ಕೆಎಸ್ಆರ್ ಟಿಸಿ ದರ ಹೆಚ್ಚಳಕ್ಕೆ ನಡೆದಿದೆ ಸಿದ್ಧತೆ
ಬೆಂಗಳೂರು, ಏ. 29 : ಬಿಎಂಟಿಸಿ ಬಸ್ ದರ ಹೆಚ್ಚಳವಾಯಿತು ಎಂದು ಶಪಿಸುತ್ತಿದ್ದ ಜನರಿಗೆ ಮತ್ತೊಂದು ಶಾಕ್ ಕಾದಿದೆ. ಕೆಎಸ್ಆರ್ ಟಿಸಿ ಸಹ ದರ ಪರಿಷ್ಕರಣೆಗೆ ಮುಂದಾಗಿದೆ. ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮುಂದಿನ ತಿಂಗಳು ದರ ಹೆಚ್ಚಿಸುವ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಡೀಸೆಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ಕೆಎಸ್ಆರ್ ಟಿಸಿ ದರವನ್ನು ಪರಿಷ್ಕರಣೆ ಮಾಡುವಂತೆ ಈಗಾಗಲೇ ಮನವಿ ಮಾಡಲಾಗಿದೆ. ಚುನಾವಣೆ ಹಿನ್ನಲೆಯಲ್ಲಿ ಈ ಪ್ರಸ್ತಾಪದ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದರು. [ಬಿಎಂಟಿಸಿ ದರ ಏರಿಕೆ ಶಾಕ್]

ಮೇ ಮೊದಲ ವಾರದಲ್ಲಿ ಕೆಎಸ್ಆರ್ ಟಿಸಿ ಸರ್ಕಾರಕ್ಕೆ ಎರಡನೇ ಬಾರಿ ಪ್ರಸ್ತಾವನೆ ಸಲ್ಲಿಸಲಿದೆ ನಂತರ ದರ ಹೆಚ್ಚಳದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಮಲಿಂಗಾ ರೆಡ್ಡಿ ಹೇಳಿದರು. ರಾಜ್ಯ ರಸ್ತೆ ಸಾರಿಗೆ ನಿಗಮಗಳು ನಷ್ಟ ಅನುಭವಿಸುತ್ತಿವೆ ಎಂದು ಹೇಳುವ ಮೂಲಕ ರೆಡ್ಡಿ, ದರ ಹೆಚ್ಚಳ ಅನಿವಾರ್ಯ ಎಂಬ ಸುಳಿವು ಕೊಟ್ಟರು. [ದರ ಏರಿಕೆ ಸರ್ಕಾರಕ್ಕೆ ಜನರ ಹಿಡಿಶಾಪ]
ಕಾರಣವೇನು : ಕೆಎಎಸ್ಆರ್ ಟಿಸಿ ದರ ಹೆಚ್ಚಳಕ್ಕೆ ರಾಮಲಿಂಗಾ ರೆಡ್ಡಿ ಅವರು ನೀಡುವ ಕಾರಣ ಹಿಂದಿನ ಬಿಜೆಪಿ ಸರ್ಕಾರ. ಬಿಜೆಪಿ ಅಧಿಕಾರದಲ್ಲಿದ್ದಾಗ ಸಾರಿಗೆ ಸಿಬ್ಬಂದಿ ವೇತನ ಶೆ.33ರಷ್ಟು ಹೆಚ್ಚು ಮಾಡಿದ್ದರಿಂದ ಪ್ರತಿ ತಿಂಗಳು ಇಲಾಖೆಗೆ 150 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ.
ಕಳೆದ ವಾರ ಬೆಂಗಳೂರಿನ ಜನರಿಗೆ ಶಾಕ್ ನೀಡಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಶೇ. 15ರಷ್ಟು ಟಿಕೆಟ್ ದರ ಹೆಚ್ಚಳ ಮಾಡಿತ್ತು. ದಿನದ ಮತ್ತು ಮಾಸಿಕ ಪಾಸ್ ದರವನ್ನು ಹೆಚ್ಚಳ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿತ್ತು. ಸದ್ಯ ಕೆಎಸ್ಆರ್ ಟಿಸಿ ಸರದಿ.












Click it and Unblock the Notifications