ಆನ್ಲೈನ್ ಮೂಲಕ ದೇವಾಲಯಗಳ ಸೇವೆ ಬುಕ್ ಮಾಡಿ
ಬೆಂಗಳೂರು, ಜೂ. 11 : ವಾರ್ಷಿಕ ಒಂದು ಕೋಟಿಗೂ ಹೆಚ್ಚು ಆದಾಯವಿರುವ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪೂಜಾ ಸೇವಾ ಕಾರ್ಯಗಳನ್ನು ಮತ್ತು ವಸತಿ ವ್ಯವಸ್ಥೆಯನ್ನು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡುವ ಸೇವೆಗೆ ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ ಚಾಲನೆ ನೀಡಿದರು.
ಗುರುವಾರ ಬೆಂಗಳೂರಿನಲ್ಲಿ ಸಚಿವ ಟಿ.ಬಿ.ಜಯಚಂದ್ರ ಅವರು ಕೊಲ್ಲೂರು ಮೂಕಾಬಿಂಕಾ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ, ಮಲೆ ಮಹದೇಶ್ವರ, ಮೈಸೂರು ಚಾಮುಂಡೇಶ್ವರಿ, ನಂಜನಗೂಡಿನ ಶ್ರೀಕಂಠೇಶ್ವರ, ಹುಲಿಗಮ್ಮದೇವಿ, ಸವದತ್ತಿ ರೇಣುಕಾಯಲ್ಲಮ್ಮ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಹಳೆವೂರು ದುರ್ಗಾಪರಮೇಶ್ವರಿ, ಬೆಂಗಳೂರಿನ ಬನಶಂಕರಿ ದೇವಾಲಯಗಳಲ್ಲಿ ಆನ್ಲೈನ್ ಸೇವೆ ಲಭ್ಯವಿದೆ ಎಂದರು.

ತಿರುಪತಿಯಲ್ಲಿರುವ ಕರ್ನಾಟಕ ರಾಜ್ಯದ ಛತ್ರಗಳಲ್ಲಿ ವಸತಿ ವ್ಯವಸ್ಥೆಯನ್ನು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ. ಇದೇ ರೀತಿ ವಾರ್ಷಿಕ ಒಂದು ಕೋಟಿಗಿಂತ ಹೆಚ್ಚಿನ ಆದಾಯವಿರುವ ಮುಜರಾಯಿ ದೇವಾಲಯಗಳಲ್ಲಿ ಆನ್ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಜಯಚಂದ್ರ ಅವರು ವಿವರಣೆ ನೀಡಿದರು. [ಕಾಚರಕನಹಳ್ಳಿಯ ದೇವಾಲಯ ಮುಜರಾಯಿ ವಶಕ್ಕೆ]
ದೇವಾಲಯಗಳಿಗೆ ಭೇಟಿ ನೀಡುವ ಭಕ್ತರನ್ನು ಮಧ್ಯವರ್ತಿಗಳು ಶೋಷಣೆ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಆನ್ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ದೇವರ ದರ್ಶನದ ಸಮಯ, ಅಭಿಷೇಕ, ಅರ್ಚನೆ ಸೇರಿದಂತೆ ವಸತಿ ವ್ಯವಸ್ಥೆಯನ್ನು ಸಹ ಆನ್ಲೈನ್ ಮೂಲಕ ಬುಕ್ ಮಾಡಬಹುದು ಎಂದು ಸಚಿವರು ತಿಳಿಸಿದರು. [ಮುಜರಾಯಿ ಇಲಾಖೆ ವ್ಯಾಪ್ತಿಯ ಶಾಲೆಗಳು ಶಿಕ್ಷಣ ಇಲಾಖೆಗೆ]
ಆನ್ಲೈನ್ ಮೂಲಕ ಸೇವೆ ಬುಕ್ ಮಾಡಿ, ದೇವಾಲಯಕ್ಕೆ ಆಗಮಿಸಲು ಸಾಧ್ಯವಾಗದ ಭಕ್ತರಿಗೆ ಮನೆ ಬಾಗಿಲಿಗೆ ಪ್ರಸಾದ ತಲುಪಿಸುವ ವ್ಯವಸ್ಥೆ ಮಾಡುವ ಉದ್ದೇಶವನ್ನು ಮುಜರಾಯಿ ಇಲಾಖೆ ಹೊಂದಿದೆ. ಬೆಂಗಳೂರು ಒನ್ ಕೇಂದ್ರಗಳ (https://www.bangaloreone.gov.in) ಮೂಲಕ ಆನ್ಲೈನ್ ಸೇವೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 34,563 ಮುಜರಾಯಿ ದೇವಾಲಯಗಳಿವೆ, ಇವುಗಳಲ್ಲಿ 15 ಸಾವಿರ ದೇವಾಲಯಗಳಲ್ಲಿ ವಸತಿ ಹಾಗೂ ವಿಶೇಷ ಪೂಜೆಯ ವ್ಯವಸ್ಥೆಗಳಿವೆ. ಬಹುತೇಕ ದೇವಾಲಯಗಳಲ್ಲಿ ಶನಿವಾರ ಮತ್ತು ಭಾನುವಾರ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ಮಧ್ಯವರ್ತಿಗಳು ಶೋಷಣೆ ಮಾಡುತ್ತಿದ್ದರು ಎಂದು ಸಚಿವರು ತಿಳಿಸಿದರು.












Click it and Unblock the Notifications