Industry: ಕರ್ನಾಟಕದ ಜೊತೆ ನೆದರ್ಲ್ಯಾಂಡ್ಸ್ ಮಹತ್ವದ ಒಪ್ಪಂದ ಶೀಘ್ರ: ಎಂಬಿ ಪಾಟೀಲ್
ಹೇಗ್ (ನೆದರ್ಲ್ಯಾಂಡ್), ಡಿಸೆಂಬರ್ 03: ಕರ್ನಾಟಕ ಕೈಗಾರಿಕೆ ಸಚಿವರ ತಂಡವು ನೆದರ್ಲ್ಯಾಂಡ್ನ ಹೇಗ್ ನಗರದಲ್ಲಿ ರೋಡ್ ಶೋ ನಡೆಸಿತು. ಕರ್ನಾಟಕದ ಜೊತೆ ವಾಣಿಜ್ಯ ಬಾಂಧವ್ಯ ಬೆಳೆಸಲು ನೆದರಲ್ಯಾಂಡ್ಸ್ನ ವಾಣಿಜ್ಯ ಹಾಗೂ ಕೈಗಾರಿಕಾ ಸಂಘಟನೆಗಳು ತೀವ್ರ ಆಸಕ್ತಿ ವ್ಯಕ್ತಪಡಿಸಿವೆ ಎಂದು ರಾಜ್ಯ ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಮಾಹಿತಿ ನೀಡಿದ್ದಾರೆ.
ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ 2025 ಸಂಬಂಧ ಉದ್ಯಮಿಗಳನ್ನು ಆಹ್ವಾನಿಸಲು ಸಚಿವರ ನೇತೃತ್ವದಲ್ಲಿನ ಉನ್ನತ ಮಟ್ಟದ ನಿಯೋಗವು ಯುರೋಪ್ ಪ್ರವಾಸದಲ್ಲಿದೆ. ಈ ವೇಳೆ ವಿದೇಶ ಆರ್ಥಿಕ ಸಂಬಂಧಗಳ ಮಹಾನಿರ್ದೇಶಕ ಮೈಕಲ್ ಸ್ವೀರ್ಸ್ ಅವರು ಕರ್ನಾಟಕದೊಂದಿಗೆ ವಾಣಿಜ್ಯ ಸಂಬಂಧ ಬೆಳೆಸುವ ಕುರಿತು ಆಕಸ್ತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಶೀಘ್ರವೇ ಕರ್ನಾಟಕ ಜೊತೆಗೆ ಒಪ್ಪಂದ ಸಾಧ್ಯತೆ
ರಾಜ್ಯ ಸರ್ಕಾರದ ಜೊತೆ ವಾಣಿಜ್ಯ ಸಂಬಂಧ ಬೆಳೆಸಲು ನೆದರ್ಲ್ಯಾಂಡ್ಸ್ ತೋರಿಸಿರುವ ಇಂಗಿತವು ಅಲ್ಲಿನ ಉದ್ಯಮಿಗಳು ರಾಜ್ಯದಲ್ಲಿ ಹೊಸ ಬಂಡವಾಳ ಹೂಡಿಕೆ ಮಾಡುವುದರ ಸ್ಪಷ್ಟ ಸಂಕೇತವಾಗಿದೆ. ಪಾಲ್-ವಿ, ಫಿಲಿಪ್ಸ್, ಹೈನೆಕೆನ್, ಇನ್ನಾಟೆರಾ ನ್ಯಾನೊಸಿಸ್ಟಮ್ಸ್ ಮತ್ತು ಪೋರ್ಟ್ ಆಫ್ ರೋಟರ್ಡ್ಯಾಮ್ ಮತ್ತಿತರ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿವೆ. ಶೀಘ್ರವೇ ಈ ದೇಶಗಳ ವಾಣಿಜ್ಯ ಸಂಘಟನೆ ಜೊತೆಗೆ ಒಪ್ಪಂದ ಏರ್ಪಡಬಹುದು.
