ದೇವೇಗೌಡರು ಗುಜರಾತಿಗೆ ಬಂದು ನೆಲೆಸಲಿ : ಮೋದಿ
ಚಿಕ್ಕಬಳ್ಳಾಪುರ, ಏ.13: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮ್ಮ ಭಾರತ್ ವಿಜಯ್ ಸಮಾವೇಶವನ್ನು ಮುಂದುವರೆಸಿದ್ದು ಭಾನುವಾರ ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡರ ಪರ ಮತಯಾಚಿಸಿದರು. ಮಾಜಿ ಪ್ರಧಾನಿ ದೇವೇಗೌಡರು ಇತ್ತೀಚಿಗೆ ನೀಡಿದ್ದ ನಿವೃತ್ತಿ ಹೇಳಿಕೆ ಬಗ್ಗೆ ಕೂಡಾ ಮೋದಿ ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ಸಮಾವೇಶ ಸೇರಿದಂತೆ ನರೇಂದ್ರ ಮೋದಿ ಅವರು ಈವರೆಗೂ 65 ಸಮಾವೇಶಗಳನ್ನು ಪೂರ್ಣಗೊಳಿಸಿದ್ದಾರೆ. ಕರ್ನಾಟಕದಲ್ಲಿ ಭಾನುವಾರ (ಏ.13) ಇನ್ನೂ ಎರಡು ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು:
* ರಾಜಕೀಯ ನಿವೃತ್ತಿ ಬಗ್ಗೆ ದೇವೇಗೌಡರು ನೀಡಿದ ಹೇಳಿಕೆಗೆ ಮೋದಿ ತಿರುಗೇಟು.. ಗೌಡಜೀ ನಾನು ನಿಮ್ಮ ಮಗನಿದ್ದಂತೆ, ಮೋದಿ ಪ್ರಧಾನಿಯಾದರೆ ರಾಜ್ಯ ಬಿಡುವುದಾಗಿ ಹೇಳಿದ್ದೀರಿ.. ನೀವೇನು ಚಿಂತಿಸಬೇಡಿ.. ನಿಮಗೆ ಗುಜರಾತಿನಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತೇನೆ. ನಿಮ್ಮ ಮಕ್ಕಳು ಮಾಡುವಷ್ಟು ಸೇವೆ ಮಾಡುತ್ತೇನೆ ಎಂದ ಮೋದಿ ಹೇಳಿದರು.

* ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಮೋದಿ ವಾಗ್ದಾಳಿ.
* ಭರವಸೆಗಳನ್ನು ಈಡೇರಿಸದ ವೀರಪ ಮೊಯ್ಲಿ ಅವರನ್ನು ಈ ಬಾರಿ ಮನೆಗೆ ಕಳಿಸಿ.
* ಚಿಕ್ಕಬಳ್ಳಾಪುರದಲ್ಲಿ ಫ್ಲೋರೈಡ್ ನೀರು ಕೊಡ್ತಾ ಇದಾರೆ. ನೀರಿನ ಸಮಸ್ಯೆ ಬಗ್ಗೆ ಮೊಯ್ಲಿ ಇಲ್ಲಿ ತನಕ ಗಮನ ಹರಿಸಿಲ್ಲ.
* ಜನರಿಗೆ 9 ಎಲ್ ಪಿಜಿ ಸಿಲಿಂಡರ್ ಕೊಡಬೇಕಾ? 12 ಕೊಡಬೇಕು ಎಂದು ಯೋಚನೆ ಮಾಡುವುದೇ ಮೋಯ್ಲಿ ಕೆಲಸವಾಗಿತ್ತು.
* ಕಾಂಗ್ರೆಸ್ ನಾಯಕರು ಏನಾದರೂ ಒಳ್ಳೆಯದು ಮಾಡಿದ್ದರೆ ಅದು ಅವರ ಕುಟುಂಬ ಹಿತಕ್ಕಾಗಿ ಮಾತ್ರ, ಜನಹಿತ, ದೇಶದ ಹಿತ ಅವರಿಗೆ ಗೊತ್ತಿಲ್ಲ.
* ನಿಮಗೆ ಯಾವ ರೀತಿ ಸರ್ಕಾರ ಬೇಕು? ಅಂಗವಿಕಲ, ರಿಮೋಟ್ ಕಂಟ್ರೋಲ್ ಸರ್ಕಾರ ಬೇಕೇ? ಎಂದು ನೆರೆದಿದ್ದ ಜನರಿಗೆ ಮೋದಿ ಪ್ರಶ್ನೆ.
* ನರ್ಮದಾ ನದಿ ನೀರು ಬಳಸಿ ಪೈಪ್ ಲೇನ್ ಮೂಲಕ ಗುಜರಾತಿಗೆ ನೀರು ಹರಿಸಿದ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಮೋದಿ ಈ ಕ್ಷೇತ್ರದ ನೀರಿನ ಸಮಸ್ಯೆ ಬಗೆಹರಿಸಲು ಬಿಜೆಪಿ ಬದ್ಧವಾಗಿದೆ ಎಂದರು.

ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಹಾಗೂ ಹಾವೇರಿಯಲ್ಲಿ ಶಿವಕುಮಾರ ಉದಾಸಿ ಪರ ಭಾಷಣ ಮಾಡಲಿದ್ದಾರೆ. ನಂತರ ಮೋದಿ ಅವರು ತಮಿಳುನಾಡಿಗೆ ತೆರಳಲಿದ್ದು, ಚೆನ್ನೈನಲ್ಲಿ ಸಮಾವೇಶದಲ್ಲಿ ಎಲ್ ಕೆ ಅಡ್ವಾಣಿ ಅವರ ಜತೆ ಭಾಗವಹಿಸಲಿದ್ದಾರೆ. ಇದೇ ವೇಳೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.












Click it and Unblock the Notifications