ಹೆಚ್.ಡಿ.ಕುಮಾರಸ್ವಾಮಿ ಅನಾರೋಗ್ಯದ ಬಗ್ಗೆ ಪುತ್ರ ನಿಖಿಲ್ ಹೀಗಂದಿದ್ದೇಕೆ?
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಪದೇ ಪದೇ ಕುಮಾರಸ್ವಾಮಿ ಅವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಮಾತನಾಡಿದ್ದಾರೆ. ನನ್ನ ಆಯಸ್ಸನ್ನು ಭಗವಂತ ನನ್ನ ತಂದೆಗೆ ಧಾರೆ ಎರಿಬೇಕು ಎನ್ನುವ ಮೂಲಕ ನಿಖಿಲ್ ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳು ಮತ್ತು ಕಾರ್ಯಕರ್ತರು ಕುಮಾರಣ್ಣನ ಆರೋಗ್ಯದಲ್ಲಿ ಏರುಪೇರಾಗಿದೆ ಅಂತ ಕೇಳುತ್ತಿದ್ದರು. ಹೀಗಾಗಿ ನಾನು 80 ಕ್ಷೇತ್ರಗಳಲ್ಲಿ ಸುತ್ತಾಡಿ, ಅವರ ಜವಾಬ್ದಾರಿಯನ್ನ ಹೊರುತ್ತಿದ್ದೇನೆ. ಪ್ರತಿನಿತ್ಯ ನಾನು ನನ್ನ ಆಯಸ್ಸು ನನ್ನ ತಂದೆಗೆ ಕೊಡಬೇಕು ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೀನಿ. ನಾನು ಕೇವಲ ಮಗನಾಗಿ ಈ ಮಾತನ್ನ ಹೇಳ್ತಿಲ್ಲ ಎಂದಿದ್ದಾರೆ ನಿಖಿಲ್.

ಆರೋಗ್ಯದಲ್ಲಿ ಸ್ವಲ್ಪ ಏರುಪೇರಷ್ಟೇ!
ಕುಮಾರಣ್ಣ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮತ್ತೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಅವರು ಸಂಪೂರ್ಣ ಗುಣಮುಖರಾಗುತ್ತಾರೆ. ತಾತ ದೇವೇಗೌಡರು, ತಂದೆ ಕುಮಾರಣ್ಣ ಇಬ್ಬರು ಸಹ ಶತಾಯುಷಿಗಳಾಗುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದಿದ್ದಾರೆ.
ಕುಮಾರಣ್ಣನ ಆರೋಗ್ಯ ಸರಿ ಇಲ್ಲ ಅಂತ ರಾಜ್ಯದಲ್ಲೆಡೆ ಚರ್ಚೆಗಳು ಶುರುವಾಗಿವೆ. ಆದರೆ ಅವರ ತಂದೆ ತಾಯಿಯ ಆಶೀರ್ವಾದ, ಭಗವಂತನ ಕೃಪೆ, ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಕುಮಾರಣ್ಣ ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ನಿಖಿಲ್ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸ್ತಾರೆ
ಸಿದ್ರಾಮಣ್ಣ ನಿಮ್ಮ ಮೇಲೆ ಗೌರವ ಇದೆ. ನೀವು ಯಾರೋ ಕಟ್ಟಿದ ಗೂಡಲ್ಲಿ ಕೂತು ಅಧಿಕಾರ ಮಾಡುತ್ತಿದ್ದೀರಿ. ಸಿದ್ದರಾಮಯ್ಯ ಅವರು ಅಧಿವೇಶನದ ಕೊನೆ ದಿನ ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದಕ್ಕೆ ನಾಡಿನ ಜನ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ನನ್ನ ಸಂಪೂರ್ಣವಾಗಿ ತಿರಸ್ಕಾರ ಮಾಡ್ತಾರೆ ಎಂದು ನಿಖಿಲ್ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಯಾವ ಪಕ್ಷದಿಂದ ಬೆಳೆದು ಬಂದಿದ್ದು, ಆ ದಾರಿಯನ್ನ ಮರೆತ್ತಿದ್ದಾರೆ. ಅಂದಿನ ಕಾಲದಲ್ಲಿ ದೊಡ್ಡ ದೊಡ್ಡ ನಾಯಕರು ಜೆಡಿಎಸ್ ಪಕ್ಷದಲ್ಲಿದ್ರು. ಅಂದು ದೇವೇಗೌಡರು ಅವರನ್ನ ಹಣಕಾಸು ಸಚಿವರಾಗಿ ಮಾಡ್ತಾರೆ. ಆದ್ರೆ ಇಂದು ಜೆಡಿಎಸ್ ಪಕ್ಷವನ್ನೇ ಅವರು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
2018ರ ಚುನಾವಣೆ ಬಳಿಕ ಪಂಚೆ, ಜುಬ್ಬಾ ಹಾಕಿ ಕೈ ಕಟ್ಟಿಕೊಂಡು ಅವರು ನಮ್ಮ ಜತೆ ಸರ್ಕಾರ ಮಾಡಿ ಅಂತ ದೇವೇಗೌಡರ ಮನೆ ಬಾಗಿಲಿಗೆ ಬಂದಿದ್ರು. ಆದರೆ ದೇವೇಗೌಡರು, ಕುಮಾರಣ್ಣ ನಿಮ್ಮ ಮನೆ ಬಾಗಿಲಿಗೆ ಬಂದಿದ್ರಾ.? ಯಾರ್ ಬಂದಿದ್ರು? ಎಂದು ಟಾಂಗ್ ನೀಡಿದ್ದಾರೆ. ಕುಮಾರಣ್ಣ ಅವರಪ್ಪನಾಣೆ ಸಿಎಂ ಆಗಲ್ಲ ಅಂದಿದ್ರು, ಆದ್ರೆ ಆಗಿದ್ದೇನು? ಸಿದ್ರಾಮಣ್ಣ ಹೇಳಿದ್ದೆಲ್ಲ ಉಲ್ಟಾ ಆಗಿದೆ. ಯಾರೋ ಕಟ್ಟಿದ ಗೂಡಲ್ಲಿ ವಾಸ ಮಾಡುತ್ತಿರೋದು ನೀವು. ನಮಗೆ ಸವಾಲು ಹಾಕಿದ್ದೀರಿ, ಅದನ್ನ ಸ್ವೀಕಾರ ಮಾಡುತ್ತೇವೆ ಎಂದು ನಿಖಿಲ್ ತೊಡೆತಟ್ಟಿದ್ದಾರೆ.












Click it and Unblock the Notifications