ಸಚಿವರುಗಳ ವಿರುದ್ದ ಪತ್ರ ಬರೆದು ಶಾಸಕರು ಅಸಮಾಧಾನ: ಡಿ ಕೆ ಶಿವಕುಮಾರ್ ಹೇಳಿದ್ದು ಹೀಗೆ?
ಬೆಂಗಳೂರು, ಜುಲೈ 25: ಸರ್ಕಾರದ ಸಚಿವರ ಕಾರ್ಯವೈಖರಿ ವಿರುದ್ದ ಯಾವ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿಲ್ಲ. ಎಲ್ಲರೂ ಅವರವರ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದಾರೆ ಎಂದು ಡಿಸಿಎ. ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಾಸಕರು ಗೆದ್ದಿರಲಿ, ಸೋಲು ಕಂಡಿರಲಿ, ಅವರನ್ನು ಗಮನದಲ್ಲಿ ಇಡಬೇಕು ಎಂದು ಹೇಳಿದ್ದೇವೆ. ನಮ್ಮದು ಕೆಲ ಕಾರ್ಯಕ್ರಮಗಳಿವೆ. ಅಸೆಂಬ್ಲಿ ಇದ್ದ ಕಾರಣ ಚರ್ಚೆ ಮಾಡಲು ಆಗಿಲ್ಲ. ಅದರ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದರು.

ಇನ್ನು ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿದ್ದೇವೆ. ಅದರ ಬಗ್ಗೆ ಹುಡುಗರಿಗೆ ಮಾಹಿತಿ ಕೊಡಬೇಕಿದೆ. ನಮ್ಮ ಗ್ಯಾರಂಟಿಗಳು ಜನರಿಗೆ ತಲುಪುತ್ತಿದೆಯಾ ಇಲ್ಲವೇ ಎಂದು ಚರ್ಚೆ ಮಾಡಬೇಕು. ಗ್ಯಾರಂಟಿಗಳ ಬಗ್ಗೆ ಜನರು ಬಹಳ ಆಸೆಯಲ್ಲಿ ಇದ್ದಾರೆ. ನಾವು ಗ್ಯಾರಂಟಿ ಕುರಿತಾಗಿ ಮಾತು ಕೊಟ್ಟಿದ್ದೇವೆ. ಅದನ್ನು ಈಡೇರಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ನೈಸ್ ರಸ್ತೆ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನ ಸೋಂಪುರ ಗ್ರಾಮದ ರೈತರ ನಿಯೋಗವು ಭೇಟಿ ಮಾಡಿ ಅಹವಾಲು ಸಲ್ಲಿಸಿದಾಗ ಡಿಸಿಎಂ ಡಿ ಕೆ ಶಿವಕುಮಾರ್ ಭರವಸೆ ನೀಡಿದರು.
"ನೈಸ್ ರಸ್ತೆಗೆ ನಮ್ಮ ಜಮೀನು ಭೂಸ್ವಾಧೀನ ಮಾಡಿಕೊಂಡು 23 ವರ್ಷಗಳಾಗಿವೆ. ಭೂಮಿಗೆ ಪರಿಹಾರ ಮೊತ್ತ ಸಿಕ್ಕಿದೆ. ಆದರೆ ನಮಗೆ ನಿವೇಶನ ನೀಡುವ ಭರವಸೆ ಈವರೆಗೂ ಈಡೇರಿಲ್ಲ. ಅಧಿಕಾರಿಗಳನ್ನು ಕೇಳಿದರೆ, ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಯಾವೊಬ್ಬ ರೈತರಿಗೂ ನಿವೇಶನ ಹಂಚಿಕೆ ಮಾಡಿಲ್ಲ. ಸೋಂಪುರ ಗ್ರಾಮಕ್ಕೆ ನೀವು ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಖುದ್ದು ಪರಿಶೀಲಿಸಿ, ಸಮಸ್ಯೆ ಬಗೆಹರಿಸಬೇಕು.
ನಾವು ನಮ್ಮ ಸಮಸ್ಯೆಗಳನ್ನು ಎಲ್ಲಾ ಸರ್ಕಾರದ ಬಳಿ ಹೇಳಿಕೊಂಡಿದ್ದೇವೆ. ಯಾರಿಂದಲೂ ಪರಿಹಾರ ಸಿಕ್ಕಿಲ್ಲ. ನೀವು ಮುಂದೆ ನಿಂತು ಈ ಸಮಸ್ಯೆಗೆ ಪರಿಹಾರ ಕೊಡಿಸಬೇಕು. ನಿಮ್ಮಿಂದ ನ್ಯಾಯ ಸಿಗಲಿದೆ ಎಂಬ ಭರವಸೆ ನಮಗಿದೆ" ಎಂದು ರೈತರ ನಿಯೋಗ ಡಿಸಿಎಂ ಅವರಿಗೆ ಮನವಿ ಮಾಡಿತು.
ಇದೇ ವೇಳೆ "2003ರಲ್ಲಿ ಕೆಲವು ಸರ್ವೆಗಳ ಜಮೀನು ಭೂಸ್ವಾಧೀನಕ್ಕೆ ಮಾತ್ರ ಪರಿಹಾರ ನೀಡಲಾಗಿದ್ದು, ಮತ್ತೆ ಕೆಲವು ಸರ್ವೇ ನಂಬರ್ ಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿಲ್ಲ ಎಂಬ ಕಾರಣಕ್ಕೆ ಪರಿಹಾರ ನೀಡಿರಲಿಲ್ಲ. ಆದರೆ ಈಗ ಆ ಜಮೀನು ಭೂಸ್ವಾಧೀನಕ್ಕೆ 2003 ರಲ್ಲಿ ನಿಗದಿ ಮಾಡಿದ್ದ ದರದ ಮೊತ್ತಕ್ಕೆ ಬಡ್ಡಿ ಸೇರಿಸಿ ಪರಿಹಾರ ಹಣ ನೀಡಲು ಮುಂದಾಗಿದ್ದಾರೆ" ಎಂದು ನಿಯೋಗದ ಸದಸ್ಯರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು, "ಈ ವಿಚಾರವಾಗಿ ಮೊನ್ನೆಯಷ್ಟೇ ಅಧಿಕಾರಿಗಳ ಜತೆ ಚರ್ಚಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ KIADB ಆಕ್ಟ್ ಹಾಗೂ ಬಿಡಿಎ ಆಕ್ಟ್ ನಲ್ಲಿ ಹಳೆ ದರಕ್ಕೆ ಪರಿಹಾರ ನೀಡಬೇಕು ಎಂದು ಆದೇಶ ನೀಡಲಾಗಿದೆ. ಈ ವಿಚಾರವಾಗಿ ಎರಡು ದಿನಗಳಲ್ಲಿ ಮಾತನಾಡುತ್ತೇನೆ.
ನಿಮ್ಮ ಮನವಿ ಪರಿಶೀಲಿಸುತ್ತೇನೆ. ನಿವೇಶನ ವಿಚಾರ ನನ್ನ ಗಮನಕ್ಕೆ ಬಂದಿದೆ. ನಿವೇಶನ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಉಳಿದ ವಿಚಾರಗಳನ್ನು ಪರಿಶೀಲನೆ ಮಾಡುತ್ತೇನೆ" ಎಂದು ಭರವಸೆ ನೀಡಿದರು.












Click it and Unblock the Notifications