'ಸದೃಢ ಭಾರತಕ್ಕಾಗಿ ಮೋದಿ ಪ್ರಧಾನಿಯಾಗಲಿ'

ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಮತ್ತು ಬಿಜೆಪಿಯ ಮೋದಿ ನಡುವೆ ಭೂಮಿ ಆಕಾಶದ ಅಂತರವಿದೆ. ಮೋದಿ ಅವರದು ಹಿಮಾಲಯದೆತ್ತರದ ವಿರಾಟ್ ವ್ಯಕ್ತಿತ್ವ. ಅವರ ಮುಂದೆ ರಾಹುಲ್, ಓರ್ವ ಬಾಲಕನಂತೆ ಕಾಣುತ್ತಾರೆ ಎಂದು ಬಾಬಾ ರಾಮದೇವ್ ವ್ಯಂಗ್ಯವಾಡಿದರು.
ಇಂತಹ ಪರಿಸ್ಥಿತಿಯಲ್ಲಿ ಗುಜರಾತಿನ ಹಾಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದು ಖಚಿತ. ಇದೇ ವೇಳೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಆ ಪಕ್ಷದ ಅನೇಕ ಘಟಾನುಘಟಿಗಳು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಲಿದ್ದಾರೆ ಎಂದು ಯೋಗಗುರು ಬಾಬಾ ರಾಮದೇವ್ ಭವಿಷ್ಯ ನುಡಿದಿದ್ದಾರೆ.
ಉತ್ತರ ಕರ್ನಾಟಕದ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಬಾಬಾ ರಾಮದೇವ್ ಅವರು ಸುದ್ದಿಗಾರರೊಂದಿಗೆ ತಮ್ಮ ಮುಕ್ತ ಅಭಿಪ್ರಾಯವನ್ನು ಹಂಚಿಕೊಂಡರು.
ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ:
ಕರ್ನಾಟಕದಲ್ಲಿಯೂ ಕಾಂಗ್ರೆಸ್ ಅಳಿಯಬೇಕೆಂದರೆ ಯಡಿಯೂರಪ್ಪ ಅವರನ್ನು ಬಿಜೆಪಿ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಮರಳಿ ಪಕ್ಷಕ್ಕೆ ಸೇರಿಸಿಕೊಂಡರೆ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಯಡಿಯೂರಪ್ಪ ಅವರ ಮೇಲೆ ಹಲವಾರು ಆಪಾದನೆಗಳಿದ್ದರೂ ತಪ್ಪು ತಿದ್ದಿಕೊಳ್ಳಲು ಇದೊಂದು ಅವಕಾಶ ಅವರ ಪಾಲಿಗಾಗಲಿದೆ ಎಂದು ಅವರು ಹೇಳಿದರು.
ಸೋನಿಯಾ, ರಾಹುಲ್ ವಿರುದ್ಧ ನಾನೇ ಪ್ರಚಾರ ನಡೆಸುವೆ:
ಕಾಂಗ್ರೆಸ್ ಕೇವಲ 50 ರಿಂದ 100 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ರಾಯ್ ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಹಾಗೂ ಅಮೇಠಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಸೋಲಲಿದ್ದಾರೆ. ಸೋನಿಯಾ, ರಾಹುಲ್ ವಿರುದ್ಧ ಸಕ್ರಿಯವಾಗಿ ನಾನೇ ಪ್ರಚಾರ ನಡೆಸುವೆ. ಭಾರತ ಸ್ವಾಭಿಮಾನಿ ಕಾರ್ಯಕರ್ತರು ಈ ಎರಡೂ ಕ್ಷೇತ್ರದಲ್ಲಿ ಮನೆಮನೆಗೆ ಭೇಟಿ ನೀಡಿ, ಕಾಂಗ್ರೆಸ್ ಹಗರಣಗಳ ಬಗ್ಗೆ ಜನಜಾಗೃತಿ ಮೂಡಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಮುಂಚೆಯೇ ಬಿಜೆಪಿಯ ನರೇಂದ್ರ ಮೋದಿ ಅವರೇ ಪ್ರಧಾನಿಯೆಂಬ ನಿರ್ಧಾರವನ್ನು ಮತದಾರರು ಮಾಡಿಬಿಟ್ಟಿದ್ದಾರೆ. ಬಿಜೆಪಿಗೆ 300ಕ್ಕಿಂತಲೂ ಹೆಚ್ಚು ಸ್ಥಾನ ದೊರಕಲಿವೆ ಎಂದು ಹೇಳಿದರು.












Click it and Unblock the Notifications