ರಾಮನಗರದಲ್ಲಿ ನಿಖಿಲ್ ವಿರುದ್ದ ಡಿ.ಕೆ.ಸುರೇಶ್ ಸ್ಪರ್ಧೆ?; ತವರು ಜಿಲ್ಲೆಯ ಹಿಡಿತಕ್ಕಾಗಿ ಡಿಕೆಶಿ ಲೆಕ್ಕಾಚಾರವೇನು?
ಕಟ್ಟಾ ರಾಜಕೀಯ ವಿರೋಧಿಗಳಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ರಾಮನಗರ ಎನ್ನುವುದು ರಾಜಕೀಯ ಕರ್ಮಭೂಮಿ
ರಾಮನಗರ,ಮಾರ್ಚ್14: 2023 ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನ ಅಧಿಕಾರಕ್ಕೆ ತರಲು ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಕ್ಷೇತ್ರಗಳನ್ನ ಪಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಸಾಕಷ್ಟು ತಯಾರಿಯನ್ನ ನಡೆಸಿದೆ.
ಇತ್ತ ಕಟ್ಟಾ ರಾಜಕೀಯ ವಿರೋಧಿಗಳಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ರಾಮನಗರ ಎನ್ನುವುದು ರಾಜಕೀಯ ಕರ್ಮಭೂಮಿ. ಇಲ್ಲಿ ಹಿಡಿತ ಸಾಧಿಸಲು ಎರಡೂ ಕುಟುಂಬಗಳು ಪ್ರಭಾವ ಬೀರುವುದು ಹೊಸದೇನಲ್ಲ. ಆದರೆ ಈ ಬಾರೀ ಹಳೆ ಮೈಸೂರು ಭಾಗದ ಕ್ಷೇತ್ರಗಳು ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಹಿಡಿತವನ್ನ ಸಾಧಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಾಮನಗರ ವಿಧಾನಸಭಾ ಕ್ಷೇತ್ರ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಕ್ಷೇತ್ರವನ್ನ ಬಿಟ್ಟುಕೊಟ್ಟಿದ್ದು, ಈ ಬಾರಿ ರಾಮನಗರದ ಚುನಾವಣಾ ಕಣದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಆದರೆ ಕನಕಪುರ ಕ್ಷೇತ್ರವನ್ನ ಭದ್ರ ಪಡಿಸಿಕೊಂಡಂತೆ ಇಡೀ ರಾಮನಗರ ಜಿಲ್ಲೆಯಲ್ಲಿ ತಮ್ಮ ಹಿಡಿತವನ್ನ ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸಂಸದ ಹಾಗೂ ಸಹೋದರ ಡಿ.ಕೆ.ಸುರೇಶ್ ಅವರನ್ನ ಕಣಕ್ಕಿಳಿಸಲು ಡಿ.ಕೆ ಶಿವಕುಮಾರ್ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಈ ಹಿಂದೆ ಸಂಸದರಾದ ಡಿ ಕೆ ಸುರೇಶ್ ಅವರನ್ನ ರಾಜ್ಯರಾಜಕಾರಣಕ್ಕೆ ತರ್ಬೇಕೋ ಅಥವಾ ಬೇಡವೋ ಎಂಬ ಚರ್ಚೆ ನಡೆದಿತ್ತು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಡಿ.ಕೆ ಸುರೇಶ್ ಅವರಿಗೂ ತಮ್ಮದೇ ಆದ ವರ್ಚಸ್ಸನ್ನ ಹೊಂದಿದ್ದು, ಹಲವು ಪ್ಲಾನ್ ಗಳನ್ನ ಡಿ.ಕೆ ಶಿವಕುಮಾರ್ ಹಾಕಿಕೊಂಡಿದ್ದಾರೆ.

ರಾಜಕೀಯ ಎದುರಾಳಿಯಾಗಿರುವ ಕುಮಾರಸ್ವಾಮಿ ಅವರ ವಿರುದ್ದ ಡಿ ಕೆ ಶಿವಕುಮಾರ್ ಭರ್ಜರಿ ಸಿದ್ದೆತೆಯನ್ನ ಮಾಡಿಕೊಂಡಿದ್ದು ರಾಮನಗರ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸುವ ಮೂಲಕ ರಾಮನಗರದಲ್ಲಿ ಹಿಡಿತವನ್ನ ಸಾಧಿಸಲು ಪ್ಲಾನ್ ಹಾಕಿಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ನಿಖಿಲ್ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿಯನ್ನ ಹಠಾತ್ ಆಗಿ ಕಣಕ್ಕಿಸುವ ಡಿ.ಕೆ ಶಿವಕುಮಾರ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಸಹೋದರ ರಾಜ್ಯ ರಾಜಕಾರಣ ಬೇಡ, ರಾಷ್ಟ್ರ ರಾಜಕಾರಣವೇ ಇರಲಿ ಎಂದು ನಿರ್ಧರಸಿದ್ದ ಡಿ ಕೆ ಶಿವಕುಮಾರ್ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಹಠಾತ್ ಆಗಿ ಸುರೇಶ್ ಅವರನ್ನು ರಾಜ್ಯ ರಾಜಕಾರಣಕ್ಕೆ ಅದರಲ್ಲೂ ಕುಮಾರಸ್ವಾಮಿ ಅವರ ಪುತ್ರರಾದ ನಿಖಿಲ್ ಎದುರಾಳಿಯಾಗಿ ಕಣಕ್ಕೆ ಇಳಿಸುವ ಚಿಂತನೆಗೆ ಮುಂದಾಗಿರುವುದಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಒಂದೊಂದು ಕ್ಷೇತ್ರದ ಗೆಲವೂ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಸುರೇಶ್ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.
ಈ ಬಾರಿ ಪಕ್ಷವನ್ನ ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಆಗ್ಬೇಕು ಎಂದು ಕನಸು ಕಂಡಿರುವ ಡಿ.ಕೆ ಶಿವಕುಮಾರ್ ಗೆ ಹಳೆ ಮೈಸೂರು ಭಾಗದಲ್ಲಿ ಒಂದೊಂದು ಕ್ಷೇತ್ರದ ಗೆಲವೂ ಮುಖ್ಯವಾಗಿದ್ದು, ಮೊದಲು ತವರು ಕ್ಷೇತ್ರವನ್ನ ಸಂಪೂರ್ಣವಾಗಿ ಹಿಡಿತ ಸಾಧಿಸಲು ಸಹೋದರನನ್ನ ರಾಜ್ಯ ಚುನಾವಣ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications