ಸಿಎಂ ಕರೆದರೂ ಮೋದಿ ಭೇಟಿಗೆ ಬಾರದ ರಾಜ್ಯ ಬಿಜೆಪಿ ಸಂಸದರು
ನವದೆಹಲಿ, ಸೆಪ್ಟೆಂಬರ್ 10: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ನೇತೃತ್ವದ ನಿಯೋಗವು ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಕೊಡಗಿಗೆ ನೆರವು ನೀಡುವಂತೆ ಮನವಿ ಮಾಡಿದರು.
ವಿವಿಧ ಸಚಿವರು ಇದ್ದ ನಿಯೋಗದಲ್ಲಿ ಒಬ್ಬ ಬಿಜೆಪಿ ಸಂಸದರೂ, ಮುಖಂಡರೂ ಇಲ್ಲದೇ ಇದ್ದದು ಆಶ್ಚರ್ಯ. ಸರ್ಕಾರದ ಪರವಾಗಿ ಬಿಜೆಪಿಯ ಸಂಸದರನ್ನು ಕರೆದಿದ್ದರೂ ಸಹಿತ ಹಲವು ಸಂಸದರು ಕಾರಣ ಸಹ ನೀಡದೆ ಗೈರಾಗಿದ್ದಾರೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಹ ರಾಜ್ಯದ ನಿಯೋಗದೊಂದಿಗೆ ಮೋದಿ ಭೇಟಿಗೆ ತೆರಳಿಲ್ಲದಿರುವುದು ವಿಶೇಷ. ಮೊನ್ನೆಯಷ್ಟೆ ತಾವು ಕೊಡಗಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪಟ್ಟಿ ನೀಡಿದ್ದ ಪ್ರತಾಪ್ ಸಿಂಹ ಅದರಲ್ಲಿ ಸಿಎಂ ಜೊತೆಗೆ ಮೋದಿ ಭೇಟಿಯನ್ನೂ ಸೇರಿ ಹೇಳಿದ್ದರು ಆದರೆ ಇಂದು ಕರೆದರೂ ಸಹ ಅವರು ಹೋಗಿಲ್ಲ.

ದೇವೇಗೌಡ, ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಕೃಷ್ಣಬೈರೇಗೌಡ, ಎಚ್.ಡಿ.ರೇವಣ್ಣ ಅವರುಗಳು ಮೋದಿ ಅವರನ್ನು ಇಂದು ಭೇಟಿಯಾಗಿ ಕೊಡಗಿಗೆ ನೆರವು ನೀಡುವಂತೆ ಕೋರಿದರು.

ಸರ್ಕಾರವು ಕರೆದರೂ ಕೊಡಗಿಗೆ ನೆರವು ಕೇಳಲು ಬಿಜೆಪಿಯ ಯಾವೊಬ್ಬ ಸಂಸದರೂ ಹೋಗದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ವತಿಯಿಂದ ಆಹ್ವಾನ ಹೋಗಿದ್ದ ಕೇವಲ ಇಬ್ಬರು ಬಿಜೆಪಿಯ ಸಂಸದರು ಮಾತ್ರ ಕಾರಣ ತಿಳಿಸಿ ಗೈರಾಗಿದ್ದರು. ಪ್ರತಾಪ್ ಸಿಂಹ ಸೇರಿದಂತೆ ಇನ್ನುಳಿದವರಾರೂ ಕಾರಣ ಸಹ ನೀಡದೆ ಗೈರಾಗಿದ್ದರು.











Click it and Unblock the Notifications