Breaking: ಹಿಂಗಾರು ಮಳೆ ಆರಂಭ, ಕರ್ನಾಟಕಕ್ಕೆ ಮುನ್ಸೂಚನೆ ಏನು?
ಬೆಂಗಳೂರು, ಅಕ್ಟೋಬರ್ 28: ಹಿಂಗಾರು ಮಳೆ ಸುರಿಸುವ ಈಶಾನ್ಯ ಮಾರುತಗಳು ಈಗಾಗಲೇ ಉತ್ತರ ಭಾರತಕ್ಕೆ ಕಾಲಿಟ್ಟಿದ್ದು, ಶನಿವಾರ ದಕ್ಷಿಣ ಭಾರತವನ್ನು ಪ್ರವೇಶಿಸಲಿವೆ. ಇದರ ಪರಿಣಾಮವಾಗಿ ಉತ್ತರ ಒಳನಾಡು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಳೆ ಆಗಲಿದೆ.
ಮುಂಗಾರು ಮಳೆಯ ಅಂತ್ಯ ಹಾಗೂ ಹಿಂಗಾರು ಮಳೆಯ ಆರಂಭವನ್ನು ಖಚಿತಪಡಿಸಿರುವ ಭಾರತೀಯ ಹವಾಮಾನ ಇಲಾಖೆಯು, ಕರ್ನಾಟಕದ ಕೆಲವು ಭಾಗಗಳಿಗೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆ ನೀಡಿದೆ.
ತಮಿಳುನಾಡು ರಾಜ್ಯದ ಉತ್ತರ ಕರಾವಳಿ ಹಾಗೂ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಸಮುದ್ರ ಮಟ್ಟದಿಂದ 3.1 ಕಿಲೋ ಮೀಟರ್ ಎತ್ತರದಷ್ಟು ಮೇಲ್ಮೈ ಸುಳಿಗಾಳಿ ಒಂದು ಸೃಷ್ಟಿಯಾಗಿದೆ.

ಈ ಎಲ್ಲ ಹವಾಮಾನದಲ್ಲಿ ಬದಲಾವಣೆಗಳ ಪ್ರಭಾವದಿಂದ ಕರ್ನಾಟಕದ ಕರಾವಳಿಗೆ ಮುಂದಿನ ಐದು ದಿನಗಳ ಪೈಕಿ ಶನಿವಾರ ಒಣ ಹವೆ ಮುಂದುವರಿಯಲಿದೆ. ನಂತರ ನಾಲ್ಕು ದಿನ ಉಡುಪಿ, ಬೆಳ್ತಂಗಡಿ ಇನ್ನಿತರ ಕಡೆಗಳಲ್ಲಿ ಆಗಾಗ ಹಗುರ ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶನಿವಾರದಿಂದ ಎರಡು ದಿನ ತುಂತುರು ಮಳೆ, ನಂತರ ಒಂದು ದಿನ ಶುಷ್ಕ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ಇದೆ. ಇದೇ ವೇಳೆ ಉತ್ತರ ಒಳನಾಡಿನಾದ್ಯಂತ ಐದು ದಿನವು ಶುಷ್ಕ ವಾತಾವರಣ ಇರಲಿದೆ. ಈ ಭಾಗಕ್ಕೆ ಯಾವುದೇ ಮಳೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಕೇಂದ್ರದ ಬೆಂಗಳೂರು ವಿಜ್ಞಾನಿ ಡಾ. ಪ್ರಸಾದ್ ತಿಳಿಸಿದರು.

ರಾಜ್ಯದ ಗರಿಷ್ಠ ತಾಪಮಾನ ಹೊನ್ನಾವರದಲ್ಲಿ ಅಧಿಕ 35 ಡಿಗ್ರಿ ಸೆಲ್ಸಿಯಸ್, ಕಾರವಾರದಲ್ಲಿ 34.8 ಡಿ.ಸೆ, ಗೋಕರ್ಣ 34.4 ಡಿ.ಸೆ, ಮಂಗಳೂರು 33.8 ಡಿ.ಸೆ, ಬಳ್ಳಾರಿಯಲ್ಲಿ32.3ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ. ರಾಜ್ಯದ ಕನಿಷ್ಠ ತಾಪಾಮಾನವು ಬಾದಾಮಿಯಲ್ಲಿ 13.4 ಡಿಗ್ರಿ ಸೆಲ್ಸಿಯಸ್, ಬೀದರ್ 13 ಡಿ.ಸೆ., ಬೆಳಗಾವಿಯಲ್ಲಿ 14 ಡಿ.ಸೆ., ಧಾರವಾಡದಲ್ಲಿ 14.8 ಡಿ.ಸೆ. ದಾಖಲಾಗಿದೆ ಎಂದರು.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಹಗುರ ಮಳೆ ಆಗಲಿದೆ. ಸೋಮವಾರ ಹಾಗೂ ಮಂಗಳವಾರ ತುಸು ಚುರುಕಾಗಲಿರುವ ಹಿಂಗಾರು ಮಳೆ ಅಂದು ಗುಡುಗು ಸಹಿತ ವ್ಯಾಪಕವಾಗಿ ಸುರಿಯಬಹುದು ಎಂದು ಅಂದಾಜಿಸಲಾಗಿದೆ. ಈ ವೇಳೆ ನಗರದಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿ.ಸೆ. ತಾಪಮಾನ ದಾಖಲಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.












Click it and Unblock the Notifications