ರಕ್ಷಿತಾ ಕೈ ತಪ್ಪಿತು ಮಂಡ್ಯ ಕ್ಷೇತ್ರದ ಟಿಕೆಟ್!
ಬಿಜಾಪುರ, ಫೆ.12 : ಮಂಡ್ಯಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ನಟಿ ರಕ್ಷಿತಾ ಅವರಿಗೆ ಹಿನ್ನಡೆ ಉಂಟಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುತ್ತದೆ. ರಕ್ಷಿತಾ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬಿಜಾಪುರದಲ್ಲಿ ಮಂಗಳವಾರ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಸಂಸದೆ ರಮ್ಯಾ ವಿರುದ್ಧ ಸ್ಪರ್ಧಿಸಲು ರಕ್ಷಿತಾ ಅವರಿಗೆ ಜೆಡಿಎಸ್ ಟಿಕೆಟ್ ನೀಡುತ್ತದೆ ಎಂಬ ಮಾತನ್ನು ತಳ್ಳಿಹಾಕಿದರು. ರಕ್ಷಿತಾ ಅವರಿಗೆ ಟಿಕೆಟ್ ನೀಡುವ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ರಕ್ಷಿತಾ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಓರ್ವ ಚಿತ್ರನಟಿಯನ್ನು ಸೋಲಿಸಲು ಪಕ್ಷಕ್ಕೆ ದುಡಿಯದ ಇನ್ನೋರ್ವ ಚಿತ್ರನಟಿಯನ್ನು ಕಣಕ್ಕೆ ಇಳಿಸುವಷ್ಟು ಜೆಡಿಎಸ್ ಪಕ್ಷ ಕಂಗೆಟ್ಟಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ಮಂಡ್ಯದಲ್ಲಿ ಪಕ್ಷಕ್ಕೆ ದುಡಿದಿರುವ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಅವರನ್ನು ಗುರುತಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದರು. [ಬೆಂಗಳೂರು ದಕ್ಷಿಣದಿಂದ ರಕ್ಷಿತಾ ಸ್ಪರ್ಧೆ]
ಸದ್ಯ ಪಕ್ಷ ತಯಾರಿಸಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಸಿ.ಎಸ್.ಪುಟ್ಟರಾಜು, ಶಾಸಕ ಡಿ.ಸಿ.ತಮ್ಮಣ್ಣ ಅವರ ಪುತ್ರ ಡಿ.ಟಿ.ಸಂತೋಷ್ ಹೆಸರನ್ನು ಸೇರಿಸಲಾಗಿದೆ. ಕ್ಷೇತ್ರದ ಅಭ್ಯರ್ಥಿ ಆಯ್ಕೆ ಜವಾಬ್ದಾರಿ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ವಹಿಸಲಾಗಿದ್ದು, ಅವರ ನಿರ್ಧಾರವೇ ಅಂತಿಮ ಎಂಬ ಮಾತುಗಳು ಇವೆ. [ಮಂಡ್ಯದಿಂದ ಮಾತ್ರ ಸ್ಪರ್ಧಿಸುತ್ತೇನೆ : ರಕ್ಷಿತಾ]
ನಾನು ಸ್ಪರ್ಧಿಸುವುದಿಲ್ಲ : ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು ಶ್ರಮವಹಿಸಿ ಕೆಲಸಮಾಡುತ್ತೇನೆ ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಈಗಾಗಲೇ ನಮ್ಮ ಕುಟುಂಬದಿಂದ ದೇವೇಗೌಡರು ಮಾತ್ರ ಸ್ಪರ್ಧಿಸುವುದಾಗಿ ಘೋಷಿಸಲಾಗಿದೆ ಹಾಗೆಯೇ ನಡೆದುಕೊಳ್ಳುತ್ತೇವೆ ಎಂದು ಎಚ್ಡಿಕೆ ಹೇಳಿದರು. [ಜೆಡಿಎಸ್ ಸಂಭಾವ್ಯ ಪಟ್ಟಿ]












Click it and Unblock the Notifications