ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಯತ್ನಾಳ್ ಬಹುತೇಕ ಫಿಕ್ಸ್
ಕರ್ನಾಟಕ ಬಿಜೆಪಿಯಲ್ಲಿ ಸದ್ಯ ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆಗಳು ಮುನ್ನೆಲೆಯಲ್ಲಿವೆ. ಬಣ ಬಡಿದಾಟಕ್ಕೂ ಕಾರಣವಾಗಿರುವ ಈ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೂಲಕವೇ ಎಲ್ಲ ಕಚ್ಚಾಟ ಶಮನಗೊಳಿಸಲು ಹೈಕಮಾಂಡ್ ಕೂಡ ತಲೆಕೆಡಿಸಿಕೊಂಡಿದೆ. ವಿಜಯೇಂದ್ರ ಅವರ ವಿರುದ್ಧ ಸದಾ ಸಿಡಿಯುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಬಹುತೇಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ದಟ್ಟವಾಗಿದೆ.
ಇಲ್ಲಿವರೆಗೆ ಯತ್ನಾಳ್ ಅವರು ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪಿರಲಿಲ್ಲ. ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದರು. ಇದೀಗ ಅವರೇ ನೇರವಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೇರುವ ಬಗ್ಗೆ ಮಾತನಾಡಿದ್ದಾರೆ. ಯತ್ನಾಳ್ ರಾಜ್ಯಾಧ್ಯಕ್ಷರಾಗ್ತಾರೆ ಎಂದು ಇಲ್ಲಿವರೆಗೆ ಇದ್ದ ಗುಸುಗುಸು ಬಹುತೇಕ ಖಚಿತವಾಗುತ್ತಿದೆ.

ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿಂದೂ ಹುಲಿ ಯತ್ನಾಳ್ ಅವರಿಗೆ ಪಟ್ಟ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ಸಿದ್ಧವಾಗಿದ್ದೇನೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ ಎನ್ನುವ ಮೂಲಕ ಯತ್ನಾಳ್ ಸಂಚಲನ ಸೃಷ್ಟಿಸಿದ್ದಾರೆ.
ಅಲ್ಲದೆ ಬಿಜೆಪಿ ನಿಷ್ಠಾವಂತರ ಗುಂಪಿನ ಕೋರ್ ಕಮಿಟಿಯಲ್ಲಿ ನನ್ನ ಹೆಸರು ಅಂತಿಮವಾದರೆ ಸ್ಪರ್ಧಿಸುವುದು ಖಚಿತ. ಹಾಗಾಗಿ ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ರೆಡಿ ಎಂದು ತೊಡೆತಟ್ಟಿದ್ದಾರೆ. ಯತ್ನಾಳ್ ಅವರ ನಿಷ್ಠಾವಂತರ ಬಣದಲ್ಲಿ ಸದ್ಯ ಯತ್ನಾಳ್ ಅವರ ಹೆಸರೇ ಮುಂಚೂಣಿಯಲ್ಲಿರುವುದರಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಅವರನ್ನೇ ಹಲವರು ಸೂಚಿಸುತ್ತಿದ್ದಾರೆ. ಈ ಹಿನ್ನೆಲೆ ಅವರೇ ಮುಂದಿನ ರಾಜ್ಯಾಧ್ಯಕ್ಷರಾಗುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.
ಯತ್ನಾಳ್ ಅವರ ಬಣದಿಂದ ಕುಮಾರ್ ಬಂಗಾರಪ್ಪ ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬ ಚರ್ಚೆ ನಡೆಯುತ್ತಿದೆ. ಆದರೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಈ ಬಣ ಅಖಾಡದಲ್ಲಿ ತೊಡೆ ತಟ್ಟಿದ್ದು, ಯತ್ನಾಳ್ ಅವರೇ ರಾಜ್ಯಾಧ್ಯಕ್ಷರಾಗುವುದು ಸೂಕ್ತ. ಅವರಲ್ಲಿ ಆ ಸಂಘಟನಾ ಶಕ್ತಿ ಇದೆ ಎಂದು ಹಲವರು ಬೆನ್ನಿಗೆ ನಿಂತಿದ್ದಾರೆ.

