ದೌರ್ಜನ್ಯದ ವಿರುದ್ಧ ಸಜ್ಜಾಗುತ್ತಿದೆ ಅಮ್ಮಂದಿರ ಪಡೆ
ಮಂಗಳೂರು, ಸೆ. 11 : ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಗೆ ರಾಜ್ಯದ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ತಾಯಂದಿರ ವೇದಿಕೆ ಸೃಷ್ಟಿ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅಮಿತಾ ಪ್ರಸಾದ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸೆ. 9ರಂದು ಮಹಿಳಾ ತರಬೇತಿ ಕೇಂದ್ರ ಏರ್ಪಡಿಸಿದ್ದ 'ಮಹಿಳಾ ದೌರ್ಜನ್ಯ ತಡೆ' ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ಮಕ್ಕಳ ಮೇಲೆ ಪಾಲಕರ ಪರಿಣಾಮ ಗಾಢವಾಗಿರುತ್ತದೆ, ಅದರಲ್ಲೂ ಗಂಡು ಮಕ್ಕಳ ಮೇಲೆ ತಾಯಿ ಪ್ರಭಾವದ ವ್ಯಾಪ್ತಿ ದೊಡ್ಡದು ಎಂದರು.(ನಿರ್ಭಯಾ ನರ್ಸ್ ಮೇಲೆಯೂ ಗ್ಯಾಂಗ್ರೇಪ್)

ಯಾರು ತಾಯಿಗೆ ಗೌರವ ನೀಡುವುದಿಲ್ಲವೋ ಅವರು ಉತ್ತಮ ನಾಗರಿಕರಾಗಿ ಬೆಳೆಯಲು ಹೇಗೆ ಸಾಧ್ಯ? ಹಾಗಾಗಿ ತಾಯಂದಿರಿಗೆ ಮಕ್ಕಳ ಬೆಳವಣಿಗೆ ಬಗ್ಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು. ಇದರಿಂದ ಮುಂದೆ ಅಪರಾಧ ಪ್ರಕರಣಗಳನ್ನು ತಡೆಯಬಹುದಾಗಿದೆ ಎಂದರು.
2012 ರಲ್ಲಿ ತಿದ್ದುಪಡಿಯಾದ ಲೈಂಗಿಕ ದೌರ್ಜನ್ಯ ತಡೆ ಕಾನೂನು 1998ರ ಸುಪ್ರೀಂ ಕೋರ್ಟ್ ನಿರ್ದೇಶನಗಳಿಗಿಂತ ಶಕ್ತಿಯುತವಾಗಿದೆ. ಕೆಲವು ಕಡೆ ಮಹಿಳೆ ಆತ್ಮವಿಶ್ವಾಸ ಬೆಳೆಸಿಕೊಂಡು ಸ್ವತಃ ತಾನೇ ದೌರ್ಜನ್ಯ ತಡೆಯಲು ಮುಂದೆ ಬರಬೇಕಾಗಿದೆ ಎಂದರು.(ವಿಕೃತ 'ರೇಪ್ ದಂಪತಿ' ಈಗ ಪೊಲೀಸ್ ಅತಿಥಿ)
15 ಕ್ಕಿಂತ ಹೆಚ್ಚು ಮಹಿಳೆಯರುಮ ಕೆಲಸ ಮಾಡುವ ಕಡೆಯಲ್ಲಿ ಒಂದು ದೂರು ಸ್ವೀಕಾರ ಸಮಿತಿಯನ್ನು ರಚಿಸಿಕೊಳ್ಳಬೇಕಾಗುತ್ತದೆ. ಸಾಮಾನ್ಯ ದೂರು ಸ್ವೀಕಾರಕ್ಕೆ ಕಚೇರಿಗಳಲ್ಲಿ ಈಗಾಗಲೇ ಸಮಿತಿ ನೇಮಕ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಜಿಲ್ಲಾ ಮಟ್ಟದಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿರುವ ಮಹಿಳಾ ಮುಖಂಡರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹಾಜರಿದ್ದರು.












Click it and Unblock the Notifications