ಬಿಎಸ್ವೈಗೆ ಅನಂತ ಅಡ್ಡಿ: ಸೋಮಣ್ಣ ನೇತೃತ್ವದ ಸಭೆ
ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟ ಮೇಲೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್ ಅವರ ನೆರಳಾಗಿ ಕಾಣಿಸಿಕೊಂಡಿದ್ದ ಸೋಮಣ್ಣ ನೇತೃತ್ವದಲ್ಲಿ ಈ ಸಭೆ ನಡೆದಿರುವುದು ಕುತೂಹಲಕಾರಿಯಾಗಿದೆ. ಗಮನಾರ್ಹ ಸಂಗತಿಯೆಂದರೆ ಈ ಸಭೆಯಲ್ಲಿ ಅನಂತಕುಮಾರ್ ಅವರೇ ಯಡಿಯೂರಪ್ಪ ವಾಪಸಾತಿಗೆ ತೊಡಕಾಗಿದ್ದಾರೆ ಎಂದು ಬಿಎಸ್ವೈ ಕಟ್ಟಾ ಬೆಂಬಲಿಗರು ಅಲವತ್ತುಕೊಂಡಿದ್ದಾರೆ.
ಸಭೆಯಲ್ಲಿ ಕೆಲ ಬಿಬಿಎಂಪಿ ಸದಸ್ಯರು, ಬಿಜೆಪಿ ಮುಖಂಡರು, ಪ್ರಭಾವಿ ಲಿಂಗಾಯಿತ ನಾಯಕರು ಭಾಗವಹಸಿದ್ದರು ಎನ್ನಲಾಗಿದೆ. ಬಿಎಸ್ವೈ ಅವರ ಬಿಜೆಪಿ ಮರುಸೇರ್ಪಡೆಗೆ ಹಸಿರು ನಿಶಾನೆ ತೋರಿಸದೆ ಅನಂತಕುಮಾರ್ ಅವರು ಉದಾಸೀನ ಧೋರಣೆ ಅನುಸರಿಸುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ತಾವು ಬೇರೆ ದಾರಿ ನೋಡಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಈ ನಾಯಕರು ಒಂದು ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ನವೆಂಬರ್ 17 ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅಷ್ಟರೊಳಗೆ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಬಿಜೆಪಿಗೆ ಮರು ಸೇರ್ಪಡೆ ವಿಷಯ ಇತ್ಯರ್ಥವಾಗಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅನಂತಕುಮಾರ್ ಹಾಗೂ ಕೆಲ ಬಿಜೆಪಿ ಮುಖಂಡರು ಅಸಡ್ಡೆ ತೋರುತ್ತಿದ್ದಾರೆ.
ಬಿಎಸ್ವೈ ಬಿಜೆಪಿಗೆ ಹಿಂದಿರುಗಲು ನಮಗೇನು ಅಭ್ಯಂತರವಿಲ್ಲವೆಂದು ಹೇಳಿಕೆ ನೀಡುವ ಕೆಲ ನಾಯಕರು ಕೂಡ ಯಡಿಯೂರಪ್ಪ ಬಿಜೆಪಿಗೆ ಹಿಂದಿರುಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಗೊಂದಲವುಂಟಾಗಿದ್ದು, ಯಡಿಯೂರಪ್ಪ ಹಾಗೂ ಬೆಂಬಲಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಅತ್ತೂ ಕರೆದು ಆತಿಥ್ಯ ಮಾಡಿಸಿಕೊಳ್ಳುವುದಕ್ಕಿಂತ ಪ್ರತ್ಯೇಕತೆಯ ಚಿಂತನೆ ಮಾಡುವುದೇ ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿರುವುದಾಗಿಯೂ ತಿಳಿದುಬಂದಿದೆ.
ನವೆಂಬರ್ 16ರೊಳಗೆ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರನ್ನು ಮತ್ತೆ ಸೇರಿಸಿಕೊಂಡು ನರೇಂದ್ರ ಮೋದಿ ಅವರ ಎದುರು ಒಗ್ಗಟ್ಟು ಪ್ರದರ್ಶಿಸಿ ಲೋಕಸಭೆ ಚುನಾವಣೆ ಎದುರಿಸುವುದು ಗುರಿಯಾಗಿತ್ತು. ಆದರೆ ಈವರೆಗೂ ಯಡಿಯೂರಪ್ಪ ಸೇರ್ಪಡೆ ಬಗ್ಗೆ ಬಿಜೆಪಿಯಲ್ಲಿ ನಿಖರತೆ ಇಲ್ಲ. ಹೈಕಮಾಂಡಿನ ನಾಯಕರು ಕೂಡ ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಸ್ವತಃ ಮೋದಿಯವರೇ ಯಡಿಯೂರಪ್ಪನವರಂತಹ ಪ್ರಭಾವಿ ನಾಯಕರು ಬಿಜೆಪಿಗೆ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ ಇಲ್ಲಿನ ಕೆಲ ನಾಯಕರು ಯಡಿಯೂರಪ್ಪ ಬಿಜೆಪಿ ಮರುಸೇರ್ಪಡೆಗೆ ಅಡ್ಡಿಪಡಿಸುತ್ತಿದ್ದಾರೆ.
ಇದೇ ಪರಿಸ್ಥಿತಿ ಮುಂದುವರಿದರೆ ಕಳೆದ ವಿಧಾನಸಭೆಯ ಚುನಾವಣೆಯ ಫಲಿತಾಂಶವೇ ಮರುಕಳಿಸುವ ಸಾಧ್ಯತೆ ಇದೆ. ಯಡಿಯೂರಪ್ಪನವರ ಬೆಂಬಲಿಗರೆನಿಸಿಕೊಂಡವರಿಗೆ ಮತ್ತೆ ನೆಲೆ ಇಲ್ಲದಂತಾಗುತ್ತದೆ. ಅದಕ್ಕಾಗಿ ಈಗಲೇ ಚಿಂತನೆ ನಡೆಸಿ ಮುಂದಿನ ಕಾರ್ಯತಂತ್ರ ರೂಪಿಸಬೇಕಾದ ಅಗತ್ಯ ಇದೆ ಎಂದು ಸಭೆಯಲ್ಲಿ ಚರ್ಚಿಸಿರುವುದಾಗಿ ತಿಳಿದು ಬಂದಿದೆ.