ಏಪ್ರಿಲ್ 14 ರಂದು ಮತ್ತೆ ರಾಜ್ಯಕ್ಕೆ ಮೋದಿ ಭೇಟಿ: ಮಹತ್ವದ ಮಾಹಿತಿ ನೀಡಿದ ಸಿಟಿ ರವಿ
ಮೈಸೂರು, ಏಪ್ರಿಲ್ 08: ಚುನಾವಣೆಯ ಕಾವು ಮತ್ತು ಪ್ರಚಾರದ ಭರಾಟೆ ಪ್ರಾರಂಭವಾಗಿದೆ. ಚುನಾವಣೆ ಘೋಷಣೆ ಆದ ನಂತರ ಪ್ರಧಾನಮಂತ್ರಿಯವರು ಕಲಬುರ್ಗಿ ಮತ್ತು ಶಿವಮೊಗ್ಗದಲ್ಲಿ ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಇದೀಗ ಏಪ್ರಿಲ್ 14 ರಂದು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ ಎಂದು ಸಿ.ಟಿ.ರವಿ ಅವರು ತಿಳಿಸಿದರು.
ಮೈಸೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ನೇತೃತ್ವ ಯಾರದ್ದಿರಬೇಕು? ಪ್ರಾಮಾಣಿಕತೆ ಎಷ್ಟಿದೆ? ಪಕ್ಷದ ನೀತಿಗಳು ಚರ್ಚೆ ಆಗಬೇಕಿದೆ. ಅವರ ಕೊಡುಗೆಗಳ ಚರ್ಚೆ ಆಗಬೇಕು ಎಂದು ನುಡಿದರು. ಅಧಿಕಾರ ಇದ್ದಾಗ ನಡೆಸಿದ ಅಧ್ವಾನ, ಹಗರಣಗಳ ಚರ್ಚೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದು ಲೋಕಸಭಾ ಚುನಾವಣೆ ಎಂಬುದನ್ನು ಮರೆತಂತಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ರಾಜ್ಯಕ್ಕೆ ಕೊಟ್ಟ ಕೊಡುಗೆಗಳ ಕುರಿತು ಚರ್ಚೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದರು. ಇಡೀ ರಾಜ್ಯದ ಇತಿಹಾಸದಲ್ಲಿ ಮಾನ್ಯ ನರೇಂದ್ರ ಮೋದಿಯವರು 10 ವರ್ಷಗಳಲ್ಲಿ ಕೊಟ್ಟಿರುವ ತೆರಿಗೆ ಪಾಲೇ ಹೆಚ್ಚು ಎಂದು ಹೇಳಿದರು.
ಯೋಜನೆಗಳು, ಸಹಾಯಧನ, ತೆರಿಗೆ ಪಾಲಿನ ರೂಪದಲ್ಲಿ ಗರಿಷ್ಠ ಹಣವನ್ನು ಮೋದಿಯವರು ಕೊಟ್ಟಿದ್ದಾರೆ. ನಾವು ಈಗಾಗಲೇ ದಾಖಲೆಗಳನ್ನೂ ಕೊಟ್ಟಿದ್ದೇವೆ. ಚರ್ಚೆ ನಡೆಸೋಣ ಎಂದು ತಿಳಿಸಿದರು. ತೆರಿಗೆ ವಿಚಾರದಲ್ಲಿ ಅನ್ಯಾಯ ಆಗಿದೆ ಎಂಬ ದೃಷ್ಟಿ ನಿಮ್ಮದಾದರೆ, ಆ ದೃಷ್ಟಿದೋಷವನ್ನು ನಿವಾರಿಸಬೇಕಾಗುತ್ತದೆ ಎಂದು ತಿಳಿಸಿದರು.
