ಸಮಾಜ ಗಟ್ಟಿಯಾಗಿ ನಿಂತದ್ದು ಊಹೆಗೂ ಮೀರಿದ್ದು; ರಾಘವೇಶ್ವರ ಶ್ರೀ
ಬೆಂಗಳೂರು, ಮಾ 29: ಅಖಿಲ ಹವ್ಯಕ ಮಹಾಸಭಾ(ರಿ)ದ ನೂತನ ಆಡಳಿತ ಮಂಡಳಿ ಸದಸ್ಯರು ಗಿರಿನಗರದ ರಾಮಶ್ರಮದಲ್ಲಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳನ್ನು ಭೇಟಿಮಾಡಿ ಆಶೀರ್ವಾದ ಪಡೆದಿದ್ದಾರೆ.
ಚುನಾವಣೆಯಲ್ಲಿ ಅಭೂತಪೂರ್ವವಾಗಿ ಜಯಸಾಧಿಸಿ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಹರಸಿದ ಶ್ರೀಗಳು, ಇದು ನಂಬಿಕೆಗೆ ಸಿಕ್ಕ ಜಯ, ಕೇವಲ ಬಹುಮತವಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. (ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ಸಹಾಯಹಸ್ತ)
ಗುರು ನಿಷ್ಠರಾದ ನಿಮ್ಮನ್ನು ಸಮಾಜ ಸರ್ವಾನುಮತದಿಂದ ಆಯ್ಕೆಮಾಡಿದೆ. ಸಮಾಜದ ಈ ರೀತಿಯ ಸ್ಪಂದನೆ ವಿಶೇಷವಾಗಿದ್ದು, ಇಷ್ಟೆಲ್ಲಾ ಕೆಸರೆರೆಚುವ ಪ್ರಯತ್ನ ನೆಡೆದಾಗಲೂ ಸಮಾಜ ಇಷ್ಟು ಗಟ್ಟಿಯಾಗಿ ಬೆಂಬಲಿಸುತ್ತಿರುವುದು ಊಹೆಗೂ ಮೀರಿದ್ದಾಗಿದೆಯೆಂದು ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ಹವ್ಯಕ ಮಹಾಸಭೆಯಿಂದ ಶ್ರೀಮಠಕ್ಕೆ ಯಾವುದೇ ಅಪೇಕ್ಷೆ ಇಲ್ಲ, ಆದರೆ ಗುರುಪೀಠಕ್ಕೆ ಯಥೋಚಿತವಾದ ಗೌರವವನ್ನು ಕೊಡುವುದು ಮಹಾಸಭೆಯ ಕರ್ತವ್ಯ. ಗುರುಪೀಠಕ್ಕೆ ಗೌರವವನ್ನು ಕೊಡಲು ಶಂಕರಾಚಾರ್ಯರ ಆದೇಶವಿದೆ.
ಮಹಾಸಭೆಯ ಕಾನೂನಿನ ಪ್ರಕಾರ ಗುರುಪೀಠಕ್ಕೆ ಗೌರವವನ್ನು ನೀಡುವುದು ಸಂಸ್ಥೆಯ ಕರ್ತವ್ಯವಾಗಿದೆ, ಈಗ ಮತದಾನದ ಮೂಲಕ ಗುರುಪೀಠಕ್ಕೆ ಗೌರವವನ್ನು ನೀಡಲು ಸಮಾಜ ಆಗ್ರಹಿಸಿದೆ.
ಹವ್ಯಕರ ಪ್ರಾತಿನಿಧಿಕ ಸಂಸ್ಥೆಯಾದ ಹವ್ಯಕ ಮಹಾಸಭೆಯು ಸಮಾಜದ ಹಿತಬಯಸುವವರ ಕೈಯಲ್ಲಿ ಇರಬೇಕು ಎಂದು ಶ್ರೀಗಳು ಕಿವಿಮಾತನ್ನು ಹೇಳಿದ್ದಾರೆ.
ಸಮಾಜಕ್ಕೆ ತೊಂದರೆ ಎದುರಾದಾಗ ಹೇಡಿಗಳಾಗಿ ಕೂರದೇ ಸಂಸ್ಥೆಗೆ ಉತ್ತಮ ಕಾಯಕಲ್ಪಕೊಡಿ, ಕ್ರಾಂತಿಯನ್ನು ಮಾಡಿ, ಸಮಾಜದ ಗೌರವವನ್ನು ಉಳಿಸಿ ಬೆಳಸಿ, ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಶ್ರಮವಹಿಸಿ ಎಂದು ಆದೇಶಿಸಿದ ಶ್ರೀಗಳು, ಮಹಾಸಭೆಯ ಉತ್ತಮ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇದೆ ಎಂದು ಆಶೀರ್ವದಿಸಿದ್ದಾರೆ.
ಹವ್ಯಕ ಮಹಾಸಭೆಯ ನೂತನ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಮಾತನಾಡಿ, ಹವ್ಯಕ ಸಮಾಜದಲ್ಲಿ ಒಡಕಿದೆ ಎಂಬ ಸುಳ್ಳು ವದಂತಿಗಳಿಗೆ ಸಮಾಜ ಮತದಾನದ ಮೂಲಕ ಉತ್ತರಿಸಿದ್ದು, ಎಲ್ಲಾ 15 ಸ್ಥಾನಗಳಲ್ಲಿಯೂ ಶ್ರೀಮಠಕ್ಕೆ ನಿಷ್ಟರಾದವರನ್ನೇ ಭಾರಿ ಬಹುಮತದ ಮೂಲಕ ಸಮಾಜ ಚುನಾಯಿಸಿದೆ. (ನಮ್ಮ ನೆಲವನ್ನು ಮರೆಯದಿರಿ)
ಗುರುಪೀಠಕ್ಕೆ ಯಥೋಚಿತವಾದ ಗೌರವವನ್ನು ನೀಡಿ ಎಂಬ ಸಂದೇಶವನ್ನು ನೀಡಿದೆ. ಗುರುಪೀಠಗಳ ಮಾರ್ಗದರ್ಶನದಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸುತ್ತೇವೆ, ಅದಕ್ಕೆ ಶ್ರೀಗಳ ಆಶೀರ್ವಾದ ಸರ್ವದಾ ಇರಲಿ ಎಂದು ಗಿರಿಧರ ಕಜೆ ಪ್ರಾರ್ಥಿಸಿದ್ದಾರೆ.