ಅವಕಾಶ ಸಿಕ್ಕಾಗ ಏನೂ ಮಾಡದೆ ಓಡಿ ಹೋದವರು, ತಮ್ಮ ಸಾಧನೆ ನೋಡಿಕೊಳ್ಳಲಿ: ಶೋಭಾ ಕರಂದ್ಲಾಜೆ
ಪ್ರಧಾನಮಂತ್ರಿಗಳ ಕಾರ್ಯಕ್ರಮದಲ್ಲಿ ಭದ್ರತೆ ಹಾಗೂ ಶಿಷ್ಟಾಚಾರದಲ್ಲಿ ಯಾವುದೇ ಲೋಪದೋಷ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಬೆಳಗಾವಿ,ಫೆಬ್ರವರಿ23: ಅವಕಾಶ ಸಿಕ್ಕಾಗ ಏನೂ ಮಾಡದೆ ಓಡಿ ಹೋದವರು, ಚುನಾವಣೆ ಸಮೀಪಿಸಿದಾಗ ಅಭಿವೃದ್ಧಿ ಮಾತನಾಡುತ್ತಿದ್ದಾರೆ. ಇಲ್ಲಸಲ್ಲದ ಆರೋಪ ಮಾಡುವವರು ಒಮ್ಮೆ ಹಿಂದೆ ತಿರುಗಿ ತಮ್ಮ ಸಾಧನೆ ಸರಮಾಲೆಯನ್ನು ನೋಡಿಕೊಳ್ಳಲಿ ಎಂದು ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
ಈ ಕುರಿತು ಗುರುವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಜಾತಿವಾದ, ಧರ್ಮದ ರಾಜಕೀಯ ಮಾಡಿರುವುದೇ ದೊಡ್ಡ ಸಾಧನೆ. ಅಭಿವೃದ್ಧಿ ಏನಾದರೂ ಮಾಡಿದ್ದರೆ 2018 ರಲ್ಲಿ ಮನೆಗೆ ಮರಳುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಪ್ರತಿ ಬಾರಿಯೂ ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ, 10-11 ಬಜೆಟ್ ಮಂಡಿಸಿದ್ದೇನೆ ಎಂದೆನ್ನುವ ಸಿದ್ದರಾಮಯ್ಯ ರೈತರಿಗೆ ಏನೂ ಕೊಡಲಿಲ್ಲ. ಕೇಂದ್ರ ಸರಕಾರ ರೈತರ ಹಿತ ಕಾಪಾಡುವುದರಲ್ಲಿ ಮುಂದಿದ್ದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮದಿನದಂದೆ ಬೆಳಗಾವಿಯಿಂದಲೇ ರೈತರ ಖಾತೆಗೆ ಹಣ ಹಾಕುತ್ತಿರುವುದು ಇನ್ನೂ ಹೆಮ್ಮೆಯ ವಿಷಯ ಎಂದು ಹೇಳಿದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮ ಮುಗಿಸಿ ಪ್ರದಾನಿ ಮೋದಿ ಅವರು ಬೆಳಗಾವಿಗೆ ಬರುತ್ತಾರೆ. ಬೆಳಗಾವಿಯಿಂದ ರೈತ ಖಾತೆಗೆ ಪಿಎಂ ಕಿಸಾನ್ ಯೋಜನೆ ಯಿಂದ ರೈತರ ಖಾತೆಗೆ ಹಣ ಹಾಕಲಾಗುತ್ತದೆ. ಇನ್ನೂ ಬೆಳಗಾವಿಯಲ್ಲಿ ಮೋದಿ ಅವರ ರೋಡ್ ಶೋಗೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಭದ್ರತಾ ತಂಡ ರೋಡ್ ಶೋ ಕಾರ್ಯಕ್ರಮ, ರೂಪುರೇಷೆ ಅಂತಿಮಗೊಳಿಸುತ್ತಾರೆ ಎಂದು ಹೇಳಿದರು.
ಬೆಳಗಾವಿಗೆ ನರೇಂದ್ರ ಮೋದಿ; ಪೂರ್ವಸಿದ್ಧತೆ ಪರಿಶೀಲನಾ ಸಭೆ
ಪ್ರಧಾನಮಂತ್ರಿಗಳ ಕಾರ್ಯಕ್ರಮದಲ್ಲಿ ಭದ್ರತೆ ಹಾಗೂ ಶಿಷ್ಟಾಚಾರದಲ್ಲಿ ಯಾವುದೇ ಲೋಪದೋಷ ಆಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಿದರು.

ಇನ್ನೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳನ್ನು ಸುರಕ್ಷಿತವಾಗಿ ಕರೆತಂದು ವಾಪಸ್ ಕರೆದುಕೊಂಡು ಹೋಗಲು ಅನುಕೂಲವಾಗುವಂತೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು.
ಪ್ರಧಾನಮಂತ್ರಿಗಳು ಸಂಚರಿಸಲಿರುವ ಮಾರ್ಗಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ದುರಸ್ತಿ ಅಥವಾ ನಿರ್ಮಾಣ ಕಾಮಗಾರಿ ನಡೆಸಬೇಕು. ಜಿಲ್ಲೆಯ ವಿವಿಧ ಭಾಗಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳು, ಸಾರ್ವಜನಿಕರಿಗೆ ಶುದ್ಧ ನೀರು, ಗುಣಮಟ್ಟದ ಊಟವನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿಯೊಂದು ಸ್ಥಳಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಂಡವನ್ನು ನಿಯೋಜಿಸಬೇಕು ಎಂದರು.
ಗಣ್ಯರು ಮಾತ್ರವಲ್ಲದೇ ಸಾರ್ವಜನಿಕರಿಗೂ ಅನುಕೂಲವಾಗುವಂತೆ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲು ವೈದ್ಯಕೀಯ ತಂಡಗಳು ಮತ್ತು ಆ್ಯಂಬ್ಯುಲೆನ್ಸ್ ಗಳನ್ನು ನಿಯೋಜಿಸಬೇಕು.
ಎಸ್.ಪಿ.ಜಿ. ತಂಡ ಬಂದ ನಂತರ ಕೂಲಂಕುಷವಾಗಿ ಚರ್ಚಿಸಿ ಕಾರ್ಯಕ್ರಮದ ಅಂತಿಮ ರೂಪುರೇಷೆಗಳನ್ನು ರಚಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.












Click it and Unblock the Notifications