ಭಾರಿ ಮಳೆಗೆ 4 ತಿಂಗಳಲ್ಲಿ ರಾಜ್ಯದಲ್ಲಿ ಸಾವಿಗೀಡಾದವರು ಎಷ್ಟು ಮಂದಿ?
Recommended Video
ಬೆಂಗಳೂರು, ಜು.14: ಮುಂಗಾರು ಆರಂಭಕ್ಕೂ ಮುನ್ನ ರಾಜ್ಯದ ಕೆಲವಡೆಗೆ ಭಾರಿ ಮಳೆಯಾಗಿತ್ತು, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಕೂಡ ಮಳೆಯಾಗಿತ್ತು. ಇದೀಗ ಮುಂಗಾರು ಆರಂಭವಾದ ಮೇಲೆ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಭಾಗಗಳಲ್ಲಿ ಜನರ ಹೈರಾಣಾಗಿದ್ದಾರೆ.
ವರುಣನ ಆರ್ಭಟಕ್ಕೆ ಕಳೆದ 4 ತಿಂಗಳಲ್ಲಿ ರಾಜ್ಯದೆಲ್ಲಡೆ ಒಟ್ಟು 126 ಮಂದಿ ಬಲಿಯಾಗಿದ್ದಾರೆ, 8394 ಮನೆಗಳಿಗೆ ಹಾನಿಯಾಗಿದ್ದು, 700 ಜಾನುವಾರುಗಳು ಮೃತಪಟ್ಟಿವೆ. ಈ ವರ್ಷದಲ್ಲಿ ಮುಂಗಾರು ಪೂರ್ವ ಮಳೆಯೂ ರಾಜ್ಯದೆಲ್ಲೆಡೆ ಅಧಿಕವಾಗಿತ್ತು, ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಸಿಡಿಲಿಗೆ ಅತಿ ಹೆಚ್ಚಿನ ಸಾವು ಸಂಭವಿಸಿದೆ.
ಕರ್ನಾಟಕದಾದ್ಯಂತ ಇಂದೂ ಮುಂದುವರಿಯಲಿದೆ ಧಾರಾಕಾರ ಮಳೆ
ಮೇ ಅಂತ್ಯದಿಂದ ಮುಂಗಾರು ಮಳೆ ಆರ್ಭಟ ಶುರುವಾಗಿತ್ತು, ಜೂ.1ರಿಂದ ಜು.13ರವರೆಗೆ ರಾಜ್ಯದಲ್ಲಿ ವಾಡಿಕೆಯಂತೆ ಸರಾಸರಿ 312 ಮಿ.ಮೀ ಮಳೆ ದಾಖಲಾಗಬೇಕು. ಈ ವರ್ಷ 361 ಮಿ.ಮೀ ಮಳೆ ದಾಖಲಾಗಿತ್ತು, ಶೇ.16 ಪ್ರಮಾಣದ ಮಳೆಯನ್ನು ಕಂಡಿದ್ದೇವೆ.
ಕಾವೇರಿ ಕೊಳ್ಳದ ಜನರು ಎಚ್ಚರಿಕೆಯಿಂದ ಇರಬೇಕು. ಮುಂಜಾಗರತಾ ಕ್ರಮ ಕೈಗೊಳ್ಳವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ. ಜು.18ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೂರು ವರ್ಷದಲ್ಲೇ ಅಧಿಕ
ಸಿಡಿಲು ಮಳೆಯಬ್ಬರಕ್ಕೆ 2014ರಲ್ಲಿ 218 ಜನ ಮೃತಪಟ್ಟಿದ್ದರು. ನಂತರ 2015ರಲ್ಲಿ 128ಜನ, 2016ರಲ್ಇ 113 ಜನ ಹಾಗೂ 2017ರಲ್ಲಿ 160 ಜನ ವರುಣ ಆರ್ಭಟಕ್ಕೆ ಮೃತಪಟ್ಟಿದ್ದರು. 2018ರಲ್ಲಿ ಏಪ್ರಿಲ್ನಿಂದ ಜು.13ರವರೆಗೆ ಕೇವಲ 4 ತಿಂಗಳ ಅವಧಿಯಲ್ಲಿ 126 ಜನ ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ-ಬಳ್ಳಾರಿಯಲ್ಲಿ ಹೆಚ್ಚು
ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ವಿಭಾಗ ನೀಡಿರುವ ಮಾಹಿತಿ ಪ್ರಕಾರ ಏಪ್ರಿಲ್ನಿಂದ ಜು.13ರವರೆಗೆ ಭಾರಿ ಮಳೆ, ಸಿಡಿಲಿಗೆ ದಕ್ಷಿಣ ಕನ್ನಡ ಹಾಗೂ ಬಳ್ಳಾರಿಯಲ್ಲಿ ಅತ್ಯಧಿಕ ಜನ ಅಂದರೆ ಒಂಭತ್ತು ಮಂದಿ ಮೃತಪಟ್ಟಿದ್ದಾರೆ, ವಿಜಯಪುರ, ಬೀದರ್ ತಲಾ 8, ಯಾದಗಿರಿ, ಬೆಳಗಾವಿ, ತುಮಕೂರಿನಲ್ಲಿ ತಲಾ 7, ಧಾರವಾಡ, ಗದಗ ತಲಾ 6 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದ ಒಟ್ಟು 8394 ಮನೆಗಳಿಗೆ ಹಾನಿ
ಭಾರಿ ಮಳೆಯಿಂದಾಗಿ ರಾಜ್ಯದೆಲ್ಲೆಡೆ ಒಟ್ಟು 8394 ಮೆಗಳಿಗೆ ಹಾನಿಯಾಗಿದೆ. ಕೊಪ್ಪಳದಲ್ಲಿ ಅತಿ ಹೆಚ್ಚು 1219 ಮನೆಗಳಿಗೆ ಹಾನಿಯಾಗಿದ್ದು, ರಾಯಚೂರಿನಲ್ಲಿ 1121 ಮನೆಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡದಲ್ಲಿ 929, ಧಾರವಾಡದಲ್ಲಿ 734, ಉತ್ತರ ಕನ್ನಡದಲ್ಲಿ 692 ಮನೆಗಳಿಗೆ ಹಾನಿಯಾಗಿದೆ. ಸಿಡಿಲು ಮಳೆಗೆ 700 ಜಾನುವಾರುಗಳು ಮೃತಪಟ್ಟಿವೆ.
ಮಳೆಗೆ ಮುಳುಗಿದ ದೇಗುಲಗಳು
ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಬೆಳಗಾವಿಯ ಚಿಕ್ಕೋಡಿ ಮತ್ತು ಖಾನಾಪುರ ತಾಲೂಕಿನ ನದಿಗಳಲ್ಲಿ ನೀರಿನ ಮಟ್ಟ ಮತ್ತೆ 1 ಅಡಿ ಏರಿಕೆಯಾಗಿದೆ. ಕೃಷ್ಣಾ ಮತ್ತು ಉಪನದಿಗಳಿಗೆ ನಿರ್ಮಿಸಿದ್ದ ಕೆಳಮಟ್ಟದ 6 ಸೇತುವೆಗಳು ಮುಳುಗಡೆಯಾಗಿದೆ.