ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಮುದ್ರಾ ಯೋಜನೆ ಸೀಮಿತವೇ..?
ಕರ್ನಾಟಕ, ನವೆಂಬರ್ 27: ದೇಶದ ಯುವ ಜನತೆಯನ್ನು ಉದ್ಯಮಶೀಲತೆಯತ್ತ ಆಕರ್ಷಿಸಲು ಹಾಗೂ ಸಣ್ಣ, ಅತಿ ಸಣ್ಣ ಉದ್ಯಮಶೀಲರಿಗೆ ಹಣಕಾಸಿನ ನೆರವು ನೀಡಲು ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಈ ಯೋಜನೆಗಳನ್ನು 2015 ರಲ್ಲಿ ಪ್ರಾರಂಭಿಸಿತ್ತು.
ಆದರೆ ಈಗ ಕೇವಲ ಬಿಜೆಪಿಗರು ಮತ್ತು ಕಾರ್ಯಕರ್ತರಿಗೆ ಮಾತ್ರ ಈ ಯೋಜನೆ ಸ್ಥೀಮಿತವಾಯಿತೆ ಎಂಬ ಅನುಮಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಯೋಜನೆಯಲ್ಲಿ ಸಾಲ ಕೇಳಲು ಹೋದರೆ ಬ್ಯಾಂಕ್ ನೀಡುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮುದ್ರಾ ಅಡಿ ಹೆಚ್ಚುತ್ತಿರುವ NPA; ಆರ್ ಬಿಐ ಡೆಪ್ಯೂಟಿ ಗವರ್ನರ್ ವಾರ್ನಿಂಗ್
ಮುದ್ರಾ ಯೋಜನೆಯಲ್ಲಿ ಸಾಲ ಪಡೆದಿರುವ ಬಹುತೇಕ ಜನರಲ್ಲಿ ಬಿಜೆಪಿಗರೇ ಇದ್ದಾರೆಯೇ? ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಸಾಲವನ್ನು ನೀಡಲಾಗಿದೆ. ಇದೊಂದು ದೊಡ್ಡ ಹಗರಣವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರಿಂದ ಎನ್ ಪಿ ಎ ಹೆಚ್ಚುತ್ತಿದ್ದು ಇದರ ಬಗ್ಗೆ ಡೆಪ್ಯುಟಿ ಗವರ್ನರ್ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಉತ್ಪಾದನೆ, ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ತೊಡಗಲು ಇಚ್ಛೆ ಪಡುವವರಿಗಾಗಿ 10 ಲಕ್ಷ ರೂ, ವರೆಗಿನ ಸಾಲ ಪಡೆಯಲು ಪ್ರಧಾನ ಮಂತ್ರಿ ಮುದ್ರಾ ಯೋಜನಾ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಮುದ್ರಾ ಸಾಲವನ್ನು ಬಿಜೆಪಿ ಅನುಯಾಯಿಗಳಿಗೆ ಇದರ ಸೌಲಭ್ಯ ಹೋಗಿದೆ, ಅವರು ವಾಪಸ್ ಬ್ಯಾಂಕ್ ಗಳಿಗೆ ಪಾವತಿಸುತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದರ ಬಗ್ಗೆ ತನಿಖೆ ಮಾಡಬೇಕಿದೆ.
ಮುದ್ರಾ ಯೋಜನೆಯಲ್ಲಿ ಈ ಕೆಳಕಂಡಂತೆ ಸಾಲವನ್ನು ನೀಡಲಾಗುತ್ತೆ
1) ಶಿಶು ಸಾಲ - 50,000/- ರೂ, ವರೆಗೆ
2) ಕಿಶೋರ್ ಸಾಲ - 50,000 ರೂ, ನಿಂದ 5 ಲಕ್ಷ ರೂ, ವರೆಗೆ
3) ತರುಣ್ ಸಾಲ - 5 ಲಕ್ಷ ರೂ, ದಿಂದ 10 ಲಕ್ಷ ರೂ, ಗಳವರೆಗೆ
ಆದರೆ ಈ ಸಾಲವನ್ನು ಪಡೆಯಲು ಯಾರು ಅರ್ಹರೋ ಅವರಿಗೆಲ್ಲರಿಗೂ ಈ ಸೌಲಭ್ಯ ದೊರಕುವಂತಾಗಬೇಕು. ಪಕ್ಷಾತೀತವಾಗಿ ಯುವ ಉದ್ಯಮಿಗಳಿಗೆ ಹಣಕಾಸಿನ ನೆರವು ನೀಡುವ ಈ ಯೋಜನೆಯನ್ನು ಪಾರದರ್ಶಕವಾಗಿ ಬ್ಯಾಂಕ್ ಗಳು ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಯುವಜನತೆ ಧ್ವನಿ ಎತ್ತಿದ್ದಾರೆ.