ಯಡಿಯೂರಪ್ಪ ವಿರುದ್ಧದ ಪ್ರಕರಣದ ಅರ್ಜಿ ವಿಚಾರಣೆ ಮುಂದೂಡಿಕೆ
ಕಲಬುರಗಿ, ಸೆಪ್ಟೆಂಬರ್ 17: ಗುರುಮಿಠಕಲ್ ಶಾಸಕ ನಾಗನಗೌಡ ಅವರಿಗೆ ಬಿಎಸ್ ಯಡಿಯೂರಪ್ಪ ಅವರು ಆಮಿಷವೊಡ್ಡಿದ್ದರು ಎಂಬ ಆರೋಪದ ಆಡಿಯೋ ಪ್ರಕರಣದ ವಿಚಾರಣೆಯನ್ನು ಕಲಬುರ್ಗಿ ಹೈಕೋರ್ಟ್ ಸೆ. 26ಕ್ಕೆ ಮುಂದೂಡಿದೆ.
ಯಡಿಯೂರಪ್ಪ ಮೊದಲ ಆರೋಪಿಯಾಗಿರುವ ಆಡಿಯೋ ಪ್ರಕರಣದ ವಿಚಾರಣೆ ಮಂಗಳವಾರ ನಡೆಯಬೇಕಿತ್ತು.
ನಾಗನಗೌಡ ಅವರನ್ನು ಬಿಜೆಪಿಗೆ ಸೆಳೆಯಲು ಫೆಬ್ರವರಿಯಲ್ಲಿ ಯಡಿಯೂರಪ್ಪ ಅವರ ಮಗ ಶರಣಗೌಡ ಕಂದಕೂರು ಅವರನ್ನು ಸಂಪರ್ಕಿಸಿದ್ದರು. ಇದರಲ್ಲಿ ಬಿಜೆಪಿಗೆ ಬಂದರೆ 50 ಕೋಟಿ ರೂ. ಮತ್ತು ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲಾಗುವುದು ಎಂಬ ಆಮಿಷ ನೀಡಿದ್ದರು ಎನ್ನಲಾದ ಆಡಿಯೋವನ್ನು ಎಚ್ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು.

ಒಂದು ವೇಳೆ ತಂದೆ ಅನರ್ಹರಾದರೆ ಏನು ಮಾಡುವುದು ಎಂಬ ಪ್ರಶ್ನೆಗೆ, ಆ ಬಗ್ಗೆ ಯೋಚನೆ ಬೇಡ, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ 50 ಕೋಟಿ ರೂ ನೀಡಿ ಬುಕ್ ಮಾಡಿಕೊಳ್ಳಲಾಗಿದೆ ಎಂದು ಹೇಳುವ ಧ್ವನಿ ಆಡಿಯೋದಲ್ಲಿದೆ. ಅಲ್ಲದೆ, ನ್ಯಾಯಾಲಯದ ವಿಚಾರಗಳನ್ನು ಅಮಿತ್ ಶಾ, ಮೋದಿ ಅವರು ನೋಡಿಕೊಳ್ಳುತ್ತಾರೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಅವರು ಬುಕ್ ಮಾಡಿದ್ದಾರೆ ಎಂದು ಹೇಳುವುದು ದಾಖಲಾಗಿತ್ತು.
ಈ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು. ಸದನದಲ್ಲಿಯೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಫೆ. 13ರಂದು ಶರಣಗೌಡ ಅವರು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಯಡಿಯೂರಪ್ಪ, ದೇವದುರ್ಗ ಶಾಸಕ ಶಿವನಗೌಡ ನಾಯಕ್, ಹಾಸನ ಶಾಸಕ ಪ್ರೀತಂ ಗೌಡ ಮತ್ತು ಪತ್ರಕರ್ತ ಮರಂಕಲ್ ವಿರುದ್ಧ ದೂರು ನೀಡಿದ್ದರು. ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿತ್ತು. ಸದನದಲ್ಲಿ ಚರ್ಚೆ ನಡೆದು ಪ್ರಕರಣವನ್ನು ಎಸ್ಐಟಿಗೆ ವರ್ಗಾಯಿಸಲಾಗಿತ್ತು.












Click it and Unblock the Notifications