ಕೆಎಂಡಿಸಿ ಯಲ್ಲಿ ಶೇ.80 ರಷ್ಟು ಸಾಲ ವಸೂಲಾತಿಗೆ ಟಾರ್ಗೆಟ್ ನೀಡಿದ ಸಚಿವ ಜಮೀರ್ ಅಹಮದ್
ಬೆಂಗಳೂರು, ಜುಲೈ 25: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಲಾಗಿರುವ ಸಾಲ ವಸೂಲಾತಿ ಬಗ್ಗೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಕೆಎಂಡಿಸಿ ಭವನದಲ್ಲಿ ಮಂಗಳವಾರ ಜಿಲ್ಲಾ ವ್ಯವಸ್ಥಾಪಕರು ಹಾಗೂ ವಸೂಲಾತಿ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.80 ರಷ್ಟು ಪ್ರಗತಿ ಸಾಧಿಸಲೇಬೇಕು ಎಂದು ಟಾರ್ಗೆಟ್ ನೀಡಿದರು.

ಮುಂದಿನ ವರ್ಷದ ಮಾರ್ಚ್ ವರೆಗೂ ಜಿಲ್ಲಾ ವ್ಯವಸ್ಥಾಪಕರು ಹಾಗೂ ವಸೂಲಾತಿ ಅಧಿಕಾರಿಗಳನ್ನು ಎಂತಹ ಒತ್ತಡ ಬಂದರೂ ವರ್ಗಾವಣೆ ಮಾಡಬೇಡಿ ಎಂದು ಇಲಾಖೆ ಕಾರ್ಯದರ್ಶಿ ಯವರಿಗೆ ಸೂಚನೆ ನೀಡಿದ ಸಚಿವರು, ಅಷ್ಟರೊಳಗೆ ಈಗ ಇದ್ದವರು ಸಾಲ ವಸೂಲಾತಿಯಲ್ಲಿ ಪ್ರಗತಿ ಸಾಧಿಸಲೇಬೇಕು ಎಂದು ಗಡುವು ನೀಡಿದರು.
ನಿಗಮದಿಂದ ಶಿಕ್ಷಣ, ಉದ್ದಿಮೆ, ಸ್ವಯಂ ಉದ್ಯೋಗ ಸೇರಿ ವಿವಿಧ ಯೋಜನೆಗಳಡಿ ಪಡೆದಿರುವ 892 ಕೋಟಿ ರೂ. ಸಾಲ ವಸೂಲಾಗಬೇಕಿದ್ದು, ಜಿಲ್ಲಾ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದೀರಾ. ಸಾಲ ಕೊಡುವುದಷ್ಟೇ ನಿಮ್ಮ ಕೆಲಸವೇ ಎಂದು ಪ್ರಶ್ನಿಸಿದ ಅವರು, ವಸೂಲಾತಿ ಪ್ರಮಾಣ ಶೇ. 1 ರಿಂದ 10 ರಷ್ಟು ಇದ್ದರೆ ನಮಗೆ ಅಧಿಕಾರಿ ಸಿಬ್ಬಂದಿ ಯಾಕೆ ಬೇಕು. ಇಷ್ಟೊಂದು ವೇತನ ನೀಡಿ ಇಟ್ಟು ಕೊಳ್ಳಬೇಕಾ. ಇನ್ಮುಂದೆ ಈ ರೀತಿಯ ನಿರ್ಲಕ್ಷ್ಯ ಸಹಿಸಲ್ಲ ಎಂದು ಹೇಳಿದರು.
ಇನ್ಮುಂದೆ ಪ್ರತಿ ತಿಂಗಳು ಜಿಲ್ಲಾ ವ್ಯವಸ್ಥಾಪಕರು ಹಾಗೂ ವಸೂಲಾತಿ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಬೇಕು. ಉತ್ತಮ ಸಾಧನೆ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು. ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಗಳ ಅಧಿಕಾರಿಗಳನ್ನು ಶ್ಲಾಘಿಸಿದ ಸಚಿವರು, ಕಳಪೆ ಪ್ರದರ್ಶನ ತೋರಿರುವ ಬಳ್ಳಾರಿ, ಬೀದರ್, ಬೆಳಗಾವಿ, ಬೆಂಗಳೂರು ಕೇಂದ್ರ, ಶಿವಮೊಗ್ಗ ಜಿಲ್ಲೆ ಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಾಲ ವಸೂಲಾತಿಯಲ್ಲಿ ಉತ್ತಮ ಪ್ರಗತಿ ತೋರಿದ್ದ ಕೆಲವು ಜಿಲ್ಲೆ ಗಳ ಅಧಿಕಾರಿಗಳು ನಿವೃತ್ತಿ ಆಗಿದ್ದು, ಅವಕಾಶ ಇದ್ದರೆ ಅವರನ್ನು ಗುತ್ತಿಗೆ ಆಧಾರದಲ್ಲಿ ಮರು ನೇಮಕ ಮಾಡಿಕೊಳ್ಳುವಂತೆ ಇದೇ ಸಂದರ್ಭದಲ್ಲಿ ಸಚಿವರು ನಿರ್ದೇಶನ ನೀಡಿದರು.
ಸಭೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಕಳೆದ ಐದು ವರ್ಷದ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಅಂಕಿ ಸಂಖ್ಯೆ ಸಮೇತ ಮಾಹಿತಿ ಪಡೆದರು. ಸಾಲ ವಸೂಲಾತಿ ಗೆ ಎದುರಾಗಿರುವ ಸಮಸ್ಯೆ ತೊಡಕು ಬಗ್ಗೆಯೂ ವಿವರ ಪಡೆದರು. ಇನ್ನೂ ಸಭೆಯಲ್ಲಿ ಅಲ್ಪಸಂಖ್ಯಾತರ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಸೇರಿದಂತೆ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications