ಜೂನ್ 5ಕ್ಕೆ ರಾಜ್ಯ ಪ್ರವೇಶಿಸಲಿದೆ ಮುಂಗಾರು!
ಬೆಂಗಳೂರು, ಮೇ 22: ರಾಜ್ಯ ಮುಂಗಾರು ಪೂರ್ವ ಮಳೆ ಆರಂಭವಾಗಿ ಎರಡು ತಿಂಗಳು ಕಳೆದಿದೆ. ಇದೀಗ ನೈಋತ್ಯ ಮಾನ್ಸೂನ್ ಈ ಬಾರಿ ಮೇ 29ರಂದು ಕೇರಳ ಪ್ರವೇಶಿಸಲಿದ್ದರೂ ರಾಜ್ಯದಲ್ಲಿ ಜೂನ್ 5 ಕಾಲಿಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 40 ವರ್ಷಗಳ ದಾಖಲೆ ಪ್ರಕಾರ ಬಹುತೇಕ ಜೂನ್ 5 ಕ್ಕೆ ಮಾನ್ಸೂನ್ ರಾಜ್ಯ ಪ್ರವೇಶಿಸಿದೆ. ಈ ಬಾರಿಯೂ ಜೂನ್ ಐದಕ್ಕೇ ಕಾಲಿಟ್ಟು ಮುಂದಿನ ನಾಲ್ಕು ದಿನದಲ್ಲಿ ರಾಜ್ಯದೆಲ್ಲೆಡೆ ಪಸರಿಸಲಿದೆ ಎಂದು ಇಲಾಖೆ ಮೂಲಗಳು ಹೇಳಿವೆ.
ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಆರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೇ 26ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಪೂರ್ಣವಾಗಿ ರಾಜ್ಯಕ್ಕೆ ತಟ್ಟುವುದಿಲ್ಲ.

ಸ್ವಲ್ಪ ಪರಿಣಾಮವಾಗುವುದರಿಂದ ಮೇ 26ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೋರಾದ ಗಾಳಿ ಸಹಿತ ಮಳೆಯಾಗಲಿದೆ. ಇದೇ ಅವಧಿಯಲ್ಲಿ ಸಮುದ್ರದ ಅಲೆಗಳ ಏರಿಳಿತ ಹೆಚ್ಚಿರುತ್ತದೆ. ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮೇ 23ರವರೆಗೆ ಪಶ್ಚಿಮ ಮಧ್ಯಭಾಗ ಹಾಗೂ ನೈಋತ್ಯ ಭಾಗದಲ್ಲಿ ಮೇ 26ರವರೆಗೆ ಮಳೆಯ ಅಬ್ಬರ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications