ನಾಳೆ ದೆಹಲಿಯತ್ತ ಡಿ ಕೆ ಶಿವಕುಮಾರ್;ಸೋನಿಯಾ ಭೇಟಿಯೇ ಮೊದಲ ಆದ್ಯತೆ: ಕೊನೆ ಕ್ಷಣದವರೆಗೂ ಟ್ರಬಲ್ ಶೂಟರ್ ಕಸರತ್ತು?
ಬೆಂಗಳೂರು, ಮೇ 15: ಐತಿಹಾಸಿಕ ಗೆಲುವು ತಂದ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಗ್ಗಜಗ್ಗಾಟ ಜೋರಾಗಿದೆ. 135 ಕಾಂಗ್ರೆಸ್ ಶಾಸಕರ ಅಭಿಪ್ರಾಯಗಳನ್ನ ಸಂಗ್ರಹಿಸಿ,ವೀಕ್ಷಕರ ಮೂಲಕ ಶಾಸಕರ ಅಭಿಪ್ರಾಯವನ್ನ ಹೈಕಮಾಂಡ್ ಸಂಗ್ರಹಿಸಿದೆ.
ಇತ್ತ ಸಿಎಂ ಸ್ಥಾನಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಜಟಾಪಟಿ ನಡೆಸಿದ್ದು, ಕಾಂಗ್ರೆಸ್ ಸಿಎಂ ಆಯ್ಕೆ ಕಸರತ್ತು ತೀವ್ರ ಕುತೂಹಲದ ಹಂತಕ್ಕೆ ಬಂದು ತಲುಪಿದೆ. ಸಿದ್ದರಾಮಯ್ಯ ಹಾಗೂ ಅವರ ಆಪ್ತ ಶಾಸಕರು ದೆಹಲಿಗೆ ತಲುಪಿದ್ದಾರೆ. ಈ ನಡುವೆ ಡಿಕೆ ಶಿವಕುಮಾರ್ ದೆಹಲಿ ಪ್ರಯಾಣ ಬಹುತೇಕ ರದ್ದಾಗಿತ್ತು, ಇದೀಗ ನಾಳೆ(ಮಂಗಳವಾರ) ಬೆಳಗ್ಗೆ ದೆಹಲಿಗೆ ತರೆಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಯನ್ನ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ ಕೆ ಶಿವಕುಮಾರ್, ಇಂದು ಸಂಜೆ ದೆಹಲಿಗೆ ಹೋಗಬೇಕು ಅಂದುಕೊಂಡಿದ್ದೇ. ಆದರೆ, ಆರೋಗ್ಯ ಸರಿ ಇರಲಿಲ್ಲ, ಅದಕ್ಕೆ ಹೋಗಲು ಆಗಿಲ್ಲ, ಈಗ ಆರೋಗ್ಯ ಸುಧಾರಣೆ ಆಗಿದೆ. ನಾಳೆ ಬೆಳಿಗ್ಗೆ (ಮಂಗಳವಾರ) ದೆಹಲಿಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನೂ ದೆಹಲಿಯಲ್ಲಿ ಏನು ಬೆಳವಣಿಗೆ ಆಗುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲ, ನಾಳೆ ಸೋನಿಯಾ ಗಾಂಧಿ ಶಿಮ್ಲಾದಿಂದ ಬರ್ತಾರೆ. ಸೋನಿಯಾ ಗಾಂಧಿ ಅವರನ್ನ ಭೇಟಿಯಾಗವುದೇ ನನ್ನ ಮೊದಲ ಆದ್ಯತೆ, ನಾನು ಕೂಡ ನಾಳೆ ದೆಹಲಿಗೆ ಹೋಗುತ್ತೇನೆ. ಸೋನಿಯಾ ಗಾಂಧಿ ಅವರು ಬರಲಿ ಅಂತಾನೆ ನಾನು ಕಾಯುತ್ತಾ ಇದಿನಿ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ದೆಹಲಿಯಲ್ಲಿ ಡಿ ಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ಮಾಡಿತನಾಡಿ, ನಾನು ದೆಹಲಿಗೆ ಬಂದಂತಹ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಭೇಟಿಯಾಗುತ್ತಿದೆ, ಅದೇ ರೀತಿ ಇವತ್ತು ಸಹ ಭೇಟಿ ಮಾಡುತ್ತೇನೆ ಉಳಿದಂತ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷರು ನಿಮಗೆ ತಿಳಿಸುತ್ತಾರೆ. ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ಆಗಿದೆ. ಜನರಲ್ ಮಾತುಕತೆ ನಡೆದಿದೆ ಅಷ್ಟೇ, ನಾಳೆ ಡಿ ಕೆ ಶಿವಕುಮಾರ್ ಬರುತ್ತಾರೆ, ನಾಳೆ ಸಂಜೆ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಜೊತೆಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಚರ್ಚೆ ನಡೆಸುತ್ತಾರೆ ಎಂದು ಹೇಳಿದರು.