ಇನ್ವೆಸ್ಟ್ ಕರ್ನಾಟಕದ ಅಂಗವಾಗಿ ಜಾಗತಿಕ ಉದ್ಯಮಿಗಳನ್ನು ಸಂಪರ್ಕಿಸಲು, ಹೂಡಿಕೆದಾರರನ್ನು ಆಹ್ವಾನಿಸಲು ರಾಜ್ಯ ಸರ್ಕಾರವು ನೆದರ್ಲ್ಯಾಂಡ್ಸ್ನ ಹೇಗ್ನಲ್ಲಿ ಯಶಸ್ವಿಯಾಗಿ ರೋಡ್ಷೋ ನಡೆಸಿದೆ. ರೋಡ್ ಶೋದಲ್ಲಿ ರಾಜ್ಯದ ನಿಯೋಗವು ನೆದರ್ಲ್ಯಾಂಡ್ಸ್ನ ಉದ್ದಿಮೆ ಪ್ರಮುಖರ ಜೊತೆ ಸಮಾಲೋಚನೆ ನಡೆಯಿತು. ಈ ವೇಳೆ ಬೆಂಗಳೂರು ಸಮಾವೇಶಕ್ಕೆ ಆಗಮಿಸುವಂತೆ ವಾಣಿಜ್ಯೋದ್ಯಮಿಗಳನ್ನು ಸಚಿವರು ಆಹ್ವಾನಿಸಿದರು.
ರಾಜ್ಯದಲ್ಲಿ ಹೂಡಿಕೆದಾರ ಸ್ನೇಹಿ ಸೌಕರ್ಯ
ಕರ್ನಾಟಕವು ನಾವೀನ್ಯತೆ, ಎಲೆಕ್ಟ್ರಾನಿಕ್ಸ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದನ್ನು ವಿವರಿಸಲಾಯಿತು. ರಾಜ್ಯದಲ್ಲಿನ ಸದೃಢ ಮೂಲಸೌಲಭ್ಯಗಳು, ನಾವೀನ್ಯತೆ ಆಧಾರಿತ ಅರ್ಥವ್ಯವಸ್ಥೆ, ಹೂಡಿಕೆದಾರ ಸ್ನೇಹಿ ಕೈಗಾರಿಕಾ ನೀತಿಗಳು ಕುರಿತು ತಿಳಿಸಿದ ಸಚಿವರು ನೆದರ್ಲ್ಯಾಂಡ್ಸ್ನ ವಾಣಿಜ್ಯ ಹಾಗೂ ಕೈಗಾರಿಕಾ ಸಂಘಟನೆಗಳ ಗಮನ ಸೆಳೆದರು.
ನೆದರ್ಲ್ಯಾಂಡ್ಸ್ನಲ್ಲಿನ ಭಾರತದ ರಾಯಭಾರಿ ಕುಮಾರ್ ತುಹಿನ್ ಅವರು ರೋಡ್ಷೋದಲ್ಲಿ ಮಾತನಾಡಿ, ಬಂಡವಾಳ ಹೂಡಿಕೆಯ ಪ್ರಮುಖ ತಾಣವಾಗಿ ಕರ್ನಾಟಕವು ವಿಶ್ವದ ಗಮನ ಸೆಳೆಯುತ್ತಿದೆ. ಈಗಾಗಲೇ ವಿವಿಧ ಕಂಪನಿಗಳು ಬಂಡವಾಳ ಹೂಡಿಕೆ ಆಸಕ್ತ ತೋರ್ಪಡಿಸಿವೆ ಎಂದು ತಿಳಿಸಿದರು.
ನೆದರ್ಲ್ಯಾಂಡ್ಸ್ನ ಕಂಪನಿಗಳಿಗೆ ಕರ್ನಾಟಕ ಎಲೆಕ್ಟ್ರಾನಿಕ್ಸ್, ನವೀಕರಿಸಬಹುದಾದ ಇಂಧನ ಮತ್ತು ಸುಧಾರಿತ ತಯಾರಿಕೆಯಂತಹ ವಲಯಗಳಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ಇಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಎನ್ನಲ್ಲ ಪ್ರಯೋಜನ ಆಗಲಿದೆ ಎಂದು ಸಚಿವರ ತಂಡ ಅಲ್ಲಿನ ವಾಣಿಜ್ಯ ಸಂಘಟನೆಗಳಿಗೆ ಮಾಹಿತಿ ನೀಡಿತು. ಇನ್ನೂ ಕೈಗಾರಿಕಾ ಬೆಳವಣಿಗೆ ತ್ವರಿತಗೊಳಿಸಲು ವಿನ್ಯಾಸಗೊಳಿಸಲಾಗಿರುವ ಕ್ವಿನ್ ಸಿಟಿ ಯೋಜನೆ ಸೇರಿದಂತೆ ರಾಜ್ಯದ ದೂರದೃಷ್ಟಿಯ ಉಪಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸರ್ಕಾರದ ಯೋಜನೆಗಳ ಮಾಹಿತಿ ನೀಡಿದರು.












Click it and Unblock the Notifications