಈ ಎಲ್ಲಾ ಘಟನೆಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರೇರಣೆ ನೀಡಿ ಗೊಂದಲ ಸೃಷ್ಟಿ ಮಾಡಿದ್ದಾರೆ' ಎಂದು ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಎಸ್ಐಟಿ ತನಿಖೆಯನ್ನ ಜನರು ಒಪ್ಪೋದಿಲ್ಲ
'ರಮೇಶ್ ಕುಮಾರ್ ಮೇಲೆ 50 ಕೋಟಿ ಹಣದ ಆರೋಪ ಹೊರಿಸಿ ಅಪಮಾನ ಮಾಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಈಗ ಇವರೇ ಎಸ್ಐಟಿ ತನಿಖೆ ಮಾಡಿಸುವುದನ್ನು ನಾಡಿನ ಜನರು ಒಪ್ಪಲ್ಲ' ಎಂದು ಯಡಿಯೂರಪ್ಪ ಹೇಳಿದರು.

ತನಿಖೆಗೆ ಸಿದ್ಧರಿದ್ದೇವೆ
'ನಾವೇನು ತನಿಖೆಯಿಂದ ಓಡಿ ಹೋಗ್ತಿಲ್ಲ. ತರಾತುರಿಯಲ್ಲಿ ತನಿಖೆ ಆಗೋದು ಬೇಕಾಗಿಲ್ಲ. ನ್ಯಾಯಾಂಗ ತನಿಖೆ ಅಥವ ಸದನ ಸಮಿತಿ ರಚಿಸಿ ತನಿಖೆ ಮಾಡಿ ಎಂದಿದ್ದೇವೆ. ನಾಳೆಯೂ ನಮ್ಮ ನಿಲುವಿಗೆ ಬದ್ಧ' ಎಂದು ಯಡಿಯೂರಪ್ಪ ಹೇಳಿದರು.

ಎಸ್ಐಟಿ ತನಿಖೆಗೆ ಆದೇಶಿಸಿವುದು ಸರಿಯಲ್ಲ
'ಆಪರೇಷನ್ ಆಡಿಯೋ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾಗಿಯಾಗಿದ್ದಾರೆ. ಇಡೀ ಪ್ರಕರಣ ಅವರ ಪ್ರಚೋದನೆಯಿಂದಲೇ ನಡೆದಿದೆ. ಸ್ಪೀಕರ್ ರೂಲಿಂಗ್ ಪ್ರಕಾರ ಕುಮಾರಸ್ವಾಮಿ ಅವರು ಎಸ್ಐಟಿ ತನಿಖೆಗೆ ಆದೇಶ ನೀಡುವುದು ಸರಿಯಲ್ಲ. ಯಾವುದೇ ತನಿಖಾ ಸಂಸ್ಥೆಯಾದರೂ ಅದು ಕುಮಾರಸ್ವಾಮಿ ಅವರ ಅಡಿಯಲ್ಲಿಯೇ ಬರುತ್ತದೆ. ಆದ್ದರಿಂದ, ಸದನ ಸಮಿತಿಯಿಂದ ತನಿಖೆ ಆಗಬೇಕು' ಎಂದು ಜಗದೀಶ್ ಶೆಟ್ಟರ್ ಹೇಳಿದರು.












Click it and Unblock the Notifications