ಈಗಾಗಲೇ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಭೇಟಿಗಾಗಿ ಆಪ್ತ ಶಾಸಕರನ್ನ ಕರೆದುಕೊಂಡು ಹೋಗಿದ್ದು, ಸಿದ್ದರಾಮಯ್ಯ ಪರವಾಗಿ ಬಹುತೇಕ ಶಾಸಕರು ಒಲವು ತೋರಿಸಿರುವ ಸಾಧ್ಯತೆ ಇದೆ. ಹೀಗಾಗಿ ಡಿ ಕೆ ಶಿವಕುಮಾರ್ ಮಾಧ್ಯಮಗಳ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ನನಗೆ ತಾಳ್ಮೆ ಹಾಗೂ ಸಮಯಪ್ರಜ್ಞೆ ಮತ್ತು ಹೋರಾಟದ ಮನೋಭಾವವಿದೆ. ಪಾಂಡವರ ಸೂತ್ರ ಅನುಸರಿಸ್ತೇವೆ ಅಂತ ವಿಧಾನ ಸಭೆಯಲ್ಲಿ ಹೇಳಿದ್ದೆ. ನನ್ನಲ್ಲಿರುವ ತಂತ್ರಗಳಿಂದ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ. ಇಷ್ಟು ಸಾಕು ನನಗೆ ಎಂದು ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ.
ಇತ್ತ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಭಾನುವಾರದಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಕಸರತ್ತು ನಡೆಯುತ್ತಿದೆ. ಡಿಕೆ ಶಿವಕುಮಾರ್ ಅವರ ಪರವಾಗಿ ಒಕ್ಕಲಿಗ ಸಂಘ ಬ್ಯಾಟಿಂಗ್ ನಡೆಸಿತ್ತು. ಡಿ ಕೆ ಶಿವಕುಮಾರ್ ಅವರು ಸಿಎಂ ಮಾಡಬೇಕು ಎಂದು ಆದಿಚುಂಚನಗಿರಿ ಶ್ರೀಗಳು ಮತ್ತು ನಂಜಾವಧೂತ ಶ್ರೀಗಳು ಒತ್ತಾಯ ಮಾಡಿದ್ದರು. ಇದೇ ವೇಳೆ ಕುರುಬ ಸಮುದಾಯದ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕೆಲ ಸ್ವಾಮೀಜಿಗಳು ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಬೇಕೆಂದು ಒತ್ತಾಯ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿ ಕೆ ಶಿವಕುಮಾರ್ ಅವರು ಹೈಕಮಾಂಡ್ ನಾಯಕರ ಮೇಲೆ ವಿಶ್ವಾಸ ಇಟ್ಟಿರುವ ಡಿ ಕೆ ಶಿವಕುಮಾರ್ ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡುವ ಮೂಲಕ ಪ್ರತ್ಯೇಕವಾಗಿ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ನಿಮಗೆ ಕೊಟ್ಟ ಮಾತಿನಂತೆ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸ್ಥಾನದ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಪರವಾಗಿ ರಾಹುಲ್ ಗಾಂಧಿ ಒಲುವು ತೋರಿದ್ದು, ಕೊನೆ ಕ್ಷಣದವರೆಗೂ ಸಿಎಂ ಸ್ಥಾನಕ್ಕಾಗಿ ಡಿ ಕೆ ಶಿವಕುಮಾರ್ ಪ್ರಯತ್ನ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications