ಯಾವ ಭ್ರಷ್ಟನೂ ನನ್ನ ಆಪ್ತನಲ್ಲ : ಸಿದ್ದರಾಮಯ್ಯ ಕಿಡಿ
ಐಟಿ ದಾಳಿ ಅಥವಾ ಎಸಿಬಿ ದಾಳಿಗೊಳಗಾದ ಅಧಿಕಾರಿಯನ್ನು ತಮ್ಮೊಂದಿಗೆ ತಳಕು ಹಾಕುತ್ತಿರುವುದು ಸಿದ್ದರಾಮಯ್ಯನವರಿಗೆ ಕಿರಿಕಿರಿ ತಂದಿದೆ. ಇವರಾರೂ ನನಗೆ ಆಪ್ತರಲ್ಲ, ರಾಜ್ಯದ ಜನರೇ ಆಪ್ತರು ಎಂದಿದ್ದಾರೆ ಸಿದ್ದು.
ಬೆಂಗಳೂರು, ಡಿಸೆಂಬರ್ 16 : ದೇಶದ ಎಲ್ಲೆಡೆ ನಡೆಯುತ್ತಿರುವಂತೆ ಕರ್ನಾಟಕದಲ್ಲಿಯೂ ತೆರಿಗೆ ಇಲಾಖೆ ದಾಳಿ ನಡೆಸುತ್ತಿದೆ. ಇದನ್ನು ಸಿದ್ದರಾಮಯ್ಯ ಆಪ್ತರ ಮೇಲೆ ದಾಳಿ ನಡೆಯುತ್ತಿರುವಂತೆ ಏಕೆ ಬಿಂಬಿಸಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಡನೆ ಶುಕ್ರವಾರ ಮಾತನಾಡುತ್ತಿದ್ದ ಅವರು, ಇಲ್ಲಿ ದಾಳಿಗೊಳಗಾಗಿರುವ ಯಾವ ಅಧಿಕಾರಿಯೂ ನನಗೆ ಆಪ್ತರಲ್ಲ. ಇಡೀ ಕರ್ನಾಟಕದಲ್ಲಿರುವ ಎಲ್ಲ ಆರುವರೆ ಕೋಟಿ ಜನರೂ ನನ್ನ ಆಪ್ತರು. ಆದ್ದರಿಂದ, ದಾಳಿಗೊಳದಾದವರನ್ನು ಮಾತ್ರ ಸಿಎಂ ಆಪ್ತರು ಎಂದು ಬಿಂಬಿಸುವ ಅಗತ್ಯವಿಲ್ಲ ಎಂದು ತಣ್ಣಗೆ ಕಿಡಿಕಾರಿದರು. [ಬೆಳ್ಳಂಬೆಳಗ್ಗೆ 5 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ]
ಇತ್ತೀಚೆಗೆ ಕಾವೇರಿ ನೀರಾವರಿ ನಿಗಮದ ಕಾರ್ಯಕಾರಿ ನಿರ್ದೇಶಕ ಚಿಕ್ಕರಾಯಪ್ಪ ಮತ್ತು ರಾಷ್ಟ್ರೀಯ ಹೆದ್ದಾರಿ ನಿಗಮದ ಮುಖ್ಯ ಅಧಿಕಾರಿ ಜಯಚಂದ್ರ ಅವರ ಮನೆ, ಕಚೇರಿಗಳ ಮೇಲೆ ಭಾರೀ ದಾಳಿ ನಡೆಸಿ 152 ಕೋಟಿ ರು.ಗೂ ಹೆಚ್ಚು ಆಸ್ತಿಯನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಇವರಿಬ್ಬರೂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಬರುತ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು. [ಜಾಮೀನು ಸಿಕ್ಕರೂ ಶ್ಯೂರಿಟಿ ಸಿಗಲಿಲ್ಲ, ಜಯಚಂದ್ರ ಅಂದರ್]

ಶುಕ್ರವಾರ, ಡಿಸೆಂಬರ್ 16ರಂದು ಕೂಡ ಹಲವಾರು ಸರಕಾರಿ ಅಧಿಕಾರಿಗಳ ಮೇಲೆ ಭ್ರಷ್ಟ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದು, ಇವರಲ್ಲಿ ಕೆಲವರು ಸಿದ್ದರಾಮಯ್ಯ ಆಪ್ತರು ಎಂಬ ಮಾತು ಮತ್ತೆ ಕೇಳಿಬಂದಿದೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯನವರು ಸ್ಪಷ್ಟೀಕರಣ ಕೊಟ್ಟಿದ್ದು, ಯಾವ ಅಧಿಕಾರಿಯೂ ನನಗೆ ಆಪ್ತನಲ್ಲ. ಬೇರೆಡೆ ನಡೆದಂತೆ ಇಲ್ಲಿಯೂ ದಾಳಿಗಳಾಗುತ್ತಿವೆ ಎಂದರು. [ಐಟಿ ಅಧಿಕಾರಿಗಳನ್ನೂ ಬೆಚ್ಚಿಬೀಳಿಸಿದ ಸೀಕ್ರೆಟ್ ಲಾಕರ್!]
ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಆಡಳಿತವಿರುವ ರಾಜ್ಯದ ಮೇಲೆ ಉದ್ದೇಶಪೂರ್ವಕವಾಗಿ ಹೀಗೆ ದಾಳಿ ನಡೆಸುತ್ತಿಲ್ಲ. ಎಲ್ಲ ಕಡೆ ನಡೆಯುವಂತೆ ಇಲ್ಲಿಯೂ ದಾಳಿ ನಡೆಯುತ್ತಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದೂ ಅವರು ಹೇಳಿದರು. [ಸಿದ್ದುಗೆ ಧರ್ಮಸಂಕಟ: ನಾಲ್ವರು ಸಚಿವರ ಮೇಲೆ ಐಟಿ ಅಧಿಕಾರಿಗಳ ಕಣ್ಣು?]












Click it and Unblock the Notifications