Government Employee: NPS to OPS ಸರ್ಕಾರಿ ನೌಕರರಿಗೆ ಶಿವರಾತ್ರಿಯಲ್ಲಿ ಸಿಹಿಸುದ್ದಿ
ಬೆಂಗಳೂರು, ಫೆಬ್ರವರಿ 27: ಕರ್ನಾಟಕದ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಹೋರಾಟವನ್ನು ಸಹ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿವರಾತ್ರಿ ಹಬ್ಬದ ಸಮಯದಲ್ಲಿಯೇ ರಾಜ್ಯದ ಕಾಂಗ್ರೆಸ್ ಸರ್ಕಾರ ಸರ್ಕಾರಿ ನೌಕರರಿಗೆ ಸಿಹಿಸುದ್ದಿಯನ್ನು ನೀಡಿದೆ. ದೃಢೀಕರಣ ಪತ್ರವಿದ್ದರೆ ಒಪಿಎಸ್ ಸೌಲಭ್ಯವನ್ನು ಪಡೆಯಬಹುದು ಎಂದು ಸರ್ಕಾರ ಹೇಳಿದೆ. ಇದರಿಂದಾಗಿ ಸುಮಾರು 13,500 ನೌಕರರಿಗೆ ಅನುಕೂಲವಾಗಲಿದೆ.
ಒಪಿಎಸ್ನಿಂದ ಎನ್ಪಿಎಸ್ಗೆ ಬಂದಿರುವ 13,500 ಸರ್ಕಾರಿ ನೌಕರರು ಈಗ ದೃಢೀಕರಣ ಪತ್ರದ ಮೂಲಕ ಒಪಿಎಸ್ಗೆ ಮರಳಬಹುದಾಗಿದೆ. ಆದರೆ ಕರ್ನಾಟಕದ ಸರ್ಕಾರಿ ನೌಕರರು ಎಲ್ಲಾ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ 2023ರ ಚುನಾವಣಾ ಪ್ರಣಾಳಿಕೆಯಲ್ಲಿಯೂ ಒಪಿಎಸ್ ಮರು ಜಾರಿ ಮಾಡುತ್ತೇವೆ ಎಂದು ಸರ್ಕಾರಿ ನೌಕರರಿಗೆ ಭರವಸೆಯನ್ನು ನೀಡಿತ್ತು.

ಎನ್ಪಿಎಸ್ ರದ್ದು ಒಪಿಎಸ್ ಮರು ಜಾರಿ ವಿಚಾರದಲ್ಲಿ ಸದ್ಯದ ಸ್ಥಿತಿ ಎಂದರೆ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಕರ್ನಾಟಕ ಸರ್ಕಾರ ದಿನಾಂಕ 16/8/2024ರಲ್ಲಿ ಈ ಸಮಿತಿಯನ್ನು ಪುನರ್ ರಚಿಸಿದೆ. ಒಪಿಎಸ್ ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಇದನ್ನು ಹೇಗೆ ಜಾರಿಗೊಳಿಸಲಾಗಿದೆ? ಎಂದು ಅಧ್ಯಯನ ನಡೆಸಿ ಸಮಿತಿ ವರದಿ ನೀಡಲಿದೆ. ಈಗಾಗಲೇ ಸಮಿತಿ ಎರಡು ಸಭೆಗಳನ್ನು ನಡೆಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆ ಬಾಕಿ ಇದೆ. ಮಾರ್ಚ್ 7ರಂದು ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದು, ಅದಕ್ಕೂ ಮೊದಲು ವರದಿ ಸಲ್ಲಿಕೆ ನಿರೀಕ್ಷೆ ಇದೆ.