ಈ ಹಿನ್ನೆಲೆ ಯತ್ನಾಳ್ ಅವರು ಕೂಡ ವಿಜಯೇಂದ್ರ ವಿರುದ್ಧ ಅಂದಿನಿಂದಲೂ ಜಿದ್ದಾಜಿದ್ದಿನಲ್ಲಿದ್ದು, ಒಂದು ವೇಳೆ ಈ ಬಣದಿಂದ ಹೆಸರು ಅಂತಿಮವಾದರೆ ಅದು ಯತ್ನಾಳ್ ಅವರದ್ದೇ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಯತ್ನಾಳ್ ಅವರೇ ಈಗ ಖುದ್ದಾಗಿ ನಾನೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತ, ಗೆಲುವು ನಿಶ್ಚಿತ ಎನ್ನುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೇರುವ ಹುರುಪಿನಲ್ಲಿದ್ದಾರೆ.
ಬಿಜೆಪಿಯಲ್ಲೇ ಹಲವು ನಾಯಕರು ಯತ್ನಾಳ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯತ್ನಾಳ್ ಬಂದರೆ ಪಕ್ಷ ಸಂಘಟನೆ ಬಲಗೊಳ್ಳಲಿದೆ. ಆಡಳಿತ ಪಕ್ಷದ ಬೆವರಳಿಸಲು ಕೂಡ ಯತ್ನಾಳ್ ಅವರೇ ಸಮರ್ಥರು. ಆ ಸಾಮರ್ಥ್ಯ ಸದ್ಯಕ್ಕೆ ಬಿಜೆಪಿಯಲ್ಲಿರುವುದು ಯತ್ನಾಳ್ ಅವರಿಗೆ ಮಾತ್ರವೇ ಎನ್ನುವ ಮಾತುಗಳು ಕೂಡ ಚಾಲ್ತಿಯಲ್ಲಿವೆ.
ಇದು ಹೈಕಮಾಂಡ್ ಗಮನಕ್ಕೆ ಕೂಡ ಬಂದಿದ್ದು, ಯತ್ನಾಳ್ ಅವರು ಹೇಳಿಕೊಳ್ಳುವ ನಿಷ್ಠೆಯನ್ನು ಪರಿಗಣಿಸಿ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಲು ಚಿಂತನೆಯಲ್ಲಿದೆ ಎಂದೂ ಹೇಳಲಾಗುತ್ತಿದೆ. ಇನ್ನೂ ಕೆಲವರು ಆರ್.ಅಶೋಕ್ ಬದಲಿಗೆ ವಿಪಕ್ಷ ನಾಯಕ ಸ್ಥಾನಕ್ಕೂ ಯತ್ನಾಳ್ ಅವರ ಹೆಸರನ್ನೇ ಸೂಚಿಸುತ್ತಿದ್ದಾರೆ. ಸದ್ಯ ಯತ್ನಾಳ್ ಅವರು ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಂತೂ ಇದ್ದಾರೆ. ಮತ್ತೊಂದೆಡೆ ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರಿಯುತ್ತೇನೆ ಎನ್ನುವ ವಿಶ್ವಾಸದಲ್ಲಿ ವಿಜಯೇಂದ್ರ ಇದ್ದಾರೆ. ಇವರೇ ಮುಂದುವರಿಯುವುದಿದ್ದರೆ ಹೈಕಮಾಂಡ್ ಚುನಾವಣೆ ನಡೆಸುವುದಾಗಿ ಏಕೆ ಹೇಳುತ್ತಿದೆ? ಎನ್ನುವ ಅನುಮಾನ ಕೂಡ ಹಲವರಲ್ಲಿದೆ.












Click it and Unblock the Notifications