ಕೆಎಸ್ ಆರ್ ಟಿಸಿ ಬಸ್ ದರ ಇಳಿಕೆ, ಬರೀ ಪೊಳ್ಳು ಭರವಸೆ
ಬೆಂಗಳೂರು, ಜ. 1: ರಾಜ್ಯದ ಜನರ ನಿರೀಕ್ಷೆಯನ್ನು ಕಾಂಗ್ರೆಸ್ ಸರ್ಕಾರ ಹುಸಿಮಾಡಿದೆ. ನಿರಂತರವಾಗಿ ಡೀಸೆಲ್ ದರ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ದರ ಕಡಿಮೆಯಾಗಲಿದೆ ಎಂಬ ಆಸೆಗೆ ರಾಜ್ಯ ಸರ್ಕಾರ ತಣ್ಣೀರು ಎರಚಿದೆ.
ಸಾರ್ವಜನಿಕ ಸಾರಿಗೆ(ಕೆಎಸ್ ಆರ್ ಟಿಸಿ) ದರ ಕಡಿಮೆ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ಪ್ರಸ್ತಾವನೆಯನ್ನು ಗುರುವಾರ ಸಿಎಂ ತಿರಸ್ಕರಿಸುವ ಮೂಲಕ ಸಾರಿಗೆ ದರ ಸದ್ಯಕ್ಕೆ ಕಡಿಮೆಯಾಗಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.[ಬಸ್ ದರ ಇಳಿಕೆ ಸುಳಿವು ನೀಡಿದ ಸಚಿವ]

ಈ ಮೊದಲು ಮಾಧ್ಯಮದವರ ಬಳಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು, ಹೊಸ ವರ್ಷಕ್ಕೆ ಶುಭ ಸುದ್ದಿ ನೀಡುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಮಾತಿಗೆ ತಪ್ಪಿದ್ದಾರೆ. ಒಟ್ಟು ನಾಲ್ಕು ಸಾರಿ ಡೀಸೆಲ್ ದರ ಕಡಿಮೆಯಾಗಿದ್ದರೂ ರಾಜ್ಯದ ಜನರಿಗೆ ಇಳಿಕೆ ಭಾಗ್ಯ ಸಿಕ್ಕಿಲ್ಲ.
ಬೆಳಗಾವಿ ಅಧಿವೇಶನದ ವೇಳೆ ಬಸ್ ದರ ಕಡಿಮೆ ಮಾಡುತ್ತೇನೆ ಎಂದು ಹೇಳಿದ್ದ ರಾಜ್ಯ ಸರ್ಕಾರ ಜನವರಿ 1 ರ ಗಡುವು ನೀಡಿತ್ತು. ತೈಲ ಬೆಲೆಯಲ್ಲಿ ಇಳಿಕೆಯಾದ ಸಂದರ್ಭ ರಾಜ್ಯದ ಹಲವೆಡೆ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಮಾಜಿ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.[ಪ್ರಯಾಣದರ ಎಷ್ಟು ಕಡಿಮೆಯಾಗಲಿದೆ?]
ಬೆಳಗಾವಿ ಅಧಿವೇಶನದ ಸಂದರ್ಭ ಜನರ ಮತ್ತು ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತೆ ಎಂಬ ಪ್ರಶ್ನೆಗೆ ಉತ್ತರ ನೀಡುವವರು ಯಾರೂ ಇಲ್ಲ.












Click it and Unblock the Notifications