ದೃಢೀಕರಣ ಪತ್ರವಿದ್ದರೆ ಸಾಕು: ಕರ್ನಾಟಕ ಸರ್ಕಾರ ದೃಢೀಕರಣ ಪತ್ರವಿದ್ದರೆ ನೌಕರರನ್ನು ಎನ್ಪಿಎಸ್ನಿಂದ ಒಪಿಎಸ್ಗೆ ಬದಲಾವಣೆ ಮಾಡಬಹುದು ಎಂದು ಹೇಳಿದೆ. ಇದಕ್ಕಾಗಿ ನೌಕರರು ತಮ್ಮ ಇಲಾಖಾ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ಪಡೆದು ನೀಡಬೇಕು. ಎನ್ಪಿಎಸ್ಗೆ ಒಳಪಡುವುದಿಲ್ಲ ಎಂದು ದೃಢೀಕರಣ ಪತ್ರವನ್ನು ಕೊಡಬೇಕು. ಎನ್ಪಿಎಸ್ ವಂತಿಗೆ ಕಡಿತ ತಕ್ಷಣ ಸ್ಥಗಿತವಾಗಬೇಕು.
ಡಿಡಿಒಗಳು ಈ ಕುರಿತು ಎನ್ಪಿಎಸ್ ಘಟಕಕ್ಕೆ ವಿವರಗಳನ್ನು ಸಲ್ಲಿಸಬೇಕು. ಸರ್ಕಾರಿ ನೌಕರ ಮರಣ ಹೊಂದಿದ್ದರೂ ಸಹ ದೃಢೀಕರಣ ಪತ್ರ ನೀಡಬೇಕು. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಪ್ರತಿಕ್ರಿಯೆ ನೀಡಿದ್ದು, "ಸುಪ್ರೀಂಕೋರ್ಟ್ ಹಾಗೂ ಕೇಂದ್ರದ ಸೂಚನೆಯಂತೆ 13,500 ಸರ್ಕಾರಿ ನೌಕರರನ್ನು ಎನ್ಪಿಎಸ್ನಿಂದ ಒಪಿಎಸ್ಗೆ ಒಳಪಡಿಸಿ ಸರ್ಕಾರ ಆದೇಶಿಸಿದೆ. ಇವರ ವೇತನದಿಂದ ಕಡಿತಗೊಂಡಿದ್ದ ಎನ್ಪಿಎಸ್ ಮೊತ್ತ ಹಿಂಪಡೆಯಲು ಈಗ ಸರ್ಕಾರ ಅವಕಾಶ ನೀಡಿದೆ" ಎಂದು ಹೇಳಿದ್ದಾರೆ.
ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ ಅವರು ಮಾತನಾಡಿ, "ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಭರವಸೆಯಂತೆ ರಾಜ್ಯದಲ್ಲಿ ಎನ್ಪಿಎಸ್ ಯೋಜನೆ ರದ್ದುಗೊಳಿಸಬೇಕು. ಫೆಬ್ರವರಿ 7ರಂದು ಬೆಂಗಳೂರಿನಲ್ಲಿ 30 ಸಾವಿರ ನೌಕರರೊಂದಿಗೆ ಒಪಿಎಸ್ ಹಕ್ಕೋತ್ತಾಯ ಧರಣಿ ಮಾಡಲಾಗಿದೆ. ಮಾರ್ಚ್ 2ರಂದು ಈ ಕುರಿತು ಒತ್ತಾಯಿಸಲು ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಅನ್ವಯ, ಕೇಂದ್ರ ಸರ್ಕಾರದ ಸೂಚನೆಯಂತೆ 13,500 ನೌಕರರನ್ನು ಎನ್ಪಿಎಸ್ನಿಂದ ಒಪಿಎಸ್ಗೆ ಮರಳಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. 2006ರ ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆ ನಂತರ ನೇಮಕಗೊಂಡ ನೌಕರರು ಇವರಾಗಿದ್ದಾರೆ. ಆದರೆ ಇನ್ನೂ ಸುಮಾರು 2.45 ಲಕ್ಷ ನೌಕರರು ರಾಜ್ಯದಲ್ಲಿದ್ದು, ಇವರುಗಳು ಎನ್ಪಿಎಸ್ ಅಡಿಯಲ್ಲಿಯೇ ಇದ್ದಾರೆ. ಎಲ್ಲಾ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರಬೇಕು ಎಂದು ಸರ್ಕಾರಿ ನೌಕರರು ಹೋರಾಟ ನಡೆಸುತ್ತಿದ್ದಾರೆ.












Click it and Unblock the Notifications