ರಾಹುಲ್ ಗಾಂಧಿಯವರಿಗೆ ಕಡ್ಡಾಯ ನಿವೃತ್ತಿ
ಈ ಚುನಾವಣೆ ಬಳಿಕ ದೇಶದ ಜನರೇ ರಾಹುಲ್ ಗಾಂಧಿಯವರಿಗೆ ಕಡ್ಡಾಯ ನಿವೃತ್ತಿಯ ಆದೇಶ ಕೊಡಲಿದ್ದಾರೆ. ಈಗಿನ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬರೆಯಲು ನಗರ ನಕ್ಸಲೀಯರ ಸಹಾಯವನ್ನು (ಅರ್ಬನ್ ನಕ್ಸಲೈಟರು), ಹಾಗೂ ತಾಲಿಬಾನಿಗಳ ಮೂಲಕ ಅವರ ಕಾರ್ಯಸೂಚಿಯ ಪ್ರೇರಣೆ ಪಡೆದಂತೆ ಕಾಣುತ್ತಿದೆ ಎಂದು ಸಿ.ಟಿ.ರವಿ ಅವರು ಅಭಿಪ್ರಾಯಪಟ್ಟರು.

ತಾಲಿಬಾಲಿಗಳ ಪ್ರಚೋದನೆ, ನಗರ ನಕ್ಸಲೀಯರ ಸಹಾಯ ಪಡೆದು ಅವರು ಪ್ರಣಾಳಿಕೆ ರೂಪಿಸಿದಂತೆ ಕಾಣುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ಸಿಗರು ಡಬಲ್ ಡಿಜಿಟ್ ಕ್ರಾಸ್ ಆಗುವ ಕುರಿತು ಯಾವುದೇ ಸಮೀಕ್ಷೆಯಲ್ಲಿ ತಿಳಿಸಿಲ್ಲ ಎಂಬುದು ಸಮಾಧಾನದ ಸಂಗತಿ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಈ ಬಾರಿಯ ಪ್ರಣಾಳಿಕೆಯನ್ನು ಗಮನಿಸಿದರೆ ವಿಭಜನೆಯ ರೋಗ ಅದಕ್ಕೆ ಆವರಿಸಿಕೊಂಡಂತಿದೆ. ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ಬ್ರಿಟಿಷರು, ಕಾಂಗ್ರೆಸ್ಸಿಗರು ಮತ್ತು ಮುಸ್ಲಿಂ ಲೀಗ್ ಸೇರಿ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿ ಭಾರತವನ್ನು ವಿಭಜಿಸಿದ್ದರು. ಆ ವಿಭಜನೆಯ ರೋಗ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಡಿಮೆ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಮಾಜವನ್ನು ಜಾತಿ ಹೆಸರಿನಲ್ಲಿ, ದೇಶವನ್ನು ಪ್ರಾದೇಶಿಕತೆಯ ಹೆಸರಿನಲ್ಲಿ, ಮತೀಯವಾದಕ್ಕೆ ಕುಮ್ಮಕ್ಕು ಕೊಡುವ ಮೂಲಕ ಮತ್ತೆ ಮತ್ತೆ ವಿಭಜಿಸುವ ಮಾತನ್ನೇ ಆಡುತ್ತಿದ್ದಾರೆ. ವಿಭಜನೆಯ ರೋಗ ಅವರನ್ನು ಆವರಿಸಿಕೊಂಡಿದೆ ಎಂದು ಟೀಕಿಸಿದರು. ಕಾಂಗ್ರೆಸ್ ತನ್ನ ಸ್ಥಾಪನೆಯಿಂದ ಮೊದಲುಗೊಂಡು ಕಾಲಕಾಲಕ್ಕೆ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಂಡು ಬಂದುದನ್ನು ನಾವು ಗಮನಿಸಬಹುದು. ಆಲೆನ್ ಒಕ್ಟೋವಿಯೋ ಹ್ಯೂಮ್ ಕಾಂಗ್ರೆಸ್ ಸ್ಥಾಪಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ಉದ್ದೇಶ ಅವರದಾಗಿರಲಿಲ್ಲ. ಎರಡು ದಶಕಗಳ ಬಳಿಕ ಅದೊಂದು ರಾಷ್ಟ್ರಭಕ್ತ ಸಂಘಟನೆಯಾಗಿ, ಆಂದೋಲನವಾಗಿ ಪರಿವರ್ತನೆಗೊಂಡಿತು ಎಂದು ಹೇಳಿದರು.












Click it and Unblock the Notifications